
ಬೆಂಗಳೂರು: ‘ಕೇಸರಿ ಕೃಷಿಯು ಲಾಭದಾಯಕವಾಗಿದ್ದು, ಇದಕ್ಕೆ ಉತ್ತೇಜನ ನೀಡಲು ಸರ್ಕಾರವು ಕೃಷಿಕರಿಗೆ ಅಗತ್ಯ ಸೌಲಭ್ಯ ಹಾಗೂ ಪ್ರೋತ್ಸಾಹ ನೀಡಬೇಕು’ ಎಂದು ಕರ್ನಾಟಕ ಕೇಸರಿ ರೈತರ ಸಂಘ ಆಗ್ರಹಿಸಿದೆ.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಲೋಕೇಶ್ ಆರ್., ‘ಕರ್ನಾಟಕದಲ್ಲಿ 40 ಮಂದಿ ಕೇಸರಿ ಬೆಳೆಯುತ್ತಿದ್ದಾರೆ. ಬೆಂಗಳೂರಿನಲ್ಲಿಯೇ 30 ಮಂದಿ ಬೆಳೆಗಾರರಿದ್ದಾರೆ. ಈ ಬೆಳೆಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಸೂಕ್ತ ಮಾರ್ಗದರ್ಶನವೂ ಸಿಗದ ಪರಿಣಾಮ, ಕೆಲವರು ಈ ಕೃಷಿಯಲ್ಲಿ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಕಳಪೆ ಗುಣಮಟ್ಟದ ಕೇಸರಿ ಮಾರುಕಟ್ಟೆ ಪ್ರವೇಶಿಸುತ್ತಿದೆ. ಗುಣಮಟ್ಟದ ಕೇಸರಿ ಬೆಲೆ ಪ್ರತಿ ಗ್ರಾಂಗೆ ₹2 ಸಾವಿರ ತಲುಪಿದ್ದು, ಈ ಸಂದರ್ಭದಲ್ಲಿ ಸ್ಥಳೀಯವಾಗಿ ಬೆಳೆಯಲು ಪ್ರೋತ್ಸಾಹ ಅಗತ್ಯ’ ಎಂದು ಹೇಳಿದರು.
‘ಕೇಸರಿಯು ಔಷಧ ಗುಣಗಳನ್ನು ಒಳಗೊಂಡಿದೆ. ನಾವು ಬೆಳೆಯುತ್ತಿರುವ ಕೇಸರಿಯನ್ನು ಸ್ಥಳೀಯವಾಗಿಯೇ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ. ಇದರ ಮೌಲ್ಯವರ್ಧನೆಯಿಂದ ಹೆಚ್ಚಿನ ಆದಾಯ ಗಳಿಸಲು ಸಾಧ್ಯ. ಆದರೆ, ಮಧ್ಯವರ್ತಿಗಳ ಹಾವಳಿ, ಕಳಪೆ ಗುಣಪಟ್ಟದ ಗಡ್ಡೆಯಿಂದಾಗಿ ಬೆಳೆಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬೆಳೆ ಹೆಚ್ಚಿನ ಶ್ರಮ ಬಯಸದ ಕಾರಣ, ಉಪ ಬೆಳೆಗಳಿಗೂ ಆದ್ಯತೆ ನೀಡಬೇಕು. ಈ ಬೆಳೆಯಲ್ಲಿ ಆಸಕ್ತಿ ಇರುವವರಿಗೆ ನಮ್ಮ ಸಂಘ ಅಗತ್ಯ ಮಾರ್ಗದರ್ಶನ ಒದಗಿಸಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.