ADVERTISEMENT

ಮನೆಗೆ ನುಗ್ಗಿ ದರೋಡೆ: ರೌಡಿ ಬಂಧನ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2022, 20:14 IST
Last Updated 30 ಡಿಸೆಂಬರ್ 2022, 20:14 IST
   

ಬೆಂಗಳೂರು: ವಿದ್ಯಾರಣ್ಯಪುರ ಬಳಿಯ ಸಾಯಿನಗರದ ಮನೆಯೊಂದಕ್ಕೆ ನುಗ್ಗಿ ದರೋಡೆ ಮಾಡಿದ್ದ ಆರೋಪಿ ಎಲ್‌. ಬಾಲಕೃಷ್ಣ ಅಲಿಯಾಸ್ ಬಾಲನನ್ನು (24) ಪೊಲೀಸರು ಬಂಧಿಸಿದ್ದಾರೆ.

‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿವಾಸಿ ಬಾಲಕೃಷ್ಣ, ಅಪರಾಧ ಹಿನ್ನೆಲೆಯುಳ್ಳವ. ಪೀಣ್ಯ ಹಾಗೂ ಬಾಗಲಗುಂಟೆ ಠಾಣೆಯ ರೌಡಿ ಪಟ್ಟಿಯಲ್ಲಿ ಈತನ ಹೆಸರಿತ್ತು. ಸದ್ಯ ಈತನಿಂದ ₹ 3.50 ಲಕ್ಷ ಮೌಲ್ಯದ 70 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ನ. 25ರಂದು ಮಹಿಳೆಯೊಬ್ಬರೇ ಮನೆಯಲ್ಲಿದ್ದರು. ಮನೆಗೆ ನುಗ್ಗಿದ್ದ ಬಾಲಕೃಷ್ಣ, ಮಹಿಳೆ ಮೇಲೆ ಹಲ್ಲೆ ಮಾಡಿದ್ದ. ನಂತರ, ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದ. ಕೃತ್ಯದ ಸಂಬಂಧ ಮಹಿಳೆ ದೂರು ನೀಡಿದ್ದರು. ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ದರೋಡೆ, ಸುಲಿಗೆ ಮಾಡುವುದನ್ನೇ ಆರೋಪಿ ವೃತ್ತಿ ಮಾಡಿಕೊಂಡಿದ್ದ. ಅಮೃತಹಳ್ಳಿ, ಮಾದನಾಯಕನಹಳ್ಳಿ, ಬಾಗಲಗುಂಟೆ, ಮಹಾಲಕ್ಷ್ಮಿ ಲೇಔಟ್, ಪೀಣ್ಯ, ಸೋಲದೇವನಹಳ್ಳಿ, ಮಂಡ್ಯ ಠಾಣೆಗಳಲ್ಲಿ ರೌಡಿ ಬಾಲಕೃಷ್ಣ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.