ಬೆಂಗಳೂರು: ‘ಸಂಸ್ಕಾರ ಎಂಬುದು ಜನ್ಮಜಾತವಾಗಿ ಬರಬೇಕು’ ಎಂಬ ಕಲ್ಪನೆಯಲ್ಲಿ ನವದಂಪತಿಗಳಿಗೆ ಆರ್ಎಸ್ಎಸ್ ಪಾಠ ಮಾಡುವ ವ್ಯವಸ್ಥೆಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ.
ಆರ್ಎಸ್ಎಸ್ ನಡೆಸುತ್ತಿರುವುದು ಮಹಿಳಾ ವಿರೋಧಿ ಸಂಸ್ಕಾರ ಎಂದು ಚಿಂತಕರಾದ ಕೆ.ಎಸ್.ವಿಮಲಾ ಮತ್ತು ಕೆ.ನೀಲಾ ಟೀಕಿಸಿದ್ದಾರೆ.
‘ಆರ್ಎಸ್ಎಸ್ಮನುಸ್ಮೃತಿ ಪ್ರಣೀತವಾದ ಸಂಸ್ಕಾರ ಹೊಂದಿರುವುದು ಎಲ್ಲರಿಗೂ ತಿಳಿದ ವಿಚಾರ.ಮನುಸ್ಮೃತಿ ಸ್ತ್ರೀಯನ್ನು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎನ್ನುತ್ತದೆ. ಅದು ಸನಾತನ ಸಂಸ್ಕೃತಿ ಹೇರುವ ಹುನ್ನಾರದ ಭಾಗವಾಗಿ ಈ ಕಾರ್ಯ ನಡೆಸುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.
‘ಭಾರತ ವಿಭಿನ್ನ ಧಾರೆಯ ನಾನಾ ಸಂಸ್ಕಾರಗಳನ್ನು ಹೊಂದಿದೆ.ಸಂಸ್ಕಾರ ಸಂಸ್ಕೃತಿಯ ಹೆಸರಿನಲ್ಲಿ ಇಂತಹ ಚಟುವಟಿಕೆ ನಡೆಸುತ್ತಿರುವುದು ಭಾರತವನ್ನು ಮತೀಯಗೊಳಿಸುವ ಹುನ್ನಾರ.ಪಾಳೆಗಾರಿಕೆ, ವರ್ಣಾಶ್ರಮ ಧರ್ಮವೇ ಅದರ ನಂಬಿಕೆಯ ತಳಹದಿ.ಪುತ್ರ ಶ್ರೇಷ್ಠತೆಯನ್ನು ತುಂಬುತ್ತ ದಂಪತಿಗೆ ಹೆಣ್ಣು ಭ್ರೂಣ ಹತ್ಯೆಗೆ ಪ್ರಚೋದಿಸಿರಲೂ ಸಾಕು. ಈ ಸನಾತನವಾದಿಗಳಿಗೆ ಈ ಅಧಿಕಾರವನ್ನು ಕೊಟ್ಟವರಾರು?’ ಎಂದು ಅವರು ಪ್ರಶ್ನಿಸಿದ್ದಾರೆ.
ತಪಾಸಣೆ ನಡೆಯಲಿ: ‘ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ‘ಸುಪ್ರಜಾ’ ಕೇಂದ್ರವನ್ನು ಭ್ರೂಣ ಪರೀಕ್ಷೆ ತಡೆ ಕಾಯ್ದೆ (ಪಿಸಿಪಿಎನ್ಡಿಟಿ) ಕಾನೂನಿನ ಅನ್ವಯ ತಪಾಸಣೆಗೆ ಒಳಪಡಿಸಬೇಕು.ಕುಸಿಯುತ್ತಿರುವ ಲಿಂಗಾನುಪಾತದ ಹಿಂದೆ ಇಂತಹ ಶಕ್ತಿಗಳ ಕೈವಾಡ ಇರುವ ಸಾಧ್ಯತೆ ಇರುತ್ತದೆ.ಸರ್ಕಾರ ಇವುಗಳನ್ನುನಿಯಂತ್ರಿಸುವ ಮೂಲಕ ಬಹುತ್ವ ಭಾರತದ ಭವ್ಯ ಪರಂಪರೆಯನ್ನು ಉಳಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.