ADVERTISEMENT

ಬೆಂಗಳೂರು | ಸುಂಕೇನಹಳ್ಳಿ ಮಾದರಿ ವಾರ್ಡ್‌: ಯೋಜನೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 18:10 IST
Last Updated 16 ಸೆಪ್ಟೆಂಬರ್ 2025, 18:10 IST
<div class="paragraphs"><p>ಬೆಂಗಳೂರು ಕೇಂದ್ರ ನಗರ ಪಾಲಿಕೆ (ಬಿಸಿಸಿಸಿ) ಆಯುಕ್ತ ರಾಜೇಂದ್ರ ಚೋಳನ್</p></div>

ಬೆಂಗಳೂರು ಕೇಂದ್ರ ನಗರ ಪಾಲಿಕೆ (ಬಿಸಿಸಿಸಿ) ಆಯುಕ್ತ ರಾಜೇಂದ್ರ ಚೋಳನ್

   

ಬೆಂಗಳೂರು: ಸುಂಕೇನಹಳ್ಳಿ ವಾರ್ಡ್ ಅನ್ನು ಮಾದರಿ ವಾರ್ಡ್ ಆಗಿ ರೂಪಿಸಲು ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಬೆಂಗಳೂರು ಕೇಂದ್ರ ನಗರ ಪಾಲಿಕೆ (ಬಿಸಿಸಿಸಿ) ಆಯುಕ್ತ ರಾಜೇಂದ್ರ ಚೋಳನ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಗಾಂಧಿ ಬಜಾರ್ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಪಾದಚಾರಿ ಮಾರ್ಗಗಳಲ್ಲಿ ಒತ್ತುವರಿ ತೆರವು,  ಬ್ಲಾಕ್ ಸ್ಪಾಟ್‌, ಅನಧಿಕೃತ ಕೇಬಲ್ ತೆರವು, ತ್ಯಾಜ್ಯ ನಿರ್ವಹಣೆ ಬಗ್ಗೆ ವ್ಯಾಪಾರಸ್ಥರಲ್ಲಿ ಅರಿವು ಮೂಡಿಸುವುದು, ಪಾದಚಾರಿ ವ್ಯಾಪಾರಿಗಳಿಗೆ ಸ್ಥಳ ನಿಗದಿಪಡಿಸುವುದು ಸೇರಿದಂತೆ ಕ್ರಿಯಾಯೋಜನೆ ಸಿದ್ಧಪಡಿಸಲು ಹೇಳಿದರು.

ADVERTISEMENT

ಗಾಂಧಿ ಬಜಾರ್ ರಸ್ತೆಯಲ್ಲಿ ವಾರಕ್ಕೊಮ್ಮೆ ಸ್ಥಳೀಯರು ಮತ್ತು ವಿದ್ಯಾರ್ಥಿಗಳಿಗೆ ವಾಕಥಾನ್ ಹಾಗೂ ತಿಂಗಳಿಗೊಮ್ಮೆ ವಾಹನಗಳ ಸಂಚಾರ ನಿರ್ಬಂಧಿಸಿ, ಸಾಂಸ್ಕೃತಿಕ ಚಟುವಟಿಕಗಳನ್ನು ಆಯೋಜಿಸಲು ರೂಪುರೇಷೆ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪಾರ್ಕಿಂಗ್ ಕಟ್ಟಡ: ಗಾಂಧಿ ಬಜಾರ್‌ನಲ್ಲಿ ‘ಸ್ಮಾರ್ಟ್ ಸಿಟಿ’ ವತಿಯಿಂದ ಬಹು ಅಂತಸ್ತಿನ ಕಾರ್ ಪಾರ್ಕಿಂಗ್ ಕಾಮಗಾರಿ ಪೂರ್ಣಗೊಂಡಿದ್ದು, ಅದನ್ನು ಶೀಘ್ರವೇ ಉದ್ಘಾಟಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಮುಖ್ಯ ಎಂಜಿನಿಯರ್‌ ವಿಜಯ್ ಕುಮಾರ್ ಹರಿದಾಸ್ ಉಪಸ್ಥಿತರಿದ್ದರು. ‎

