ADVERTISEMENT

ಶುಲ್ಕ ಕಟ್ಟಿಲ್ಲ: ಎಸ್ಸೆಸ್ಸೆಲ್ಸಿಗೆ ಬಡ್ತಿ ನೀಡಿಲ್ಲ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 1:16 IST
Last Updated 16 ಜುಲೈ 2021, 1:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಶುಲ್ಕ ಕಟ್ಟದ ಕಾರಣಕ್ಕೆ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯು ಕೊರಟಗೆರೆಯ ಹನುಮಂತಪುರ ನಿವಾಸಿ, ಪರಿಶಿಷ್ಟ ಸಮುದಾಯಕ್ಕೆ ಸೇರಿದ ಗ್ರೀಷ್ಮಾ ನಾಯಕ್ ಎಂಬ ವಿದ್ಯಾರ್ಥಿನಿಗೆ ಒಂಬತ್ತನೇ ತರಗತಿಯಿಂದ 2020–21ನೇ ಶೈಕ್ಷಣಿಕ ಸಾಲಿನಲ್ಲಿ 10ನೇ ತರಗತಿಗೆ ಬಡ್ತಿ ನೀಡಿಲ್ಲ. ಹೀಗಾಗಿ, ಇದೇ 19 ಮತ್ತು 22ರಂದು ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಅವಕಾಶದಿಂದಲೇ ಈಕೆ ವಂಚಿತಳಾಗಿದ್ದಾಳೆ.

ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಪರಿಹಾರ ಕಲ್ಪಿಸಲು ಮುಂದಾದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌, ‘ನಾನೇ ಗ್ರೀಷ್ಮಾ ಜತೆ ಮಾತನಾಡಿದ್ದೇನೆ. ಪರಿಹಾರ ಸೂಚಿಸಿದ್ದೇನೆ’ ಎಂದು ತಿಳಿಸಿದ್ದಾರೆ. ಆಗಸ್ಟ್‌ ತಿಂಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದೂ ಗೊತ್ತಾಗಿದೆ.

‘9ನೇ ತರಗತಿಯಲ್ಲಿ ಶೇ 96ರಷ್ಟು ಅಂಕ ಗಳಿಸಿದ್ದೇನೆ. ಆದರೆ, ಕಳೆದ ವರ್ಷದ ಶಾಲಾ ಶುಲ್ಕ (ವಸತಿ ಮತ್ತು ಊಟದ್ದು) ಬಾಕಿ ಇದ್ದ ಕಾರಣ ನನ್ನನ್ನು ಎಸ್ಸೆಸ್ಸೆಲ್ಸಿ ತರಗತಿಗೆ ಸೇರಿಸಿಕೊಂಡಿಲ್ಲ. ಶುಲ್ಕ ಪಾವತಿಸಲು ಸಮಯ ಕೊಟ್ಟರೆ ಸಾಕು ಪೋಷಕರು ಕಟ್ಟುತ್ತಾರೆ. ಯಾವುದೇ ರಿಯಾಯಿತಿ ಬೇಡ. 10ನೇ ತರಗತಿಯ ಪರೀಕ್ಷೆ ಬರೆಯಲು ದಯಮಾಡಿ ಅವಕಾಶ ಮಾಡಿಕೊಡಿ’ ಎಂದು ಸುರೇಶ್‌ಕುಮಾರ್‌ ಬಳಿ ಗ್ರೀಷ್ಮಾ ಮನವಿ ಮಾಡಿದ್ದಾಳೆ.

ADVERTISEMENT

ಡಿ. 31ರಂದು ಸುರೇಶ್‌ ಕುಮಾರ್‌ಗೆ ಮೊದಲ ಇ– ಮೇಲ್‌ ಮಾಡಿದ್ದ ಗ್ರೀಷ್ಮಾ, ‘ಶುಲ್ಕ ಬಾಕಿ ಇರುವ ಕಾರಣ ಶಾಲೆಯಲ್ಲಿ ದಾಖಲಾತಿ ಮಾಡಿಕೊಂಡಿಲ್ಲ. ಸಹಾಯ ಮಾಡಿ’ ಎಂದು ಮನವಿ ಮಾಡಿದ್ದಳು.

ಫೆ. 2ರಂದು ಮತ್ತೆ ಇ– ಮೇಲ್‌ ಮಾಡಿದ್ದ ಆಕೆ, ‘ಪೂರ್ತಿ ಶುಲ್ಕ ಕಟ್ಟಲು ಹೇಳುತ್ತಿದ್ದಾರೆ. ದಯಮಾಡಿ ನನಗೆ ಸಹಾಯ ಮಾಡಿ, ಕಷ್ಟದಲ್ಲಿದ್ದೇವೆ. ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ’ ಎಂದೂ ಮನವಿ ಮಾಡಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.