ಬೆಂಗಳೂರು: ’ನಗರದ ಕಸ ನಿರ್ವಹಣೆಗೆ ಪ್ರತ್ಯೇಕ ಸ್ವಾಯತ್ತ ಮಂಡಳಿ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಹೇಳಿದ್ದು, ಈ ನಡೆಯನ್ನು ಆಮ್ ಆದ್ಮಿ ಪಕ್ಷ ವಿರೋಧಿಸುತ್ತದೆ‘ ಎಂದು ಎಎಪಿ ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ ಹೇಳಿದರು.
ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ’ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ ಬದಲಾಗುವುದಕ್ಕಿಂತ ಮೊದಲು ನಗರದ ಕಸ ನಿರ್ವಹಣೆ ಆರೋಗ್ಯ ಅಧಿಕಾರಿಗಳ ಅಡಿಯಲ್ಲಿ ಬರುತ್ತಿತ್ತು. ಬಳಿಕ ಅದನ್ನು ಎಂಜಿನಿಯರಿಂಗ್ ವಿಭಾಗಕ್ಕೆ ವರ್ಗಾಯಿಸಲಾಯಿತು. ಇದಾದ ನಂತರ ಕಸದ ಮಾಫಿಯಾ ಕೈಗೆ ಸಿಲುಕಿದ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಇಡೀ ಬೆಂಗಳೂರು ಕಸದ ಕೊಂಪೆಯಾಗಿ ಮಾರ್ಪಟ್ಟಿದೆ‘ ಎಂದು ಆರೋಪಿಸಿದರು.
’ಇಡೀ ಸರ್ಕಾರವನ್ನೇ ನಿಯಂತ್ರಣ ಮಾಡುವಷ್ಟು ಬೆಳೆದಿರುವ ಕಸದ ಮಾಫಿಯಾಗಳ ಚಿತಾವಣೆಯಿಂದ ಈ ಕೆಲಸಕ್ಕೆ ಬಿಬಿಎಂಪಿ ಕೈ ಹಾಕಿದೆ. ₹150 ಕೋಟಿ ವೆಚ್ಚದ ಕಸ ನಿರ್ವಹಣೆ ಬಜೆಟ್ ಈಗಾಗಲೇ ₹1200 ಕೋಟಿಗೆ ಮುಟ್ಟಿದೆ. ಪ್ರತ್ಯೇಕ ಮಂಡಳಿ ರಚಿಸಿ ಜನರ ಮತ್ತಷ್ಟು ಹಣ ಲೂಟಿ ಹೊಡೆಯಲು ಹುನ್ನಾರ ನಡೆಸಲಾಗಿದೆ‘ ಎಂದರು.
’ಪ್ರಸ್ತುತ ಹಲ್ಲು ಕಿತ್ತು ಹಾವಿನಂತಾಗಿರುವ ಬಿಬಿಎಂಪಿಯನ್ನು ಮತ್ತಷ್ಟು ದುರ್ಬಲಗೊಳಿಸುವ ಹುನ್ನಾರ ಇದಾಗಿದೆ. ನೀರು ಸರಬರಾಜನ್ನು ಜಲಮಂಡಳಿಗೆ ನೀಡಲಾಗಿದೆ. ಆಸ್ತಿ ನಿರ್ವಹಣೆ, ಶಾಲೆಗಳ, ಆಸ್ಪತ್ರೆಗಳ ನಿರ್ವಹಣೆ... ಹೀಗೆ ಒಂದೊಂದೇ ಜವಾಬ್ದಾರಿಗಳನ್ನು ತೆಗೆದು ಅತೃಪ್ತರನ್ನು ಕೂರಿಸುವ ಆವಾಸಸ್ಥಾನ ಮಾಡಲಾಗುತ್ತಿದೆ‘ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.