
ಅಕ್ಕಿ
ಬೆಂಗಳೂರು: ಅನ್ನಭಾಗ್ಯ ಯೋಜನೆ ಅಕ್ಕಿಯ ಅಕ್ರಮ ಸಾಗಣೆಯನ್ನು ಪತ್ತೆಹಚ್ಚಲು ತೆರಳಿದ್ದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ನಾಲ್ವರ ವಿರುದ್ಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಗುರುವಾರ ಎಫ್ಐಆರ್ ದಾಖಲಾಗಿದೆ.
ಅಲೀಂ, ಫಯಾಜ್, ನಯಾಜ್, ಸೋಹಿಲ್ ವಿರುದ್ಧ ಪ್ರಕರಣ ದಾಖಲಾಗಿದೆ.
ಪಕ್ಷದ ಕಾರ್ಯಕರ್ತರಾದ ಸೈಯದ್ ಪರ್ವೀಜ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ದೂರಿನಲ್ಲಿ ಏನಿದೆ?: ‘ಅನ್ನಭಾಗ್ಯ ಯೋಜನೆ ಅಕ್ಕಿ ಅಕ್ರಮ ಸಾಗಣೆಯ ಬಗ್ಗೆ ಮಾಹಿತಿ ಬಂದಿತ್ತು. ಮಾಹಿತಿ ಆಧರಿಸಿ, ಅಕ್ಕಿಯ ಅಕ್ರಮ ಸಾಗಣೆ ತಡೆಯಲು ಅಣ್ಣಯ್ಯ ರೆಡ್ಡಿ ಪೋಸ್ಟ್ ಆಫೀಸ್ ರಸ್ತೆಗೆ ತೆರಳಿದ್ದೆವು. ಪರಿಶೀಲನೆ ನಡೆಸಿದಾಗ ಲಾರಿಯಲ್ಲಿ ಅಕ್ಕಿಯ ಅಕ್ರಮ ಸಾಗಣೆ ಕಂಡುಬಂತು. ಅಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲು 112ಗೆ ಕರೆ ಮಾಡಿದ್ದೆವು. ಸ್ಥಳಕ್ಕೆ ಕೋಣನಕುಂಟೆ ಹಾಗೂ ಕುಮಾರಸ್ವಾಮಿ ಲೇಔಟ್ ಠಾಣೆಯ ಪೊಲೀಸರು ಬಂದರು. ಆಗ ಗಲಾಟೆ ಮಾಡುವ ಉದ್ಧೇಶದಿಂದ ಆರೋಪಿಗಳು ಗುಂಪುಕಟ್ಟಿಕೊಂಡು ಬಂದು ಪಕ್ಷದ ಕಾರ್ಯಕರ್ತ ಎಂ.ಧನಂಜಯ್, ಅಶೋಕ್, ಖಲಂದರ್, ಶರಣಪ್ಪ, ಜೀವನ್ ಅವರ ಮೇಲೆ ಹಲ್ಲೆ ನಡೆಸಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
‘ಅಕ್ರಮ ಅಕ್ಕಿ ಸಾಗಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಅಲೀಂ ಅವರ ಕೈವಾಡ ಇದೆ. ಮಧ್ಯರಾತ್ರಿ ಫಯಾಜ್ ಎಂಬಾತ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.