ಹೈದರ್ ಅಲಿ
ಬೆಂಗಳೂರು: ಅಶೋಕನಗರದ ಗರುಡಾ ಮಾಲ್ ಬಳಿ ಬೈಕ್ನಲ್ಲಿ ತೆರಳುತ್ತಿದ್ದ ರೌಡಿಯನ್ನು ಶನಿವಾರ ಮಧ್ಯರಾತ್ರಿ ಅಡ್ಡಗಟ್ಟಿ ಕೊಲೆ ಮಾಡಲಾಗಿದೆ. ಕೃತ್ಯ ಎಸಗಿದ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಆನೆಪಾಳ್ಯದ ನಿವಾಸಿ ಹೈದರ್ ಅಲಿ(38) ಕೊಲೆಯಾದ ರೌಡಿ.
ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಬ್ವೊಂದರಲ್ಲಿ ಜಿಮ್ ಮಾಲೀಕನೂ ಆಗಿರುವ ಸ್ನೇಹಿತನ ಜತೆಗೆ ಪಾರ್ಟಿ ನಡೆಸಿದ್ದ ಹೈದರ್ ಅಲಿ, ಬೈಕ್ನಲ್ಲಿ ಆನೆಪಾಳ್ಯದ ಮನೆಗೆ ತೆರಳುತ್ತಿದ್ದ. ಫುಟ್ಬಾಲ್ ಮೈದಾನದ ಬಳಿಯ ತಿರುವಿನಲ್ಲಿ ಬೈಕ್ ಅನ್ನು ಅಡ್ಡಗಟ್ಟಿದ ಆರೋಪಿಗಳು, ಕೆಳಕ್ಕೆ ಇಳಿದು ದೂರಕ್ಕೆ ಹೋಗುವಂತೆ ಜೊತೆಗಿದ್ದ ಹೈದರ್ ಸ್ನೇಹಿತನಿಗೆ ಸೂಚಿಸಿದ್ದರು. ನಂತರ, ಮಾರಕಾಸ್ತ್ರಗಳಿಂದ ಹೈದರ್ ಅಲಿ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಳಿಕ ಸ್ನೇಹಿತನಿಗೂ ದುಷ್ಕರ್ಮಿಗಳು ಥಳಿಸಿ ಹೋಗಿದ್ದಾರೆ. ಸ್ನೇಹಿತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಸ್ನೇಹಿತನ ಜತೆಗೆ ಹೈದರ್ ಅಲಿ ಪಬ್ಗೆ ತೆರಳುತ್ತಿರುವುದನ್ನು ಗಮನಿಸಿದ್ದ ಆರೋಪಿಗಳು ಹೊರಕ್ಕೆ ಬರುವುದನ್ನೇ ಕಾದಿದ್ದರು. ತಕ್ಷಣ ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಇನ್ನೂ ಕೆಲವು ಆರೋಪಿಗಳು ಹಲ್ಲೆ ನಡೆಸುವ ಉದ್ದೇಶದಿಂದ ಕಾರಿನಲ್ಲಿ ಬಂದು ಮೈದಾನದ ಬಳಿ ಕಾದಿದ್ದರು’ ಎಂದು ಪೊಲೀಸರು ಹೇಳಿದರು.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು, ರಕ್ತದ ಮಡುವಿನಲ್ಲಿ ಬಿದ್ದಿದ್ದ ರೌಡಿಯನ್ನು ಬೌರಿಂಗ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ ಎಂದು ಗೊತ್ತಾಗಿದೆ.
ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಿ ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.
