ADVERTISEMENT

ನೆಲಮಂಗಲ | ಚತುಷ್ಪಥ ರಸ್ತೆ ನಿರ್ಮಾಣ; 154 ಮರಗಳು ಧರೆಗೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2025, 1:08 IST
Last Updated 30 ಜನವರಿ 2025, 1:08 IST
 ಸೊಂಡೆಕೊಪ್ಪ ರಸ್ತೆಯಲ್ಲಿ ಚತುಷ್ಪಥ ರಸ್ತೆ ಕಾಮಗಾರಿಗಾಗಿ ಮರಗಳನ್ನು ಕಡಿದಿರುವುದು
 ಸೊಂಡೆಕೊಪ್ಪ ರಸ್ತೆಯಲ್ಲಿ ಚತುಷ್ಪಥ ರಸ್ತೆ ಕಾಮಗಾರಿಗಾಗಿ ಮರಗಳನ್ನು ಕಡಿದಿರುವುದು   

ನೆಲಮಂಗಲ: ಪಟ್ಟಣದ ಸೊಂಡೆಕೊಪ್ಪ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗಾಗಿ ರಸ್ತೆ ಬದಿಯಲ್ಲಿದ್ದ ಸುಮಾರು 154 ಮರಗಳನ್ನು ಕಡಿಯಲಾಗಿದೆ.

ಪಟ್ಟಣದಿಂದ ತಾವರೆಕೆರೆ, ಬೆಂಗಳೂರು, ಮಾಗಡಿಗೆ ಸಂಪರ್ಕಕಲ್ಪಿಸುವ ಈ ರಸ್ತೆಯ ಎರಡೂ ಬದಿಯಲ್ಲಿ 30 ರಿಂದ 40 ವರ್ಷಗಳಷ್ಟು ಹಳೆಯದಾದ ಮರಗಳಿದ್ದವು. 20 ಮೀಟರ್‌ ಅಗಲದ ರಸ್ತೆ ನಿರ್ಮಿಸುವುದಕ್ಕಾಗಿ ನೆರಳು ನೀಡುತ್ತಿದ್ದ ರಸ್ತೆ ಬದಿಯ ಮರಗಳನ್ನು ಕಡಿಯಲಾಗುತ್ತಿದೆ. 

ಸೊಂಡೆಕೊಪ್ಪ ರಸ್ತೆಯ ನಗರಸಭೆ ವ್ಯಾಪ್ತಿವರೆಗೆ 3.29 ಕಿ.ಮೀ ರಸ್ತೆ ನಿರ್ಮಾಣವಾಗುತ್ತಿದ್ದು, ಇದರಲ್ಲಿ ರಸ್ತೆ ವಿಭಜಕ, ಪಾದಚಾರಿ ಮಾರ್ಗ ಸೇರಿದಂತೆ 20 ಮೀಟರ್‌ ಅಗಲದ ರಸ್ತೆ ನಿರ್ಮಿಸುವ ಉದ್ದೇಶವಿದೆ. ರಸ್ತೆಯ  ಎರಡೂ ಬದಿಗೂ ವಿದ್ಯುತ್‌ ದೀಪಗಳನ್ನು ಅಳವಡಿಸುವುದು ಯೋಜನೆಯಲ್ಲಿದೆ.

ADVERTISEMENT

‘ನಿಯಮಾನಸಾರ ಮರಗಳ ಸಮೀಕ್ಷೆ ನಡೆಸಿ, ಹಿರಿಯ ಅಧಿಕಾರಿಗಳ ಅನುಮತಿ ಮೇರೆಗೆ ಮರಗಳನ್ನು ತೆರವುಗೊಳಿಸಲಾಗುತ್ತಿದೆ’ ವಲಯ ಅರಣ್ಯಾಧಿಕಾರಿ ಮಂಜುನಾಥ್‌ತಿಳಿಸಿದರು.

