ಬೆಂಗಳೂರು: ಕೆ.ಆರ್.ಪುರ ಬಳಿ ವೃದ್ಧೆಯೊಬ್ಬರ ಪ್ರಜ್ಞೆ ತಪ್ಪಿಸಿದ್ದ ಮಹಿಳೆಯೊಬ್ಬಳು, ₹ 95 ಸಾವಿರ ಮೌಲ್ಯದ ಚಿನ್ನದ ಸರ ಕದ್ದೊಯ್ದಿದ್ದಾಳೆ.
ದುರ್ಗಾಪರಮೇಶ್ವರಿ ದೇವಸ್ಥಾನ ಬಳಿ ಜೂನ್ 18ರಂದು ಮಧ್ಯಾಹ್ನ ಈ ಘಟನೆ ನಡೆದಿದೆ. ಆ ಸಂಬಂಧ ವೃದ್ಧೆ ಜಯಲಕ್ಷ್ಮಿ, ಕೆ.ಆರ್.ಪುರ ಠಾಣೆಗೆ ದೂರು ನೀಡಿದ್ದಾರೆ.
‘ಜಯಲಕ್ಷ್ಮಿ ಅವರು ಮಗಳ ಜೊತೆ ಮಾರುಕಟ್ಟೆಗೆ ಹೋಗಿದ್ದರು. ಕೆಲಸವಿದ್ದಿದ್ದರಿಂದ ಮಗಳು, ಅಲ್ಲಿಂದಲೇ ಬ್ಯಾಂಕ್ಗೆ ತೆರಳಿದ್ದರು. ವೃದ್ಧೆಯೊಬ್ಬರೇ ನಡೆದುಕೊಂಡು ಮನೆಯತ್ತ ಹೊರಟಿದ್ದರು. ಎದುರಿಗೆ ಬಂದಿದ್ದ ಮಹಿಳೆ, ಕೃತ್ಯ ಎಸಗಿ ಪರಾರಿಯಾಗಿದ್ದಾಳೆ’ ಎಂದು ಪೊಲೀಸರು ಹೇಳಿದರು.
‘ವೃದ್ಧೆಯನ್ನು ಮಾತನಾಡಿಸಿದ್ದ ಮಹಿಳೆ, ‘ನನ್ನ ಮಗಳು ನಾಲ್ಕು ತಿಂಗಳ ಗರ್ಭಿಣಿ. ಆಕೆಯ ಆರೋಗ್ಯ ತಪಾಸಣೆಗೆ ಉತ್ತಮ ಆಸ್ಪತ್ರೆ ಯಾವುದಿದೆ’ ಎಂದು ಕೇಳಿದ್ದಳು. ‘ದೀಪಾ ಆಸ್ಪತ್ರೆ ಇದೆ’ ಎಂದಿದ್ದ ವೃದ್ಧೆ, ಆರೋಪಿಯನ್ನು ಕರೆದುಕೊಂಡು ಮುಂದಕ್ಕೆ ಸಾಗುತ್ತಿದ್ದರು. ಅದೇ ವೇಳೆ ಮುಖದ ಮೇಲೆ ಯಾವುದೋ ಔಷಧಿ ಸಿಂಪಡಿಸಿದ ಅನುಭವ ವೃದ್ಧೆಗೆ ಆಗಿತ್ತು. ನಂತರ, ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರು ಎಂದು ಅವರು ದೂರು ನೀಡಿದ್ದಾರೆ’ ಎಂದರು.
‘ಕೆಲ ಹೊತ್ತಿನ ನಂತರ ಎಚ್ಚರವಾದಾಗ ವೃದ್ಧೆಯ ಕೊರಳಲ್ಲಿ ಚಿನ್ನದ ಸರಇರಲಿಲ್ಲ. ಮಹಿಳೆಯೇ ಅದನ್ನು ಕದ್ದುಕೊಂಡು ಹೋಗಿರಬಹುದೆಂಬ ಅನುಮಾನವಿದೆ. ಆಕೆಯನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.