ಬೆಂಗಳೂರು: ‘ವಿದ್ಯೆ ನಮಗೆ ಉಪ ಜೀವನವಾಗಿದ್ದು, ವಿದ್ಯೆಯನ್ನು ಆಶ್ರಯಿಸಿಕೊಂಡು ಬದುಕಿದ್ದೇವೆ. ಆದರೆ, ವಿದ್ಯಾಜೀವನರಾಗಿ ಆದರ್ಶರಾದವರು ರಾಮಚಂದ್ರರಾಯರು’ ಎಂದು ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸ ವರಖೇಡಿ ಅಭಿಪ್ರಾಯಪಟ್ಟರು.
ರಾಷ್ಟ್ರೋತ್ಥಾನ ಸಾಹಿತ್ಯ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ವಾಂಸ ಪ್ರೊ.ಸಾ.ಕೃ.ರಾಮಚಂದ್ರರಾವ್ ಅವರ ಜನ್ಮಶತಾಬ್ದಿ ಸಂಸ್ಮರಣ ಗ್ರಂಥ ‘ವಿದ್ಯಾಲಂಕಾರ’ ಜನಾರ್ಪಣೆ ಮಾಡಿ, ಮಾತನಾಡಿದರು.
‘ರಾಮಚಂದ್ರರಾಯರನ್ನು ಯಾವುದೇ ಒಂದು ಆಯಾಮದಿಂದ ಅಥವಾ ಯಾವುದೇ ಒಬ್ಬ ವಿದ್ವಾಂಸರಿಂದ ಅರಿಯಲು ಸಾಧ್ಯವಿಲ್ಲ. ವಿದ್ವಾಂಸರಿಗೆ ಅಹಂಕಾರ ಬರಬಾರದೆಂಬ ಉದ್ದೇಶದಿಂದಲೇ ಭಗವಂತ ಇಂತಹವರನ್ನು ಸೃಷ್ಟಿ ಮಾಡುತ್ತಾನೆ. ಅವರದ್ದು ಕೇವಲ ಓದಿನಿಂದ ಬಂದ ವಿದ್ಯೆಯಾಗಿರಲಿಲ್ಲ. ಅವರು ಯಾವುದೇ ಒಂದು ಸೀಮೆಗೂ ಒಳಪಟ್ಟಿರಲಿಲ್ಲ. ಅವರನ್ನು ತಿಳಿಯಲು ಈ ಕೃತಿ ಮಾರ್ಗವಾಗಲಿದೆ’ ಎಂದು ಹೇಳಿದರು.
ಬಹುಭಾಷಾ ವಿದ್ವಾಂಸ ಆರ್. ಗಣೇಶ್, ‘ಕೃತಿಯಲ್ಲಿ ಅವರ ವಿದ್ವತ್ತು ಮತ್ತು ವ್ಯಕ್ತಿತ್ವದ ಬಗ್ಗೆ ವಿವರಿಸಲಾಗಿದೆ. ಆದರ್ಶದ ಕುರಿತು ಬರೆಯುವುದು ಸುಲಭ. ಆದರೆ, ಬಾಳುವುದು ಕಷ್ಟ. ರಾಮಚಂದ್ರರಾಯರು ಬರೆದಂತೆ ಬದುಕಿದ್ದಾರೆ. ಅವರು ಗೌರವ, ಪುರಸ್ಕಾರವನ್ನು ಅಪೇಕ್ಷಿಸಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.
ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ, ‘ಇದು ಅಪರೂಪದ ಗ್ರಂಥವಾಗಿದೆ. ಅವರು ಅಪಾರ ಪ್ರತಿಭೆ ಹೊಂದಿದ್ದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಸಾ.ಕೃ.ರಾಮಚಂದ್ರರಾವ್ ಅವರ ಜತೆಗಿನ ಒಡನಾಟವನ್ನು ಸ್ಮರಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.