ಬೆಂಗಳೂರು: ಆರ್.ಆರ್. ನಗರಕ್ಕೆ ಹೈಕಮಾಂಡ್ ಕುಸುಮಾ ಎಚ್. ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಖಾಡಕ್ಕೆ ಇಳಿದಿದ್ದಾರೆ.
ಯಶವಂತಪುರ ಬಿ.ಕೆ. ನಗರದಲ್ಲಿ ಬುಧವಾರ ರಾತ್ರಿ ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಸಿದ ಶಿವಕುಮಾರ್, ‘ಕನಕಪುರ ಕ್ಷೇತ್ರ ನನಗೆ ಎಷ್ಟು ಮುಖ್ಯವೋ, ಆರ್. ಆರ್. ನಗರವೂ ಅಷ್ಟೇ ಮುಖ್ಯ. ಪೊಲೀಸ್ ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಮುಂದೆ ನಿಮ್ಮ ಭವಿಷ್ಯಕ್ಕೆ ಮುಳುವಾಗುತ್ತದೆ. ನಿಮ್ಮನ್ನು ಇಲ್ಲಿಂದ ಎತ್ತಂಗಡಿ ಮಾಡಿಸುತ್ತೇನೆ’ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು.
‘ಪಕ್ಷದ ಕಾರ್ಯಕರ್ತರ ಮೇಲೆ ದಾಖಲಾಗಿರುವ ಎಫ್ಐಆರ್ ಮಾಹಿತಿ ಕೊಡಿ. ಗುರುವಾರ ಸಂಜೆಯೊಳಗೆ ಎಫ್ಐಆರ್ ಮಾಡಿರುವ ಅಧಿಕಾರಿಯನ್ನು ಅಮಾನತು ಮಾಡಿಸುತ್ತೇನೆ’ ಎಂದು ಕಾರ್ಯಕರ್ತರಿಗೆ ಹೇಳಿದರು.
‘ನನ್ನದು, ನನ್ನ ಸೋದರಿ ಕುಸುಮಾ ಇಬ್ಬರದ್ದೂ ಮೊದಲನೇ ಸಭೆ. ಶನಿ ಮಹಾರಾಜ ತುಳಿದರೆ ಪಾತಾಳಕ್ಕೆ ಹೋಗುತ್ತೇವೆ. ಶನಿ ಎತ್ತಿದರೆ ಮೇಲೆ ಹೋಗುತ್ತೇವೆ. ಕಾರ್ಯಕರ್ತರಿಗೆ ಆರ್.ಆರ್. ನಗರದಲ್ಲಿ ಸಾಕಷ್ಟು ತೊಂದರೆ ಆಗುತ್ತಿದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಇಷ್ಟು ದಿನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಗಾಂಧಾರಿ ಥರ ಇದ್ದೆ. ಇನ್ನು ಮುಂದೆ ಹಾಗೆ ಇರಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.