‘ತೆರವುಗೊಳಿಸುವ ಒಂದು ಮರಕ್ಕೆ ಪರಿಹಾರವಾಗಿ ಹತ್ತು ಮರಗಳನ್ನು ಬೆಳೆಸುವುದಕ್ಕೆ ಅಗತ್ಯವಿರುವ ಹಣವನ್ನು ಅರಣ್ಯ ಇಲಾಖೆಗೆ ಸಂದಾಯ ಮಾಡಿದ್ದೇವೆ. ಅರಣ್ಯೀಕರಣದ ಭಾಗವಾಗಿ ಅವಶ್ಯಕತೆ ಇರುವ ಕಡೆ ಇಲಾಖೆಯವರು ಗಿಡಗಳನ್ನು ನಡೆಸುತ್ತಾರೆ. ಎಲ್ಲ ಹಂತದಲ್ಲೂ ಅನುಮತಿಯನ್ನು ಪಡೆದೇ ಕಾಮಗಾರಿ ಮಾಡುತ್ತಿದ್ದೇವೆ’ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸೋಮಶೇಖರಪ್ಪ ತಿಳಿಸಿದರು.

ನೆಲಮಂಗಲ ತಾಲ್ಲೂಕಿನ ಸಮಗ್ರ ಅಭಿವೃದ್ಧಿಯ ಭಾಗವಾಗಿ ₹17 ಕೋಟಿ ವೆಚ್ಚದಲ್ಲಿ ಸೊಂಡೆಕೊಪ್ಪ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ.
ಎನ್‌.ಶ್ರೀನಿವಾಸ್, ಶಾಸಕ, ನೆಲಮಂಗಲ

ಸೊಂಡೆಕೊಪ್ಪ ರಸ್ತೆಯಲ್ಲಿ ಕೋರ್ಟ್‌, ದೇವಾಲಯ, ಶಾಲಾ–ಕಾಲೇಜು, ಕಲ್ಯಾಣ ಮಂಟಪಗಳು, ಕೈಗಾರಿಕೆಗಳಿವೆ. ಇದೇ ಮಾರ್ಗವಾಗಿ ಹಲವರು ಬೆಂಗಳೂರಿಗೆ ಸಂಚರಿಸುತ್ತಾರೆ. ರಸ್ತೆ ಕಿರಿದಾಗಿದ್ದರಿಂದ ಸಂಚಾರ ದಟ್ಟಣೆಯಾಗುತ್ತಿದೆ. ಚತುಷ್ಪಥ ರಸ್ತೆ ನಿರ್ಮಾಣವಾದರೆ ಎಲ್ಲದಕ್ಕೂ ಪರಿಹಾರ ದೊರೆಯಲಿದೆ’ ಎಂದು ಸ್ಥಳೀಯ ನಿವಾಸಿ ಸ್ವಾಮಿ ಹೇಳಿದರು. ‘ಕೆಲವರು ರಸ್ತೆ ವಿಸ್ತರಣೆಯಿಂದ ಮರಗಳು ನಾಶವಾಗುತ್ತಿದೆ ಎನ್ನುತ್ತಿದ್ದಾರೆ. ರಸ್ತೆ ವಿಸ್ತರಣೆಯಾದ ಮೇಲೂ ರಸ್ತೆ ಬದಿಗಳಲ್ಲಿ ಮರಗಳನ್ನು ಬೆಳೆಸಬಹುದು’ ಎಂದು ಅವರು ಸಲಹೆ ನೀಡಿದರು.

ಚತುಷ್ಪಥ ರಸ್ತೆ ಕಾಮಗಾರಿಗೆ ಸೊಂಡೆಕೊಪ್ಪ ರಸ್ತೆಯಲ್ಲಿ ಮರಗಳನ್ನು ಕಡಿದಿರುವುದು
ಚತುಷ್ಪಥ ರಸ್ತೆ ಕಾಮಗಾರಿಗೆ ಸೊಂಡೆಕೊಪ್ಪ ರಸ್ತೆಯಲ್ಲಿ ಮರಗಳನ್ನು ಕಡಿದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.