ADVERTISEMENT

ವಿದ್ಯಾರ್ಥಿಗಳಿಗೆ ದಂಡ: ಶಾಲೆ ಮಾನ್ಯತೆ ರದ್ದತಿಗೆ ಒತ್ತಾ‌ಯ

ಶಾಲೆಗೆ ಭೇಟಿ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ತಂಡ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 20:54 IST
Last Updated 16 ಫೆಬ್ರುವರಿ 2020, 20:54 IST

ಬೆಂಗಳೂರು: ಕನ್ನಡ ಮಾತನಾಡಿದರೆ ದಂಡ ವಿಧಿಸುವ ಸುತ್ತೋಲೆ ಹೊರಡಿಸಿರುವಚನ್ನಸಂದ್ರದ ಎಸ್.ಎಲ್‌.ಎಸ್. ಅಂತರರಾಷ್ಟ್ರೀಯ ಗುರುಕುಲ ಶಾಲೆಯ ಮಾನ್ಯತೆಯನ್ನು ರದ್ದು ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಅವರು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಾಧಿಕಾರಕ್ಕೆ ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿಟಿ.ಎಸ್‌.ನಾಗಾಭರಣ,ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಪ್ರಾಧಿಕಾರದ ಕಾರ್ಯದರ್ಶಿಗಳನ್ನು ಒಳಗೊಂಡ ನಿಯೋಗ ಶಾಲೆಗೆ ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿತು.ಮೊದಲ ಬಾರಿ ಕನ್ನಡ ಮಾತನಾಡಿದರೆ ₹ 50, ಪುನರಾವರ್ತನೆಯಾದರೆ ₹ 100 ದಂಡ ವಿಧಿಸುವುದಾಗಿ ಮಕ್ಕಳ ಪೋಷಕರಿಗೆ ಸೂಚನೆ ಪತ್ರವನ್ನು ಕಳಿಸಿರುವುದು ಸಾಬೀತಾಯಿತು. ಶಾಲೆಯ ಪ್ರಾಂಶುಪಾಲರು ಈ ರೀತಿಯ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿದರು.

‘ಶಾಲೆಯು ಶಿಕ್ಷಣ ಹಕ್ಕು ಕಾಯ್ದೆಯ ಪ್ರಕರಣ 2 ಬಿ, 13, 16, 17, 23 ಮತ್ತು 29ನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಕಂಡುಬಂದಿದೆ. ಶಾಲೆಯ ವಿವರ, ಶುಲ್ಕ, ಪ್ರವೇಶ ವಿಧಾನ ಸೇರಿದಂತೆ ವಿವಿಧ ಮಾಹಿತಿಗಳನ್ನು ನಮೂದಿಸಿಲ್ಲ. ಮಕ್ಕಳು ಕೂಡಾ ಭಯದಲ್ಲಿಯೇ ಕಲಿಯುತ್ತಿದ್ದಾರೆ.ನೆಲದ ಕಾನೂನುಗಳಾದ ಶಿಕ್ಷಣ ಹಕ್ಕು ಕಾಯಿದೆ (2009), ಶಿಕ್ಷಣ ಹಕ್ಕು ನಿಯಮಗಳು (2012), ಕನ್ನಡ ಕಲಿಕಾ ಅಧಿನಿಯಮ 2015 ಮತ್ತು ಕನ್ನಡ ಕಲಿಕಾ ನಿಯಮಗಳು 2017 ನ್ನು ಪೂರ್ಣ ಉಲ್ಲಂಘಿಸಿದೆ’ ಎಂದು ನಾಗಾಭರಣ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.