ಬಂಧನ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಕದ್ದ ಮೊಬೈಲ್ ಮತ್ತು ಚಿನ್ನದ ಸರಗಳನ್ನು ಮಾರಾಟ ಮಾಡುತ್ತಿದ್ದ ತಾಯಿ ಮತ್ತು ಮಗನನ್ನು ಅಪಹರಿಸಿ, ತಾಯಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಒಂಬತ್ತು ಮಂದಿಯನ್ನು ಚಂದ್ರಲೇಔಟ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೋಸೆಫ್, ಶ್ರೀನಿವಾಸ್ ಅಲಿಯಾಸ್ ಪಾಗಲ್ ಸೀನಾ, ಸೌಮ್ಯಾ, ಬಡ್ಡಿ ವ್ಯವಹಾರ ಮಾಡುವ ಪ್ರತಾಪ್, ಜತೀನ್, ವಿಜ್ಞೇಶ್, ಆಟೊ ಚಾಲಕ ಸೈಯದ್ ಶಹಬುದ್ದೀನ್, ಸ್ವಾತಿ, ಮಾದೇಶ ಬಂಧಿತರು. ಆರೋಪಿಗಳ ವಿರುದ್ಧ ಅಪಹರಣ, ಅಕ್ರಮ ಬಂಧನ, ಸುಲಿಗೆ, ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘40 ವರ್ಷದ ಸಂತ್ರಸ್ತೆ ತನ್ನ 20 ವರ್ಷದ ಮಗನೊಂದಿಗೆ ನಗರದಲ್ಲಿ ವಾಸವಿದ್ದಾರೆ. ಮಗನ ಸ್ನೇಹಿತರಾದ ಶಕ್ತಿ ಮತ್ತು ಬಸವರಾಜು ಎಂಬುವರು ಕಳವು ಮಾಡಿದ ಚಿನ್ನ ಮತ್ತು ಮೊಬೈಲ್ಗಳನ್ನು ತಂದು ಇವರ ಮೂಲಕ ಮಾರಾಟ ಮಾಡಿಸುತ್ತಿದ್ದರು. ಕದ್ದ ವಸ್ತುಗಳಿಂದ ಅಧಿಕ ಹಣಗಳಿಸಿದ್ದಾರೆಂದು ಭಾವಿಸಿ ಜೋಸೆಫ್ ಮತ್ತು ಪಾಗಲ್ ಸೀನಾ ತಾಯಿ ಮತ್ತು ಮಗನನ್ನು ಆಗಸ್ಟ್ 13ರಂದು ಅಪಹರಿಸಿದ್ದರು. ಬಳಿಕ ಕೆಂಗೇರಿಯಲ್ಲಿರುವ ಪರಿಚಿತರಾದ ಪ್ರತಾಪ್ ಮತ್ತು ಅವರ ಪತ್ನಿ ಸೌಮ್ಯಾ ಅವರಿಗೆ ಸೇರಿದ ಮನೆಯಲ್ಲಿ ಕೂಡಿ ಹಾಕಿ, ಹಣ ನೀಡುವಂತೆ ಚಿತ್ರ ಹಿಂಸೆ ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಆರೋಪಿಗಳ ಪೈಕಿ ಕೆಲವರು ಮಹಿಳೆಗೆ ದೈಹಿಕ ಹಿಂಸೆ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ. ಅವರ ಬಳಿ ಹಣವಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಬಿಟ್ಟು ಕಳುಹಿಸಿದ್ದಾರೆ. ಈ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ. ಜೋಸೆಫ್ ಮತ್ತು ಪಾಗಲ್ ಸೀನಾ ರೌಡಿ ಶೀಟರ್ಗಳಾಗಿದ್ದು, ಶಹಬುದ್ದೀನ್ ಮತ್ತು ವಿಘ್ನೇಶ್ ಅವರ ವಿರುದ್ಧ ಹಲ್ಲೆ ನಡೆಸಿದ ಪ್ರಕರಣಗಳಿವೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.