ಬೆಂಗಳೂರು: ‘ದಿಣ್ಣೂರು ರಸ್ತೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ಕಾಲೇಜಿನ ವರೆಗಿನ ರಸ್ತೆ ವಿಸ್ತರಣೆಯ ಕಾಮಗಾರಿ ಮೊತ್ತ ₹65 ಕೋಟಿ. ಆದರೆ, ಭೂಸ್ವಾಧೀನಕ್ಕೆ ₹770 ಕೋಟಿ ಪಾವತಿಸಬೇಕಿದೆ. ಅಷ್ಟು ಹಣವನ್ನು ಎಲ್ಲಿಂದ ತರುವುದು’ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಸಹಾಯಕತೆ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ನ ಅಖಂಡ ಶ್ರೀನಿವಾಸಮೂರ್ತಿ ಪ್ರಶ್ನೆಗೆ ಉತ್ತರಿಸಿದ ಅವರು, ‘ಟಿಡಿಆರ್ ಪಡೆಯಲು ಭೂಮಾಲೀಕರು ನಿರಾಕರಿಸುತ್ತಿದ್ದಾರೆ. ಮೆಟ್ರೊ ಯೋಜನೆಯಲ್ಲಿ ನೀಡಿರುವಂತೆ ನಗದು ರೂಪದಲ್ಲಿ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ, ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದೆ’ ಎಂದರು.
‘ಈ ರಸ್ತೆಯನ್ನು 24 ಮೀಟರ್ ವಿಸ್ತರಣೆ ಮಾಡಬೇಕಿದೆ. ಅದಕ್ಕಾಗಿ 601 ಸ್ವತ್ತುಗಳನ್ನು ಗುರುತಿಸಿದ್ದು, 598 ಖಾಸಗಿ ಸ್ವತ್ತುಗಳಾಗಿವೆ. 43,033 ಚದರ ಮೀಟರ್ ಭೂಸ್ವಾಧೀನ ಮಾಡಬೇಕಿದೆ’ ಎಂದರು. ಭೂಮಾಲೀಕರು ಟಿಡಿಆರ್ಗೆ ಒಪ್ಪಿದರೆ ಸಮಸ್ಯೆ ಪರಿಹಾರ ಆಗುತ್ತದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.