‘ರೀಲ್ಸ್’ ಮಾಡಿದ್ದ ಹೈದರ್: ಕೊಲೆಯಾಗುವ ಐದು ತಾಸು ಮೊದಲು ‘ರೀಲ್ಸ್’ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ. ‘ರೀಲ್ಸ್’ಗೆ ಟಗರು ಸಿನಿಮಾದ ಹಾಡನ್ನು ಸೇರಿಸಿದ್ದ. ಆನೆಪಾಳ್ಯ ಹಾಗೂ ನೀಲಸಂದ್ರ ಭಾಗದಲ್ಲಿ ಹೈದರ್ ಅಲಿ ರೌಡಿ ಚಟುವಟಿಕೆ ನಡೆಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಜತೆಗೆ ಹೈದರ್ ಅಲಿ ಗುರುತಿಸಿಕೊಂಡಿದ್ದ. ಚುನಾವಣೆ ಸಂದರ್ಭದಲ್ಲಿ ಹ್ಯಾರಿಸ್ ಪರ ಪ್ರಚಾರ ಮಾಡಿದ್ದ ಎಂದು ಮೂಲಗಳು ತಿಳಿಸಿವೆ.
ಹೈದರ್ ಅಲಿ ವಿರುದ್ಧ 11 ಪ್ರಕರಣ
‘ಹಳೇ ದ್ವೇಷದ ಕಾರಣಕ್ಕೆ ಹೈದರ್ ಅಲಿಯನ್ನು ಕೊಲೆ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಆರೋಪಿಗಳು ಪತ್ತೆಯಾದ ಬಳಿಕ ಸ್ಪಷ್ಟ ಕಾರಣ ತಿಳಿಯಲಿದೆ. ಆರೋಪಿಗಳ ಪತ್ತೆಗೆ ಮೂರು ತಂಡ ರಚಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹೈದರ್ ವಿರುದ್ಧ ಈ ಹಿಂದೆ ಅಶೋಕನಗರ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು. ಆತನ ವಿರುದ್ಧ ವಿವಿಧ ಠಾಣೆಗಳಲ್ಲಿ 11 ಪ್ರಕರಣಗಳು ದಾಖಲಾಗಿದ್ದವು. 2014ರಿಂದ ಹೈದರ್ ಅಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. 2022ರಿಂದ ರೌಡಿ ಚಟುವಟಿಕೆಯಲ್ಲಿ ಸಕ್ರಿಯ ಆಗಿರಲಿಲ್ಲ ಎಂದು ಮೂಲಗಳು ಹೇಳಿವೆ.
ಉದ್ವಿಗ್ನ ಸ್ಥಿತಿ ನಿರ್ಮಾಣ
ಹೈದರ್ ಅಲಿ ಕೊಲೆಯಾದ ಸುದ್ದಿ ತಿಳಿದು ಭಾನುವಾರ ಮುಂಜಾನೆ ಆನೆಪಾಳ್ಯ ಶಾಂತಿನಗರ ಸೇರಿದಂತೆ ವಿವಿಧೆಡೆಯಿಂದ ಅಪಾರ ಬೆಂಬಲಿಗರು ಬೌರಿಂಗ್ ಆಸ್ಪತ್ರೆ ಆವರಣಕ್ಕೆ ಬಂದಿದ್ದರು. ಆಸ್ಪತ್ರೆ ಎದುರು ಜಮಾಯಿಸಿ ಗೇಟ್ ತಳ್ಳಲು ಮುಂದಾದರು. ಹೀಗಾಗಿ ಆಸ್ಪತ್ರೆ ಬಳಿ ಕೆಲವು ಸಮಯ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡು ಪರಿಸ್ಥಿಯನ್ನು ನಿಯಂತ್ರಿಸಲಾಯಿತು.
ಮಧ್ಯರಾತ್ರಿ 1.30ರ ಸುಮಾರಿಗೆ ಹೈದರ್ ಅಲಿಯ ಕೊಲೆ ನಡೆದಿದೆ. ಆನೆಪಾಳ್ಯದ ಮನೆಗೆ ಹೋಗುವಾಗ ಅಡ್ಡಗಟ್ಟಿ ಕೊಲೆ ಮಾಡಿದ್ದಾರೆ. ಹೈದರ್ ಅಲಿ ರಾಜಕೀಯ ಪಕ್ಷದ ಮುಖಂಡ ಅಲ್ಲ.ಎಚ್.ಟಿ.ಶೇಖರ್, ಡಿಸಿಪಿ, ಕೇಂದ್ರ ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.