ADVERTISEMENT

ಜನರಿಗೆ ಯಾವ ಸಂದೇಶ ನೀಡುತ್ತೀರಿ?: ಸಂಘ ಪರಿವಾರದವರಿಗೆ ಜಯಪ್ರಕಾಶ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 15:58 IST
Last Updated 24 ಅಕ್ಟೋಬರ್ 2025, 15:58 IST
<div class="paragraphs"><p>ನಗರದ ಕಾರ್ಪೊರೇಷನ್ ವೃತ್ತದಿಂದ ಪುರಭವನದವರೆಗೆ ಸಾಹಿತಿಗಳು, ಹೋರಾಟಗಾರರು, ಪ್ರಗತಿಪರ ಚಿಂತಕರು ‘ಸೌಹಾರ್ದ ದೀಪಾವಳಿ’ ಮೆರವಣಿಗೆ ನಡೆಸಿದರು.&nbsp; &nbsp; </p></div>

ನಗರದ ಕಾರ್ಪೊರೇಷನ್ ವೃತ್ತದಿಂದ ಪುರಭವನದವರೆಗೆ ಸಾಹಿತಿಗಳು, ಹೋರಾಟಗಾರರು, ಪ್ರಗತಿಪರ ಚಿಂತಕರು ‘ಸೌಹಾರ್ದ ದೀಪಾವಳಿ’ ಮೆರವಣಿಗೆ ನಡೆಸಿದರು.   

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಕೇರಳದಲ್ಲಿ ಸಂಘ ಪರಿವಾರದ ಕಾರ್ಯಕರ್ತರೊಬ್ಬರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸ್ಫೋಟಕಗಳು ಪತ್ತೆಯಾಗಿದ್ದವು. ಹೀಗಿರುವಾಗ ಲಾಠಿ ಹಿಡಿದು ಜನರಿಗೆ ಯಾವ ಸಂದೇಶ ನೀಡುತ್ತೀರಿ?’ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಪ್ರಶ್ನಿಸಿದರು.

ADVERTISEMENT

ನಗರದಲ್ಲಿ ಶುಕ್ರವಾರ ಸೌಹಾರ್ದ ಕರ್ನಾಟಕ ಆಯೋಜಿಸಿದ್ದ ಕಾರ್ಪೊರೇಷನ್ ವೃತ್ತದಿಂದ ಪುರಭವನದವರೆಗೆ ‘ಸೌಹಾರ್ದ ದೀಪಾವಳಿ’ ಮೆರವಣಿಗೆ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಸ್ಫೋಟಕಗಳನ್ನು ಪಟಾಕಿ ಹಬ್ಬ ಮಾಡಲು ಸಂಗ್ರಹಿಸಿದ್ದಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಅಕ್ರಮವಾಗಿ ಸ್ಫೋಟಕಗಳನ್ನು ಸಂಗ್ರಹಿಸುವವರನ್ನು ಪತ್ತೆ ಮಾಡಿ, ಬಂಧಿಸಬೇಕು. ದೇಶದ ಇತರೆ ರಾಜ್ಯಗಳಲ್ಲಿಯೂ ಈ ರೀತಿ ಸ್ಫೋಟಕಗಳನ್ನು ಸಂಗ್ರಹಿಸಿ, ಯಾವ ಕಾರಣಕ್ಕೆ ಬಳಸುತ್ತಾರೆ ಎಂಬುದನ್ನು ವಿವರಿಸಿ ಹೇಳಬೇಕಿಲ್ಲ. ‌ಲಾಠಿಗಳನ್ನು ಹಿಡಿದು ಹೇಳಲು ಹೊರಟಿರುವ ಸಂದೇಶ ಜನರನ್ನು ಬೇರ್ಪಡಿಸಿ ಕಲಹ ಉಂಟು ಮಾಡುವುದು. ಅದಕ್ಕೆ ಬದಲಾಗಿ ಭಾವೈಕ್ಯತೆಯ ದೀಪವನ್ನು ಹಚ್ಚಿ, ಬೆಳಕಿನ ಹಬ್ಬವನ್ನು ಶಾಶ್ವತವಾಗಿ ಮಾಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಎಸ್‌.ಜಿ.ಸಿದ್ದರಾಮಯ್ಯ ಮಾತನಾಡಿ, ‘ದೇಶದಲ್ಲಿ ಇತ್ತೀಚೆಗೆ ಕೋಮುವಾದದ ಕತ್ತಲು ಆವರಿಸಿದೆ. ನಾವು ಕೈಯಲ್ಲಿ ಲಾಠಿ ಹಿಡಿದಿಲ್ಲ, ಯಾವುದೇ ಘೋಷಣೆ ಕೂಗಿಲ್ಲ. ನಮ್ಮ ಎದೆಯೊಳಗೆ ಪ್ರೀತಿ, ಅಹಿಂಸೆ, ಸೌಹಾರ್ದ, ಸಹಬಾಳ್ವೆ ಎಂಬ ಆಯುಧಗಳನ್ನು ಹಿಡಿದುಕೊಂಡಿದ್ದೇವೆ. ಮುಂದೆ ಜಗತ್ತಿನಲ್ಲಿ ಶಾಂತಿ ಲಭ್ಯವಾಗುವುದಿದ್ದರೆ ಅದಕ್ಕೆ ಅಹಿಂಸೆಯೇ ಅಸ್ತ್ರ ಎಂಬುದನ್ನು ಗಾಂಧೀಜಿ ಹೇಳಿದ್ದರು. ಪ್ರೀತಿ, ಅಹಿಂಸೆ ದೇಶವನ್ನು ಬಾಳಿಸುತ್ತದೆ ಹೊರತು ನಾಶ ಮಾಡುವುದಿಲ್ಲ. ಲಾಠಿ ದೇಶವನ್ನು ನಾಶ ಮಾಡುತ್ತದೆ. ನಾನು ಪೊಲೀಸರ ಲಾಠಿ ಬಗ್ಗೆ ಹೇಳುತ್ತಿಲ್ಲ. ಇದು ದೊಣ್ಣೆ, ದೇಶವನ್ನು ನಾಶ ಮಾಡುವಂತಹದು’ ಎಂದು ಪರೋಕ್ಷವಾಗಿ ಸಂಘ ಪರಿವಾರದ ವಿರುದ್ಧ ಕಿಡಿಕಾರಿದರು.

