
ಬೆಂಗಳೂರು: ‘ಹಿಂದಿನ ವೈಜ್ಞಾನಿಕ ಸಾಧನೆಯನ್ನು ಗೌರವಿಸುವುದು, ನೂತನ ತಂತ್ರಜ್ಞಾನದೊಂದಿಗೆ ಭವಿಷ್ಯವನ್ನು ಕಟ್ಟುವುದು ನಮ್ಮ ಗುರಿ’ ಎಂದು ಎಕ್ಸ್ಐಎಸ್ಎಸ್ ನಿರ್ದೇಶಕ ಜೋಸೆಫ್ ಮೇರಿಯಾನಸ್ ಕುಜುರ್ ಎಸ್.ಜೆ. ತಿಳಿಸಿದರು.
‘ಸುಸ್ಥಿರ ಭವಿಷ್ಯಕ್ಕಾಗಿ ಆಡಳಿತದ ಮರುಕಲ್ಪನೆ: ಎ.ಐ ಯುಗದಲ್ಲಿ ಲಾಭ, ಉದ್ದೇಶ ಮತ್ತು ಜನರ ಸಮತೋಲನ’ ಕುರಿತು ಕ್ಸೇವಿಯರ್ ಸಾಮಾಜಿಕ ಸೇವಾ ಸಂಸ್ಥೆ (ಎಕ್ಸ್ಐಎಸ್ಎಸ್) ಹಮ್ಮಿಕೊಂಡಿದ್ದ ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕೃತಕ ಬುದ್ಧಿಮತ್ತೆಯ ಯುಗದಲ್ಲಿ ನೀತಿಶಾಸ್ತ್ರ, ಸುಸ್ಥಿರತೆ ಮತ್ತು ಮಾನವೀಯ ಮೌಲ್ಯಗಳು ಆಡಳಿತಕ್ಕೆ ಮಾರ್ಗದರ್ಶನವಾಗಲಿವೆ. ನೈತಿಕ ನಾಯಕತ್ವ, ಸಾಮಾಜಿಕ ನ್ಯಾಯ ಮತ್ತು ಜವಾಬ್ದಾರಿಯುತ ನಿರ್ವಹಣಾ ಶಿಕ್ಷಣ ಇಂದಿನ ಅಗತ್ಯ’ ಎಂದು ಹೇಳಿದರು.
ಎಕ್ಸ್ಐಎಸ್ಎಸ್–ಜಿಬಿ ಅಧ್ಯಕ್ಷ ಅಜಿತ್ ಕುಮಾರ್ ಕ್ಸೆಸ್ ಎಸ್.ಜೆ. ಮಾತನಾಡಿ, ‘ಸಂಸ್ಥೆಯು ತನ್ನ ಪ್ಲಾಟಿನಂ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನವು ಮೆರುಗು ನೀಡಿದೆ. ನಿಜವಾದ ಆಡಳಿತವು ಮಾನವ-ಕೇಂದ್ರಿತ, ಅಂತರ್ಗತ ಮತ್ತು ನೈತಿಕವಾಗಿಬೇಕು’ ಎಂದರು.
ಪ್ರಬೀರ್ ಝಾ ಪೀಪಲ್ ಅಡ್ವೈಸರಿ ಸಂಸ್ಥೆಯ ಸ್ಥಾಪಕ ಪ್ರಬೀರ್ ಝಾ, ಅಮೆರಿಕದ ಸಿಯಾಟಲ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಜೋಸೆಫ್ ಎಂ. ಫಿಲಿಪ್ಸ್, ಪ್ರಧಾನ ಮಂತ್ರಿ ಕರ್ಮ ಯೋಗಿ ಭಾರತ್ ಉಪಕ್ರಮದ ಸಹ-ಸಂಸ್ಥಾಪಕ ಪಂಕಜ್ ಬನ್ಸಾಲ್, ಕೋಲ್ ಇಂಡಿಯಾ ಲಿಮಿಟೆಡ್ ನಿರ್ದೇಶಕ ವಿನಯ್ ರಂಜನ್, ಡೀನ್ ಡಾ. ಅಮರ್ ಇ. ಟಿಗ್ಗಾ ವಿವಿಧ ವಿಚಾರಗಳ ಕುರಿತು ಮಾತನಾಡಿದರು. ಮೊದಲ ದಿನ 13 ಪ್ರಬಂಧಗಳ ಮಂಡನೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.