ಬೆಂಗಳೂರು: ಬೈಕ್ ವ್ಹೀಲಿಂಗ್ ಮಾಡಲು ಬಂದವರೆಂದು ಭಾವಿಸಿ ಇಬ್ಬರು ಯುವಕರನ್ನು ಹಿಡಿದು ಹಲ್ಲೆ ನಡೆಸಿದ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶಾಸಕ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಮೇ 8ರಂದು ಬೆಳಿಗ್ಗೆ 7.30ರ ಸುಮಾರಿಗೆ ಜಕ್ಕೂರಿನಲ್ಲಿರುವ ಸ್ನೇಹಿತನನ್ನು ಭೇಟಿ ಮಾಡಲು ಹುಜೈಫ್ ಎಂಬಾತನ ಜತೆ ಸ್ಕೂಟರ್ನಲ್ಲಿ ಪಾದರಾಯನಪುರ ನಿವಾಸಿ ಮೊಹಮ್ಮದ್ ಶಾಹಿದ್
ತೆರಳಿದ್ದ. ಇದೇ ವೇಳೆ ಸಹಕಾರನಗರ ಪಾರ್ಕ್ ಬಳಿಯ ರಸ್ತೆಯಲ್ಲಿ ಕೆಲವರು ಬೈಕ್ ವ್ಹೀಲಿಂಗ್ ಮಾಡುತ್ತಿದ್ದರು. ಬೈಕ್ ವ್ಹೀಲಿಂಗ್
ಮಾಡಲು ಬಂದಿರುವ ಯುವಕರು ಇವರೇ ಎಂದು ಭಾವಿಸಿ ಸ್ಥಳೀಯರು ಹಲ್ಲೆ ನಡೆಸಿದ್ದರು.
‘ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿ ಉದ್ದೇಶಪೂರ್ವಕವಾಗಿ ದೌರ್ಜನ್ಯ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಯುವಕರನ್ನು ನಿಂದಿಸಿರುವ ಮತ್ತು ಹಲ್ಲೆ ನಡೆಸಿದ ದೃಶ್ಯವಿರುವ ವೀಡಿಯೊ ತುಣುಕು ವೈರಲ್ ಆಗಿದೆ’ ಎಂದು ಪ್ರವೀಣ್ ಸೂದ್ ಅವರಿಗೆ ಮುಸ್ಲಿಂ ಸಮುದಾಯದ ಮುಖಂಡರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.