ಆಟೊಗಳಿಗೆ ಆರ್‌ಎಫ್‌ಐಡಿ: ಆಟೊ ಟಿಪ್ಪರ್‌ಗಳಿಗೆ ರೇಡಿಯೊ ಫ್ರೀಕ್ವೆನ್ಸಿ ಐಡೆಂಡಿಫಿಕೇಷನ್‌ (ಆರ್‌ಎಫ್‌ಐಡಿ) ಅಳವಡಿಸುವಂತೆ ಬೆಂಗಳೂರು ಉತ್ತರ ನಗರ ಪಾಲಿಕೆಯ (ಬಿಎನ್‌ಸಿಸಿ) ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ತ್ಯಾಜ್ಯ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಎಚ್‌ಬಿಆರ್ ಲೇಔಟ್‌ನ ಆಟೊ ಟಿಪ್ಪರ್ ಹಾಗೂ ಕಾಂಪ್ಯಾಕ್ಟರ್ ಮಸ್ಟರಿಂಗ್ ಪಾಯಿಂಟ್‌ಗೆ ಮಂಗಳವಾರ ಭೇಟಿ ನೀಡಿದ ಅವರು,  ಒಟ್ಟು 31 ಆಟೊ ಟಿಪ್ಪರ್‌ಗಳಲ್ಲಿ 28 ಮಾತ್ರ ಇದ್ದಿದ್ದನ್ನು ಗಮನಿಸಿದರು. ಐದು ಕಾಂಪ್ಯಾಕ್ಟರ್‌ಗಳಲ್ಲಿ ನಾಲ್ಕು ಮಾತ್ರ ಇದ್ದವು. ಯಾವುದೇ ವಾಹನಗಳಿಗೂ ಆರ್‌ಎಫ್‌ಐಡಿ ಇಲ್ಲದಿರುವುದನ್ನು ಕಂಡು, ಅದರ ಬಗ್ಗೆ ಕ್ರಮ ಕೈಗೊಳ್ಳಲು ಹೇಳಿದರು.

ಏಕ ಬಳಕೆ ಪ್ಲಾಸ್ಟಿಕ್: ₹62.57 ಲಕ್ಷ ದಂಡ ವಸೂಲಿ
ಜಿಬಿಎ ವ್ಯಾಪ್ತಿಯಲ್ಲಿ ಸೆ.3ರಿಂದ 16ರವರೆಗೆ ಒಟ್ಟು 30,421 ಕೆ.ಜಿ ಏಕ ಬಳಕೆಯ ಪ್ಲಾಸ್ಟಿಕ್‌ ವಶಪಡಿಸಿಕೊಳ್ಳಲಾಗಿದ್ದು, ₹62.57 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಬಿಎಸ್‌ಡಬ್ಲ್ಯುಎಂಎಲ್‌ನ ಸಿಇಒ ಕರೀಗೌಡ ತಿಳಿಸಿದರು. 361 ಸಗಟು ಮಾರಾಟಗಾರರು ಹಾಗೂ 5,220 ರೀಟೈಲ್‌ ಮಾರಾಟಗಾರರ ಮೇಲೆ ದಾಳಿ ನಡೆಸಲಾಗಿದೆ. ಸೆ.16ರಂದು ಒಂದೇ ದಿನ 3,630 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್‌ ವಶಪಡಿಸಿಕೊಂಡು, ₹11.25 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದರು. ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಜಯನಗರ, ಪದ್ಮನಾಭನಗರ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿಯಲ್ಲಿ ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಮಳಿಗೆಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 1,300.75 ಕೆ.ಜಿ ಪ್ಲಾಸ್ಟಿಕ್‌ ವಶಪಡಿಸಿಕೊಂಡು ₹2.95 ಲಕ್ಷ ದಂಡ ವಸೂಲಿ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.