ಹೋರಾಟಗಾರ ಜಿ.ಎನ್.ನಾಗರಾಜ್, ‘ಸಾರ್ವಜನಿಕ ಪ್ರದೇಶಗಳ ಪ್ರಯೋಜನವನ್ನು ಕಿತ್ತುಕೊಳ್ಳಲಾಗುತ್ತಿದೆ. ಹಿಂದೆ ನಗರದ ಸುತ್ತಮುತ್ತ 50–60 ಕಡೆ ಪ್ರತಿಭಟನೆಗಳು ನಡೆಯುತ್ತಿತ್ತು. ಈಗ ಕೆ.ಆರ್‌.ಪುರ ಹಾಗೂ ದಾಸರಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾದರೆ ಅವರು ಸ್ವಾತಂತ್ರ್ಯ ಉದ್ಯಾನಕ್ಕೆ ಬರಬೇಕು. ಪ್ರಜಾಪ್ರಭುತ್ವದ ಆಶಯಗಳು ಮರಳಿ ಸಿಗಬೇಕು ಎನ್ನುವ ಆಶಯದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಅನ್ಯಾಯ ನಡೆಯುತ್ತಿರುವುದು ದೊಡ್ಡ ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.

ದಲಿತ ಮುಖಂಡ ಮಾವಳ್ಳಿ ಶಂಕರ್, ‘ದೇಶ ಎಂತಹ ಹಾದಿಯಲ್ಲಿದೆ ಎಂಬುದನ್ನು ನೋಡುತ್ತಿದ್ದೇವೆ. ಹೃದಯ ಅರಳಿಸುವ ಹಬ್ಬಗಳಿಗೆ ಕೋಮು ಬಣ್ಣ ಬಳಿಯಲಾಗುತ್ತಿದೆ. ಬಡತನ, ನಿರುದ್ಯೋಗ, ಹಸಿವು, ದುಡಿಯುವ ಮಹಿಳೆಯರ ಸಮಸ್ಯೆ ಬಗೆಹರಿದಿಲ್ಲ. ಬಡ ಜನರು ಬದುಕು ಬೆಳಗಿಸುವ ದೀಪಾವಳಿ ಬರಬೇಕಿದೆ’ ಎಂದು ಆಶಿಸಿದರು.

‘ನೂರು ವರ್ಷ ಪೂರೈಸಿರುವ ಆರ್‌ಎಸ್‌ಎಸ್‌ಗೆ ಪಥ ಸಂಚಲನ ನಡೆಸಲು ರಾಜ್ಯದ ಯಾವುದೇ ಭಾಗದಲ್ಲಿ ಅವಕಾಶ ನೀಡಬಾರದು. ಮೊದಲು ಸಂಸ್ಥೆ ನೋಂದಣಿ ಮಾಡಿ, ಬಳಿಕ ಲೆಕ್ಕಪರಿಶೋಧನೆ ಮಾಡಿಸಿ, ಹಣದ ವಿವರವನ್ನು ಬಹಿರಂಗಪಡಿಸಬೇಕು. ನಂತರ ಅವಕಾಶ ನೀಡಲಿ’ ಎಂದು ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಹೇಳಿದರು.

ಮಂಜುಳಾ ಭಾರ್ಗವಿ, ಮಾಲತೇಶ್, ಸಬ್ಬನಹಳ್ಳಿ ರಾಜು ಹಾಡಿದರು. ಲೇಖಕಿ ಡಾ. ವಸುಂಧರ ಭೂಪತಿ ಅವರು ಸಂವಿಧಾನ ಪೀಠಿಕೆ ಬೋಧಿಸಿದರು.

ಇದಕ್ಕೂ ಮುನ್ನ ಸಾಹಿತಿಗಳು, ಲೇಖಕರು, ಪ್ರಗತಿಪರ ಚಿಂತಕರು, ಹೋರಾಟಗಾರರು ಕಾರ್ಪೊರೇಷನ್ ವೃತ್ತದಿಂದ ಪುರಭವನದವರೆಗೆ ಫಲಕಗಳನ್ನು ಹಿಡಿದು ಮೆರವಣಿಗೆ ನಡೆಸಿದರು.

ಕಾರ್ಯಕ್ರಮದಲ್ಲಿ ಸೌಹಾರ್ದ ಕರ್ನಾಟಕದ ಕೆ.ಎಸ್.ವಿಮಲಾ, ಸಾಹಿತಿ ಕೆ.ಮರುಳಸಿದ್ದಪ್ಪ, ಡಾ.ವಿಜಯಾ, ಸುಕನ್ಯಾ ಮಾರುತಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.