ADVERTISEMENT

ಸಂಚಾರ ದಟ್ಟಣೆಯಲ್ಲೇ ಬರ್ತಾರೆ ಕಳ್ಳರು!

ನಡುರಸ್ತೆಯಲ್ಲೇ ದಾಳಿ ಮಾಡಿದ ದುಷ್ಕರ್ಮಿಗಳು l ಕಾರಿನೊಳಗೆ ಬಂಧಿ ಆಗಿದ್ದ ಮಹಿಳೆ ಬಿಚ್ಚಿಟ್ಟ ಕರಾಳ ಅನುಭವ

ಸಂತೋಷ ಜಿಗಳಿಕೊಪ್ಪ
Published 9 ಜೂನ್ 2019, 20:00 IST
Last Updated 9 ಜೂನ್ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಇಷ್ಟು ದಿನ ಯಾರೂ ಇಲ್ಲದ ವೇಳೆ ಮನೆ, ಕಚೇರಿಗಳಲ್ಲಿ ಕಳವು ಮಾಡುತ್ತಿದ್ದ ಕಳ್ಳರು, ಇದೀಗ ಸಂಚಾರ ದಟ್ಟಣೆಯಲ್ಲೇ ಕಾರುಗಳನ್ನು ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದಾರೆ.

ನಗರದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಮುಖ ರಸ್ತೆಗಳಲ್ಲಿ ನಿತ್ಯವೂ ಸಂಚಾರ ದಟ್ಟಣೆಯದ್ದೇ ದೊ‌ಡ್ಡ ಸಮಸ್ಯೆಯಾಗಿದೆ. ಆದರೆ, ಆ ದಟ್ಟಣೆಯೇ ಕಳ್ಳರಿಗೆ ಕೃತ್ಯ ಎಸಗುವ ತಾಣವಾಗಿ ಮಾರ್ಪಟ್ಟಿದೆ. ವಾಹನಗಳ ದಟ್ಟಣೆ ಇರುವ ರಸ್ತೆಯಲ್ಲಿ ಕೆಲ ದುಷ್ಕರ್ಮಿಗಳು, ರಾಜಾರೋಷವಾಗಿ ಕಳ್ಳತನ ಮಾಡುತ್ತಿದ್ದಾರೆ. ಆ ಬಗ್ಗೆ ನಗರದ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗುತ್ತಿದ್ದು, ಆರೋಪಿಗಳ ಪತ್ತೆ ಮಾತ್ರ ಆಗಿಲ್ಲ.

ಇತ್ತೀಚೆಗೆ ಹೊಸೂರು ರಸ್ತೆಯ ಕೋರಮಂಗಲ ಫೋರಂ ಸಿಗ್ನಲ್‌ ಬಳಿ ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದ ಖಾಸಗಿ ಕಂಪನಿ ಉದ್ಯೋಗಿ ರಿಜು ದೀಕ್ಷಿತ್ ಎಂಬುವರ ಕಾರಿನ ಮೇಲೆ ಕಳ್ಳರು ದಾಳಿ ಮಾಡಿದ್ದರು. ಕಾರಿನೊಳಗೇ 15ನಿಮಿಷ ಬಂಧಿಯಾಗಿದ್ದ ರಿಜು, ತಮ್ಮ ಕರಾಳ ಅನುಭವವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ‘ಬೆಂಗಳೂರು ನಗರ ಪೊಲೀಸ್’ ಖಾತೆಗೂ ಟ್ಯಾಗ್ ಮಾಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

