
ಬಂಧನ (ಸಾಂದರ್ಭಿಕ ಚಿತ್ರ)
ಬೆಂಗಳೂರು: ನಗರದ ಶಾಲೆಯೊಂದರ ವಿದ್ಯಾರ್ಥಿಯ ಕಪಾಳಕ್ಕೆ ಶಿಕ್ಷಕ ಹೊಡೆದಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿದ್ಯಾರ್ಥಿಯ ತಂದೆ ನೀಡಿದ ದೂರಿನ ಮೇಲೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರನ್ನು ಬಂಧಿಸಲಾಗಿದೆ.
‘ಠಾಣಾ ವ್ಯಾಪ್ತಿಯ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿರುವ ನನ್ನ ಮಗನ ಕಪಾಳಕ್ಕೆ ಶಿಕ್ಷಕ ಬಾರಿಸಿದ್ದರಿಂದ ಕೆನ್ನೆ ಊದಿಕೊಂಡಿದೆ. ಹಾಗಾಗಿ ಸಂಜೆ 5.30ರವರೆಗೂ ಅಲ್ಲಿಯೇ ಇರಿಸಿಕೊಂಡು ನಂತರ ಕಳುಹಿಸಿದರು. ಮನೆಗೆ ಬಂದ ಬಳಿಕ ಮಗನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದೇನೆ’ ಎಂದು ವಿದ್ಯಾರ್ಥಿ ತಂದೆ ದೂರಿನಲ್ಲಿ ತಿಳಿಸಿದ್ದಾರೆ.
‘ಸಣ್ಣ ತಪ್ಪು ಮಾಡಿದ ಮಗನ ಮೇಲೆ ಹಲ್ಲೆ ಮಾಡಿದ ಶಿಕ್ಷಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದಾರೆ.
‘ಊಟದ ವೇಳೆ ವಿದ್ಯಾರ್ಥಿ ತನ್ನ ಸಹಪಾಠಿಯ ಕುರ್ಚಿಯನ್ನು ಎಳೆದಿದ್ದ. ತರಗತಿಯಲ್ಲೂ ಇದೇ ರೀತಿ ಕುರ್ಚಿ ಎಳೆದ ಪರಿಣಾಮ ವಿದ್ಯಾರ್ಥಿಯೊಬ್ಬ ಕೆಳಗೆ ಬಿದ್ದಿದ್ದ. ಕೆಳಗೆ ಬಿದ್ದ ವಿದ್ಯಾರ್ಥಿ ಶಿಕ್ಷಕರಿಗೆ ದೂರು ನೀಡಿದ್ದ. ಹಾಗಾಗಿ ತಪ್ಪು ಮಾಡಿದ ವಿದ್ಯಾರ್ಥಿಯನ್ನು ಸಿಬ್ಬಂದಿ ಕೊಠಡಿಗೆ ಕರೆದು, ಶಿಕ್ಷಕರ ಎದುರೇ ಕಪಾಳಕ್ಕೆ ಹೊಡೆದಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.