ADVERTISEMENT

ಎಂಎಸ್‌ಪಿ ಜಾರಿಗೆ ಆಗ್ರಹಿಸಿ ಏಪ್ರಿಲ್‌ನಲ್ಲಿ ಪ್ರತಿಭಟನೆ: ಯೋಗೇಂದ್ರ ಯಾದವ್‌

‘ಜನ ಪರ್ಯಾಯ ಬಜೆಟ್‌ ಅಧಿವೇಶನ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 19:25 IST
Last Updated 21 ಮಾರ್ಚ್ 2022, 19:25 IST
ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ಯೋಗೇಂದ್ರ ಯಾದವ್ ಅವರು ನಗಾರಿ ಬಾರಿಸುವ ಮೂಲಕ ಸಮಾವೇಶ ಉದ್ಘಾಟಿಸಿದರು. (ಎಡದಿಂದ) ರೈತ ಮುಖಂಡ ಬಡಗಲಪುರ ನಾಗೇಂದ್ರ, ಸಂಯುಕ್ತ ಕಿಸಾನ್ ಮೋರ್ಚಾ ನಾಯಕಿ ಕವಿತಾ ಕುರಗುಂಟಿ, ರೈತ ಮುಖಂಡರಾದ ಜಿ.ಸಿ.ಬಯ್ಯಾರೆಡ್ಡಿ, ಎಚ್.ವಿ.ದಿವಾಕರ್, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿ ಅಧ್ಯಕ್ಷೆ ದೇವಿ ಹಾಗೂ ಎಐಟಿಯುಸಿಯ ಕೆ.ವಿ.ಭಟ್ ಇದ್ದಾರೆ   –ಪ್ರಜಾವಾಣಿ ಚಿತ್ರ
ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ಯೋಗೇಂದ್ರ ಯಾದವ್ ಅವರು ನಗಾರಿ ಬಾರಿಸುವ ಮೂಲಕ ಸಮಾವೇಶ ಉದ್ಘಾಟಿಸಿದರು. (ಎಡದಿಂದ) ರೈತ ಮುಖಂಡ ಬಡಗಲಪುರ ನಾಗೇಂದ್ರ, ಸಂಯುಕ್ತ ಕಿಸಾನ್ ಮೋರ್ಚಾ ನಾಯಕಿ ಕವಿತಾ ಕುರಗುಂಟಿ, ರೈತ ಮುಖಂಡರಾದ ಜಿ.ಸಿ.ಬಯ್ಯಾರೆಡ್ಡಿ, ಎಚ್.ವಿ.ದಿವಾಕರ್, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿ ಅಧ್ಯಕ್ಷೆ ದೇವಿ ಹಾಗೂ ಎಐಟಿಯುಸಿಯ ಕೆ.ವಿ.ಭಟ್ ಇದ್ದಾರೆ   –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಜಾರಿ ಸಂಬಂಧ ಸಮಿತಿ ರಚಿಸುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ಅದನ್ನು ಮರೆತಿದೆ.

ಎಂಎಸ್‌ಪಿ ನಮ್ಮ ಹಕ್ಕು. ಅದರ ಅನುಷ್ಠಾನಕ್ಕೆ ಒತ್ತಾಯಿಸಿ ಏಪ್ರಿಲ್‌ 11 ರಿಂದ 17ರ ವರೆಗೆ ದೇಶದಾದ್ಯಂತ ಪ್ರತಿಭಟನೆ ನಡೆಸುತ್ತೇವೆ’ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ನಾಯಕ ಯೋಗೇಂದ್ರ ಯಾದವ್‌ ತಿಳಿಸಿದರು.

ಸಂಯುಕ್ತ ಹೋರಾಟ–ಕರ್ನಾಟಕ ಹಮ್ಮಿಕೊಂಡಿದ್ದ ‘ಜನ ಪರ್ಯಾಯ ಬಜೆಟ್‌ ಅಧಿವೇಶನ’ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು.

ADVERTISEMENT

‘ಎಂಎಸ್‌ಪಿ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳು ತ್ತಿದ್ದಾರೆ. ಹಾಗಾದರೆ ಅದು ಎಲ್ಲಿದೆ.

ಕರ್ನಾಟಕದ ಮಾರುಕಟ್ಟೆಯಲ್ಲಿ ರಾಗಿ ಹಾಗೂ ಭತ್ತದ ಬೆಲೆ ಎಷ್ಟಿದೆ ಎಂಬುದು ಮೋದಿಯವರಿಗೆ ಗೊತ್ತಿದೆಯೇ’ ಎಂದು ಪ್ರಶ್ನಿಸಿದರು. ‘ಸಣ್ಣ ಮತ್ತು ಅತಿ ಸಣ್ಣ ರೈತರು ನೆಮ್ಮದಿಯ ಬದುಕು ನಡೆಸಬೇಕು. ಅದಕ್ಕೆ ಪೂರಕ ವಾತಾವರಣ ಸೃಷ್ಟಿಸುವ ಅಗತ್ಯವಿದೆ.

ಸಂಘಟನೆಗಳು ಕೇವಲ ಆರ್ಥಿಕ ವಾದಕ್ಕೆ ಕಟ್ಟುಬೀಳದೆ, ಭವಿಷ್ಯ ರೂಪಿಸಲು ಅಗತ್ಯವಿರುವ ಪರ್ಯಾಯ ಕಣ್ಣೋಟ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ದೆಹಲಿಯ ರೈತ ಚಳವಳಿ ದೇಶದ ರೈತರಲ್ಲಿ ಸ್ವಾಭಿಮಾನ ಬೆಳೆಸಿದೆ. ಒಗ್ಗಟ್ಟು ಮೂಡಿಸಿದೆ. ಇದನ್ನು ಕಾಪಾಡಿಕೊಂಡು ಹೋಗ ಬೇಕು.
ರಾಜಕೀಯ ಅಧಿಕಾರವು ರೈತರ ಬಹುದೊಡ್ಡ ಅಸ್ತ್ರ. ಅದನ್ನು ಹೇಗೆ ಚಲಾಯಿಸಬೇಕು ಎಂಬುದನ್ನು ಎಲ್ಲರೂ ಕಲಿಯಬೇಕು. ರೈತ ಚಳವಳಿ ಮೂಲಕ ನಾವು ಸಾಧಿಸಿರುವ ಯಶಸ್ಸು ರಾಜಕೀಯ ಪಕ್ಷಗಳಿಗೆ ಪಾಠವಾಗಿದೆ’ ಎಂದರು.

‘ಕೆಲ ಸ್ನೇಹಿತರು ನಮ್ಮ ಸಲಹೆ ಧಿಕ್ಕರಿಸಿ ಪಂಜಾಬ್‌ ಹಾಗೂ ಉತ್ತರ ಪ್ರದೇಶ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ಶಾಸಕ, ಮುಖ್ಯ
ಮಂತ್ರಿಯ ಆಯ್ಕೆಯಷ್ಟೇ ನಮ್ಮ ಗುರಿಯಾಗಬಾರದು. 2024ರಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವಂತಾಗಬೇಕು. ಆ ರೀತಿ ದೇಶದ ರಾಜಕೀಯವನ್ನು ರೈತರು ಪ್ರಭಾವಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.