ADVERTISEMENT

‘ಸಂತ್ರಸ್ತರ ಕುಟುಂಬಕ್ಕೆ ಉದ್ಯೋಗ ನೀಡಿ’

ಬಾವಿ ಸ್ವಚ್ಛಗೊಳಿಸುವಾಗ ಮೃತಪಟ್ಟಿದ್ದ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 20:08 IST
Last Updated 13 ಜೂನ್ 2019, 20:08 IST
ಅಂಡಾಳಮ್ಮ ಅವರ ಪುತ್ರ ದಕ್ಷಿಣಾಮೂರ್ತಿಯವರಿಗೆ ಜಗದೀಶ ಹಿರೇಮನಿ ಅವರು ಪರಿಹಾರದ ಚೆಕ್‌ ವಿತರಿಸಿದರು
ಅಂಡಾಳಮ್ಮ ಅವರ ಪುತ್ರ ದಕ್ಷಿಣಾಮೂರ್ತಿಯವರಿಗೆ ಜಗದೀಶ ಹಿರೇಮನಿ ಅವರು ಪರಿಹಾರದ ಚೆಕ್‌ ವಿತರಿಸಿದರು   

ಬೆಂಗಳೂರು:ಕೆ.ಜಿ. ಹಳ್ಳಿಯ ಟ್ಯಾನರಿ ರಸ್ತೆಯ ಬಳಿ ಹಳೇ ಬಾವಿ ಶುಚಿಗೊಳಿಸುವ ಸಂದರ್ಭದಲ್ಲಿ ಉಸಿರುಗಟ್ಟಿ ಸಾವಿಗೀಡಾಗಿದ್ದ ಇಬ್ಬರು ಕಾರ್ಮಿಕರ ಕುಟುಂಬಕ್ಕೆ ತಲಾ ₹10 ಲಕ್ಷ ಪರಿಹಾರ ಮತ್ತು ಕುಟುಂಬಗಳ ತಲಾ ಒಬ್ಬರಿಗೆ ಉದ್ಯೋಗ ನೀಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ ಸೂಚಿಸಿದರು.

ಗಫೂರ್‌ ಪಾಷಾ ಮತ್ತು ಅಫ್ತಾಬ್‌ ಪಾಷಾ ಎಂಬುವರು ಏಪ್ರಿಲ್‌ 27ರಂದು ಸಾವಿಗೀಡಾಗಿದ್ದರು.ಕೂಲಿ ಕಾರ್ಮಿಕರಾಗಿದ್ದ ಅಫ್ತಾಬ್‌ ದಿನಗೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಗಫೂರ್, ಟ್ಯಾನರಿ ರಸ್ತೆಯಲ್ಲಿರುವ ‘ಬಿಸ್ಮಿಲ್ಲಾ ಟೀ’ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆ ಅಂಗಡಿಗೆ ಹೊಂದಿಕೊಂಡಿರುವ ಹಳೇ ಬಾವಿಯನ್ನು ಸ್ವಚ್ಛಗೊಳಿಸಲು ಇಳಿದಾಗ ಇಬ್ಬರೂ ಸಾವಿಗೀಡಾಗಿದ್ದರು. ಜಗದೀಶ ಹಿರೇಮನಿ ಈ ಸ್ಥಳಕ್ಕೆ ಗುರುವಾರ ಅಧಿಕಾರಿ ಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಈಗ ಬಾವಿಯನ್ನು ಮುಚ್ಚಲಾಗಿದೆ. ಘಟನೆ ಬಗ್ಗೆ ಸಂಪೂರ್ಣ ವರದಿ ತರಿಸಿಕೊಂಡು ಕ್ರಮ ಜರುಗಿಸಬೇಕು’ ಎಂದು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

ಚೆಕ್‌ ವಿತರಣೆ:ಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅಂಡಾಳಮ್ಮ ಎಂಬುವರು ಕಳೆದ ಏಪ್ರಿಲ್‌ 29ರಂದು ದಾಲ್ಮಿಯಾ ಜಂಕ್ಷನ್‌ ಹತ್ತಿರ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಅವರ ಮಗ ದಕ್ಷಿಣಾಮೂರ್ತಿ
ಯವರಿಗೆ ಜಗದೀಶ ಅವರು ₹10 ಲಕ್ಷ ಮೊತ್ತದ ಚೆಕ್‌ ವಿತರಿಸಿದರು.

ಅಂಡಾಳಮ್ಮ ಅವರ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡುವಂತೆ ಬಿಬಿಎಂಪಿದಕ್ಷಿಣ ವಲಯದ ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.