‘ದಟ್ಟಣೆಯಲ್ಲಿ ಸಿಲುಕಿ ಕಾರಿನೊಳಗೆ ಕುಳಿತಿದ್ದ ವೇಳೆ ಮೂವರು ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿದ್ದರು. ಕಾರಿನ ಗಾಜುಗಳನ್ನು ಒಡೆಯಲು ಯತ್ನಿಸಿದ್ದರು. ಹಿಂಬದಿ ಸೀಟಿನಲ್ಲಿದ್ದ ಲ್ಯಾಪ್‌ಟಾಪ್ ಹಾಗೂ ಇತರ ವಸ್ತುಗಳನ್ನು ಕದಿಯುವುದು ಅವರ ಉದ್ದೇಶವಾಗಿತ್ತು. ನನ್ನ ಪುಣ್ಯ ಚೆನ್ನಾಗಿತ್ತು. ಬಾಗಿಲು ಲಾಕ್‌ ಮಾಡಿದ್ದರಿಂದ ಹಾಗೂ ಗಾಜುಗಳು ಗಟ್ಟಿಯಾಗಿದ್ದರಿಂದ ನಾನು ಬಚಾವಾದೆ’ ಎಂದು ರಿಜು ಹೇಳಿದ್ದಾರೆ.

ಸತ್ತು ಬದುಕಿದಂತಾಯಿತು: ‘ಕಚೇರಿ ಕೆಲಸ ಮುಗಿಸಿಕೊಂಡು ಸಂಜೆ ಕಾರಿನಲ್ಲಿ ಮನೆಗೆ ಹೊರಟಿದ್ದೆ.ಲ್ಯಾಪ್‌ಟಾಪ್, ಮೊಬೈಲ್, ನಗದು ಹಾಗೂ ಇತರೆ ಬೆಲೆಬಾಳುವ ವಸ್ತುಗಳು ಕಾರಿನಲ್ಲಿದ್ದವು. ಕೋರಮಂಗಲ ಫೋರಂ ಸಿಗ್ನಲ್‌ ಬಳಿ ದಟ್ಟಣೆ ಉಂಟಾಗಿ ವಾಹನಗಳು ಸಾಲು
ಗಟ್ಟಿ ನಿಂತಿದ್ದವು. ರಸ್ತೆ ವಿಭಜಕದ ಪಕ್ಕವೇ ಕಾರು ನಿಲ್ಲಿಸಿದ್ದೆ’ ಎಂದು ರಿಜು ಹೇಳಿಕೊಂಡಿದ್ದಾರೆ.

‘ವಾಹನಗಳ ಮಧ್ಯೆಯೇ ಓಡಾಡುತ್ತಿದ್ದ ಅಪರಿಚಿತನೊಬ್ಬ, ಸಹಾಯ ಕೇಳುವ ನೆಪದಲ್ಲಿ ನನ್ನ ಕಾರಿನ ಬಳಿ ಬಂದು ಕಿಟಕಿ ಬಡಿದಿದ್ದ. ನಾನು ಕಿಟಕಿ ತೆರೆದಿರಲಿಲ್ಲ. ಆತ ಹಿಂಬದಿ ಕಿಟಕಿ ಬಳಿ ಹೋಗಿ ಗಾಜು ಬಡಿಯಲಾರಂಭಿಸಿದ್ದ. ಅದೇ ವೇಳೆ ಮತ್ತಿಬ್ಬರು ಕಾರಿನ ಬಳಿ ಹಾಜರಾಗಿದ್ದರು. ಅವರೆಲ್ಲರೂ ಒಟ್ಟಿಗೆ ಕಿಟಕಿ ಬಡಿಯಲಾರಂಭಿಸಿದರು. ನನಗೆ ಭಯವಾಗಿ, ಕಾರಿನ ಬಾಗಿಲುಗಳನ್ನು ಲಾಕ್‌ ಮಾಡಿದೆ.’

