ಬೆಂಗಳೂರು: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು, ಸಂಸದರು, ಮಂತ್ರಿಗಳು, ಶಾಸಕರು, ಅಧಿಕಾರಿಗಳು, ಜನಸಾಮಾನ್ಯರವರೆಗೂ ಯಾರಿಗೂ ವಿಶ್ವಾಸ ಇಲ್ಲ. ಹೀಗಾಗಿ, ನಾವು ಅವಿಶ್ವಾಸ ನಿರ್ಣಯ ಮಂಡಿಸಿದ್ದೇವೆ’ ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್ ಹೇಳಿದರು.
ವಿಧಾನಸಭೆಯಲ್ಲಿ ಪಕ್ಷ ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಿದ ಅವರು, ‘ಈ ಅವಿಶ್ವಾಸ ನಿರ್ಣಯ ಕಾಂಗ್ರೆಸ್ನದ್ದಲ್ಲ, ರಾಜ್ಯದ ಜನರದ್ದು’ ಎಂದರು.
'ಬಿಡಿಎ ಹಗರಣದಲ್ಲಿ ಆರೋಪಿಯಾಗಿರುವ ವ್ಯಕ್ತಿ, ಅವರ ಹೆಸರು ಹೇಳಲು ನಾನು ಹೋಗುವುದಿಲ್ಲ. ಆದರೆ ಅವರು ಸುದ್ದಿ ವಾಹಿನಿ ಮೇಲೆ, ನಮ್ಮ ನಾಯಕರಾದ ಸುರ್ಜೇವಾಲ ಅವರ ವಿರುದ್ಧ ಟ್ವೀಟ್ ಮಾಡಿದ್ದಾರೆ. ಅವರದ್ದೇ ಸರ್ಕಾರ ಇದೆ. ಸುದ್ದಿ ವಾಹಿನಿ ಅಥವಾ ಸುರ್ಜೇವಾಲ ಅವರು ತಪ್ಪು ಮಾಡಿದ್ದರೆ, ಟ್ವೀಟ್ ಮಾಡುವುದು ಬೇಡ. ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಲಿ. ನನ್ನನ್ನೂ ಕಳುಹಿಸಲಿ. ನಾಯಕರಾದ ಸಿದ್ದರಾಮಯ್ಯ ಅವರನ್ನೂ ಕಳುಹಿಸಲಿ. ತಪ್ಪು ಮಾಡಿದ್ದರೆ ಅದನ್ನು ಅನುಭವಿಸಲು ನಾವು ಸಿದ್ಧ’ ಎಂದರು.
'ಈ ವಿಚಾರದಲ್ಲಿ ವಿರೋಧ ಪಕ್ಷದ ನಾಯಕರ ಹೇಳಿಕೆಗೆ ಸಂಪೂರ್ಣ ಬೆಂಬಲ ಇದೆ. ಅಧಿಕಾರಿಗಳು, ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳಿ. ಈಗೇಕೆ ತನಿಖೆಗೆ ಹೆದರುತ್ತಿದ್ದೀರಿ. ಅದರರ್ಥ ನೀವೂ ಈ ಹಗರಣದಲ್ಲಿ ಶಾಮೀಲಾಗಿದ್ದೀರಿ ಎಂಬ ಭಾವನೆ ಮೂಡುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.