ಬಂಧನ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ನಕಲಿ ದಾಖಲೆಗಳನ್ನು ಬಳಸಿ ನಿವೇಶನ ಮಾರಾಟದಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಲಿಂಗರಾಜಪುರದ ಆರೀಫ್ ಉಲ್ಲಾ ಖಾನ್, ಜಿ.ವಾಸು ಹಾಗೂ ನಾಗೇಂದ್ರ ಬಂಧಿತರು.
ಕಾಕ್ಸ್ಟೌನ್ ನಿವಾಸಿಯೊಬ್ಬರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ವಿವಿಧ ದಾಖಲೆ ಪತ್ರಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಗಳೆಲ್ಲರೂ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ದೂರುದಾರರ ಮಾವ ಈಶ್ವರ್ ಪ್ರಸಾದ್ ಅವರು, ಕೊತ್ತನೂರು ಗ್ರಾಮದ ಬಳಿಯಿರುವ ಅಂದಾಜು ₹8 ಕೋಟಿ ಮೌಲ್ಯದ 13 ಗುಂಟೆಯ ಜಮೀನಿನ ಮಾಲೀಕರಾಗಿದ್ದರು. ಅನಾರೋಗ್ಯದಿಂದ ಅವರು ಎರಡು ವರ್ಷಗಳ ಹಿಂದೆ ಮೃತರಾಗಿದ್ದರು. ಇದನ್ನು ಅರಿತ ಆರೋಪಿಗಳು ಮೃತರ ಹೆಸರಿನಲ್ಲಿ ನಕಲಿ ಜಿಪಿಎ ಮಾಡಿಸಿಕೊಂಡಿದ್ದರು. ಅಲ್ಲದೇ ಮೃತ ವ್ಯಕ್ತಿ, ಆರೋಪಿ ವಾಸು ಹೆಸರಿಗೆ ಜಮೀನು ಮಾರಾಟ ಮಾಡಿರುವ ರೀತಿ ಸೇಲ್ ಡೀಡ್ ಮಾಡಿಸಿಕೊಂಡಿದ್ದರು ಎಂಬುದು ತನಿಖೆ ವೇಳೆ ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.
ಕೆ.ಆರ್.ಪುರ ಉಪ ನೋಂದಣಿ ಕಚೇರಿಯಲ್ಲಿ ಆಸ್ತಿಯ ನೋಂದಣಿ ಸಹ ಮಾಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ದೂರು ನೀಡಿದ ಮಹಿಳೆಯ ಮಾವ ಮೃತರಾದ ಮೇಲೆ ಗೋವಾಕ್ಕೆ ತೆರಳಿ ಅಲ್ಲಿ ನೆಲಸಿದ್ದರು. ಇತ್ತೀಚೆಗೆ ಗೋವಾದಿಂದ ಬಂದು ಕೊತ್ತನೂರಿಗೆ ತೆರಳಿದ್ದರು. ಆಗ ಜಮೀನು ಕಬಳಿಸಿರುವುದು ಗೊತ್ತಾಗಿದೆ. ನಂತರ, ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು’ ಎಂದು ಮೂಲಗಳು ಹೇಳಿವೆ.
‘ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ನಿವೇಶನಗಳನ್ನು ಮಾರಾಟ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.