ರಾಜರಾಜೇಶ್ವರಿನಗರ: ‘ಒಕ್ಕಲಿಗರ ಬೆಂಬಲದಿಂದ ಗೆದ್ದು ಮುಖ್ಯಮಂತ್ರಿ, ಕೇಂದ್ರ ಸಚಿವ ಉಪಮುಖ್ಯಮಂತ್ರಿ, ಸಚಿವ, ಸಂಸದ, ಶಾಸಕ ಸೇರಿದಂತೆ ವಿವಿಧ ಹುದ್ದೆ ಅಲಂಕರಿಸುವ ನಾಯಕರು, ಜನಾಂಗದ ಮೀಸಲಾತಿ ವಿಚಾರದಲ್ಲಿ ತುಟಿ ಬಿಚ್ಚುತ್ತಿಲ್ಲ’ ಎಂದು ಕಿತ್ನಾಮಂಗಲ (ಕುಣಿಗಲ್ ತಾಲ್ಲೂಕು) ಅರೇಶಂಕರ ಮಠದ ಶ್ರೀ ಸಿದ್ದರಾಮಚೈತನ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಮಾಗಡಿ ರಸ್ತೆಯ ಬ್ಯಾಡರಹಳ್ಳಿಯಲ್ಲಿ ಹಮ್ಮಿಕೊಂಡಿದ್ದ, ‘ಮೀಸಲಾತಿ ವಿಚಾರ ಮಂಥನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಒಕ್ಕಲಿಗರಿಗೆ ಮೀಸಲಾತಿ ಸಿಗದಿದ್ದರೆ ಗ್ರಾಮೀಣ ಭಾಗದ ಸಾಮಾನ್ಯ ಮತ್ತು ಬಡ ರೈತ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ಹೊಡೆತ ಬೀಳುತ್ತದೆ’ ಎಂದರು.
ಸಮಿತಿಯ ಅಧ್ಯಕ್ಷ ನಾಗರಾಜ್ ಯಲಚವಾಡಿ, ‘1 ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಒಕ್ಕಲಿಗರ ಮೀಸಲಾತಿಗಾಗಿ ನಮ್ಮ ಹೋರಾಟವೇ ಹೊರತು ಯಾರ ವಿರುದ್ಧವೂ ಅಲ್ಲ. ಪ್ರಾಧಿಕಾರ, ನಿಗಮಗಳ ಸ್ಥಾಪನೆಯಿಂದ ಪ್ರಯೋಜನವಿಲ್ಲ. ನಮಗೆ ಬೇಖಿರುವುದು ಮೀಸಲಾತಿ. –ಇದಕ್ಕಾಗಿ ಹೋರಾಟ ಈಗಷ್ಟೇ ಆರಂಭವಾಗಿದ್ದು, ಸ್ವಾಮೀಜಿಗಳು, ವಿವಿಧ ಪಕ್ಷಗಳ ನಾಯಕರು ಹಾಗೂ ಲಕ್ಷ ಲಕ್ಷ ಜನ ಇದಕ್ಕೆ ಕೈಜೋಡಿಸಲಿದ್ದಾರೆ’ ಎಂದರು.
‘ಒಕ್ಕಲಿಗರು ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡರು ಅಭ್ಯಂತರ ಇಲ್ಲ. ಜನಾಂಗದ ವಿಷಯ ಬಂದಾಗ ಎಲ್ಲರೂ ಒಂದೇ ಎಂದು ತೋರಿಸಬೇಕು’ ಎಂದು ಮನವಿ ಮಾಡಿದರು.
ಸಾಹಿತಿ ಪ್ರೊ.ಎಲ್.ಎಲ್.ಮುಕುಂದರಾಜ್, ಮೀಸಲಾತಿ ಹೋರಾಟ ಸಮಿತಿಯ ಕೆ.ಟಿ.ಕುಮಾರ್, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಪಿ.ಅನಂತರಾಜು, ನಿವೃತ್ತ ಐ.ಎ.ಎಸ್ ಅಧಿಕಾರಿ ಕೃಷ್ಣಪ್ಪ ಕೋಡಿಪಾಳ್ಯ, ಒಕ್ಕಲಿಗರ ಸಂಘದ ಮಾಜಿ ಕಾರ್ಯಾಧ್ಯಕ್ಷ ಆನಂದ್, ಎಸ್.ನಾಗಭೂಷಣ, ಕಾಂಗ್ರೆಸ್ ಮುಖಂಡ ಪಿ.ನಾಗರಾಜು, ಪ್ರೊ.ವಿಜಯಕುಮಾರ್, ಬಿಜೆಪಿ ಮುಖಂಡ ಹೊಸಹಳ್ಳಿ ಸತೀಶ್, ಕಾಜೋಹಳ್ಳಿ ಲೋಕೇಶ್, ಸಾಹಿತಿ ಪ್ರಕಾಶ್ ಮೂರ್ತಿ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.