
ಬೆಂಗಳೂರು: ಕರ್ನಾಟಕ ರಾಜ್ಯ ಕ್ಷಯರೋಗ ನಿವಾರಣಾ ಸಂಸ್ಥೆಯು ಸಮರ್ಪಕವಾಗಿ ಕಾರ್ಯಾಚರಣೆ ನಡೆಸದ ಕಾರಣ, ಆರೋಗ್ಯ ಇಲಾಖೆಯ ಕ್ಷಯರೋಗ ವಿಭಾಗದಲ್ಲಿ ವಿಲೀನ ಮಾಡಿ ಆದೇಶ ಹೊರಡಿಸಲಾಗಿದೆ.
2024ರ ಡಿಸೆಂಬರ್ನಲ್ಲಿ ನಡೆದ ಸಂಸ್ಥೆಯ ವಿಶೇಷ ಸರ್ವಸದಸ್ಯರ ಸಭೆಯಲ್ಲಿಯೇ ವಿಲೀನಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ ವಿಲೀನ ಮಾಡಲಾಗಿದ್ದು, ಸಂಸ್ಥೆಯ ಆಸ್ತಿ, ಹೊಣೆಗಾರಿಕೆ ಮತ್ತು ಕೆಲಸಗಳನ್ನು ಇಲಾಖೆಯ ಕ್ಷಯರೋಗ ವಿಭಾಗ ನಿರ್ವಹಿಸಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಘೋಷಾ ಆಸ್ಪತ್ರೆಯ ಹಿಂಭಾಗದಲ್ಲಿ 40x60 ಚದರ ಅಡಿ ನಿವೇಶನದಲ್ಲಿ ಸಂಸ್ಥೆಯ ಕಟ್ಟಡವಿದೆ. ಎದೆ ಮತ್ತು ಶ್ವಾಸಕೋಶದ ಆರೋಗ್ಯದ ಮೇಲೆ ಗಮನಹರಿಸುವ ಆರೋಗ್ಯ ಸೌಲಭ್ಯಕ್ಕೆ ಈ ಕಟ್ಟಡವನ್ನು ಉಳಿಸಿಕೊಂಡು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸಲು ಕ್ರಮಕೈಗೊಳ್ಳಬೇಕು ಎಂದು ಹೇಳಲಾಗಿದೆ.
ಸಂಸ್ಥೆಯು ಸುಮಾರು ₹ 98 ಲಕ್ಷ ಸ್ಥಿರ ಠೇವಣಿ ಮೊತ್ತವನ್ನು ಹೊಂದಿದ್ದು, ಅದನ್ನು ಬಾಕಿ ವೇತನ ಮತ್ತು ಪಿಂಚಣಿ ಪಾವತಿ, ಕಟ್ಟಡದ ನವೀಕರಣ ಹಾಗೂ ಉಪಕರಣಗಳ ಪೂರೈಕೆಗೆ ಬಳಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.