ಬೆಂಗಳೂರು: ‘ಫೇಸ್ಬುಕ್ನಲ್ಲಿ ಜಾಹೀರಾತು ನೋಡಿ ರೇಷ್ಮೆ ಸೀರೆಗಳನ್ನು ಖರೀದಿಸಿರುವ ದೇವನಹಳ್ಳಿಯ ಶಶಿಕಲಾ ಹಾಗೂ ವೆಂಕಟರಮಣಪ್ಪ ಎಂಬುವರು ₹ 26.90 ಲಕ್ಷ ನೀಡದೆ ವಂಚಿಸಿದ್ದಾರೆ’ ಎಂದು ಹೈದರಾಬಾದ್ ನಿವಾಸಿ ವೆಂಕಟೇಶ್ವರಲು ಎಂಬುವರು ದೇವನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.
‘ಇದೇ 19ರಂದು ಸೀರೆಗಳನ್ನು ಖರೀದಿಸಿ ವಂಚಿಸಿರುವುದಾಗಿ ವೆಂಕಟೇಶ್ವರಲು ಹೇಳಿದ್ದಾರೆ. ನಂಬಿಕೆ ದ್ರೋಹ (ಐಪಿಸಿ 406) ಹಾಗೂ ವಂಚನೆ (ಐಪಿಸಿ 420) ಆರೋಪದಡಿ ಶಶಿಕಲಾ ಹಾಗೂ ವೆಂಕಟರಮಣಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ರೇಷ್ಮೆ ಸೀರೆ ಮಾರಾಟ ಮಾಡುವುದಾಗಿ ಫೇಸ್ಬುಕ್ನಲ್ಲಿ ಜಾಹೀರಾತು ನೀಡಿದ್ದೆ. ಅದನ್ನು ನೋಡಿ ಇದೇ 16ರಂದು ಕರೆ ಮಾಡಿದ್ದ ಶಶಿಕಲಾ, ‘ದೇವನಹಳ್ಳಿಯಲ್ಲಿ ನಮ್ಮದು ಅಂಗಡಿ ಇದೆ. 300 ವಿವಿಧ ವಿನ್ಯಾಸಗಳ ರೇಷ್ಮೆ ಸೀರೆಗಳು ಬೇಕು. ಕೇಳಿದಷ್ಟು ಹಣ ನೀಡುತ್ತೇವೆ’ ಎಂದಿದ್ದರು. ಅದನ್ನು ನಂಬಿ, ಇದೇ 19ರಂದು ಹಿರಾನಂದಿನಿ ಅಪಾರ್ಟ್ಮೆಂಟ್ ಸಮುಚ್ಚಯ ಬಳಿ ಹೋಗಿ ₹ 31.98 ಲಕ್ಷ ಮೌಲ್ಯದ ಸೀರೆ ಕೊಟ್ಟಿದ್ದೆ’ ಎಂದುವೆಂಕಟೇಶ್ವರಲು ದೂರಿನಲ್ಲಿ ತಿಳಿಸಿದ್ದಾರೆ.
‘ಹಣ ತಂದುಕೊಡುವುದಾಗಿ ಹೇಳಿ ಸೀರೆ ಸಮೇತ ಸ್ಥಳದಿಂದ ಹೊರಟು ಹೋಗಿದ್ದ ಶಶಿಕಲಾ, ಅದೇ ಸೀರೆಗಳನ್ನು ವ್ಯಾಪಾರಿ ವೆಂಕಟರಮಣಪ್ಪ ಅವರಿಗೆ ನೀಡಿದ್ದರು. ಕೆಲ ದಿನಗಳ ನಂತರ,
₹ 5.08 ಲಕ್ಷ ಮಾತ್ರ ಕೊಟ್ಟಿದ್ದಾರೆ. ಉಳಿದ ₹ 26.90 ಲಕ್ಷ ನೀಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.