ಕೆ.ಆರ್.ಪುರ: ‘ದೇಶ ಸುಭದ್ರವಾಗಿರಲು ಸೈನಿಕರ ಪಾತ್ರ ಮಹತ್ವದ್ದು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸೈನಿಕರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು’ ಎಂದು ಸಂಸದ ಪಿ.ಸಿ.ಮೋಹನ್ ತಿಳಿಸಿದರು.
ಕಲ್ಯಾಣನಗರ ನಾಗರಿಕರ ಸಾಂಸ್ಕೃತಿಕ ವೇದಿಕೆ ವತಿಯಿಂದಕಾಚರಕನಹಳ್ಳಿಯಲ್ಲಿ ಭಾನುವಾರ ನಡೆದ ಸ್ವಾತಂತ್ರ್ಯ ದಿನ ಹಾಗೂ ನಿವೃತ್ತ ಸೇನಾ ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅನೇಕ ಮಹನೀಯರ ಪ್ರಾಣತ್ಯಾಗದಿಂದ ದೇಶ ಸುಭದ್ರವಾಗಿದೆ. ನಮ್ಮ ಮೇಲೆ ಹಿಡಿತ ಸಾಧಿಸಿದ್ದ ಬ್ರಿಟಿಷರಿಂದ ಸ್ವತಂತ್ರಗೊಂಡ ದಿನವಿದು.ದೇಶದ ಜನರ ರಕ್ಷಣೆಗಾಗಿ ಸೈನಿಕರು ತಮ್ಮ ಪ್ರಾಣದ ಹಂಗು ತೊರೆದು, ಕಾಯುತ್ತಿದ್ದಾರೆ. ಅವರನ್ನು ಸನ್ಮಾನಿಸುವುದು ಶ್ಲಾಘನೀಯ’ ಎಂದರು.
ಬಿಜೆಪಿ ಮುಖಂಡ ಪದ್ಮನಾಭರೆಡ್ಡಿ,‘ಕಾಚರಕನಹಳ್ಳಿಯಲ್ಲಿ ಯೋಧರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಪರಮವೀರ ಚಕ್ರ ಪ್ರಶಸ್ತಿ ಪಡೆದ ಲೆಫ್ಟಿನೆಂಟ್ ಕರ್ನಲ್ ಬಿ.ಎಸ್.ಗಣಪತಿ ಇದೇ ವಾರ್ಡಿನವರು. ಒಟ್ಟು ಸೇನಾ ವಲಯಗಳಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿರುವ 75 ಮಂದಿಗೆ ಸನ್ಮಾನ ಮಾಡಲಾಯಿತು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.