ಬೆಂಗಳೂರು: ವರ್ಗಾವಣೆಗೊಂಡಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರು ಜಾರಿ ಆದೇಶವನ್ನು ಪಾಲಿಸಬೇಕೆ, ಬೇಡವೇ ಎಂಬ ಗೊಂದಲ ಮುಂದುವರಿದಿದ್ದು, ಇದೇ 21ರೊಳಗೆ ಎಲ್ಲರಿಗೂ ಒಟ್ಟಿಗೇ ‘ಮೂವ್ಮೆಂಟ್ ಆರ್ಡರ್’ ನೀಡಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಕೆ .ಜಿ. ಜಗದೀಶ್ ತಿಳಿಸಿದ್ದಾರೆ.
‘ಗೊಂದಲ ಮಾಡಿಕೊಳ್ಳುವ ಅಗತ್ಯ ಇಲ್ಲ. ವರ್ಗಾವಣೆಯ ಸಮಸ್ಯೆ ಇಲ್ಲದ ಕಡೆಗಳಲ್ಲಷ್ಟೇ ಮೂವ್ಮೆಂಟ್ ಆದೇಶ ಕೊಡಲಾಗಿದೆ. ಬಹುಶಃ ಇದರಿಂದಲೇ ಗೊಂದಲ ಸೃಷ್ಟಿಯಾಗಿದೆ. ಎಲ್ಲ ಪ್ರಕ್ರಿಯೆ ಕೊನೆಗೊಂಡ ಬಳಿಕ ವರ್ಗಾವಣೆ ಕೌನ್ಸೆಲಿಂಗ್ ಆದೇಶವನ್ನು ಎಲ್ಲರಿಗೂ ಒಟ್ಟಿಗೇ ಕೊಡೋಣ ಎಂದು ಫೋನ್ ಮೂಲಕ ಸೂಚನೆ ನೀಡಲಾಗಿದೆ.ಬಹುತೇಕ ಮುಂದಿನ ವಾರದ ಅಂತ್ಯದೊಳಗೆ ಈ ಆದೇಶ ನೀಡುವುದು ಸಾಧ್ಯವಾಗಬಹುದು’ ಎಂದು ಅವರು ಶುಕ್ರವಾರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಡ್ಡಾಯ, ಘಟಕದ ಹೊರಗಿನ ವರ್ಗಾವಣೆ ಪ್ರಕ್ರಿಯೆ ಕೊನೆಗೊಳ್ಳದಿದ್ದರೆ ಕೋರಿಕೆ ವರ್ಗಾವಣೆಗೊಂಡವರಿಗೆ ಹುದ್ದೆ ಖಾಲಿ ಇರುವುದಿಲ್ಲ. 26ಕ್ಕೆ ವರ್ಗಾವಣೆ ಪ್ರಕ್ರಿಯೆ ಎಲ್ಲವೂ ಕೊನೆಗೊಳ್ಳುತ್ತದೆ. ಮುಖ್ಯ ಶಿಕ್ಷಕರು, ವಿಶೇಷ ಶಿಕ್ಷಕರ ವರ್ಗಾವಣೆ ವಿಷಯ ಇದರ ಮೇಲೆ ಪರಿಣಾಮ ಬೀರುವುದಿಲ್ಲ’ ಎಂದರು.
‘ನ್ಯಾಯಾಲಯದ ನಿರ್ದೇಶನದಂತೆ ಹಿರಿಯ ವಕೀಲರು ನೀಡಿರುವ ಸಲಹೆಗಳನ್ನು ಪರಿಶೀಲಿಸಲಾಗುತ್ತಿದೆ. ಅವರಿಗೆ ಹಿಂಬರಹ ಕೊಡುತ್ತೇವೆ.ಅದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದರು.
16ರಿಂದ ಕೌನ್ಸೆಲಿಂಗ್: ಪ್ರಾಥಮಿಕ ಶಾಲಾ ಶಿಕ್ಷಕ ವೃಂದದ ಅಂತರ ಘಟಕ ವರ್ಗಾವಣಾ ಕೌನ್ಸೆಲಿಂಗ್ ಇದೇ 16ರಿಂದ 19ರವರೆಗೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.