‘ಕಾರಿನೊಳಗೆ ಎಷ್ಟೇ ಕಿರುಚಾಡಿದರೂ ಹೊರಗೆ ಕೇಳಿಸುತ್ತಿರಲಿಲ್ಲ. ದಟ್ಟಣೆ ಕಡಿಮೆಯಾಗಲಿ ಎಂದು ಕಾಯುತ್ತ ಕುಳಿತಿದ್ದೆ. ಒಬ್ಬಾತ, ಕಾರಿನ ಹಿಂಬದಿ ಬಂದು ಡಿಕ್ಕಿ ಒಡೆದು ತೆರೆಯಲು ಯತ್ನಿಸಿ ವಿಫಲನಾದ. 15 ನಿಮಿಷಗಳ ಬಳಿಕ ವಾಹನಗಳು ಒಂದೊಂದಾಗಿ ಮುಂದಕ್ಕೆ ಹೋಗಲಾರಂಭಿಸಿದವು. ಆಗ ಮೂವರೂ ಓಡಿಹೋದರು. ನಿಟ್ಟುಸಿರು ಬಿಟ್ಟು ಕಾರು ಚಲಾಯಿಸಿಕೊಂಡು ಸಿಗ್ನಲ್‌ ದಾಟಿದೆ. ಈ ಘಟನೆಯಿಂದಾಗಿ ಸತ್ತು ಬದುಕಿದ ಅನುಭವವಾದಂತಾಯಿತು’ ಎಂದು ರಿಜು ಹೇಳಿಕೊಂಡಿದ್ದಾರೆ.

‘ನಾನು ಒಬ್ಬಳೇ ಕಾರಿನಲ್ಲಿದ್ದೆ.ಅದನ್ನು ತಿಳಿದ ಅಪರಿಚಿತ, ಸಹಚರರನ್ನು ಕರೆಸಿ ದಾಳಿ ಮಾಡಿಸಿದ್ದ. ಕಾರಿನಲ್ಲಿದ್ದ ವಸ್ತುಗಳನ್ನು ಕದಿಯುವುದು ಅವರ ಉದ್ದೇಶವಾಗಿತ್ತು ಎಂಬುದು ಆ ನಂತರವೇ ತಿಳಿಯಿತು. ಇದೇ ಸಿಗ್ನಲ್‌ನಲ್ಲಿ ಹಲವರಿಗೆ ಇಂಥ ಅನುಭವವಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ನಡೆದಿದ್ದ ಪ್ರಕರಣಗಳು

* ರಾಜಾಜಿನಗರದ ವಾಟಾಳ್ ನಾಗರಾಜ್ ರಸ್ತೆಯ ದಟ್ಟಣೆಯಲ್ಲಿ ಸಿಲುಕಿದ್ದ ಪಿ.ಎಂ.ಪ್ರಕಾಶ್ ರಾವ್ ಎಂಬುವರ ಕಾರಿನ ಗಾಜು ಒಡೆದಿದ್ದ ದುಷ್ಕರ್ಮಿಗಳಿಬ್ಬರು, ₹ 6 ಸಾವಿರ, ಎಟಿಎಂ ಕಾರ್ಡ್‌ಗಳು ಹಾಗೂ ಮೊಬೈಲ್‌ ಕದ್ದೊಯ್ದಿದ್ದರು. ಆ ಸಂಬಂಧ ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

*ಶರ್ಮಿಳಾ ಶಾ ಎಂಬುವರ ಕಾರು ದಟ್ಟಣೆಯಲ್ಲಿ ಸಿಲುಕಿದ್ದಾಗ ಅಪರಿಚಿತನೊಬ್ಬ ಬಾಗಿಲಿನ ಕಿಟಕಿ ಬಡಿದಿದ್ದ. ಕಿಟಕಿ ತೆರೆಯುತ್ತಿದ್ದಂತೆ, ಮತ್ತೊಬ್ಬ ಹಿಂದಿನ ಬಾಗಿಲಿನ ಕಿಟಕಿಯ ಗಾಜು ಒಡೆದು ಮೊಬೈಲ್ ಕದ್ದೊಯ್ದಿದ್ದಾನೆ

* ಕೃಷ್ಣರಾಜು ಎಂಬುವರ ಕಾರಿನ ಮೇಲೂ ಕೋರಮಂಗಲ ಫೋರಂ ಸಿಗ್ನಲ್‌ನಲ್ಲೇ ದುಷ್ಕರ್ಮಿಗಳು ದಾಳಿ ಮಾಡಿ ಕಳ್ಳತನಕ್ಕೆ ಯತ್ನಿಸಿದ್ದಾರೆ.

* ಶಾಂತಿನಗರದ ಡಬಲ್ ರೋಡ್‌ನ ದಟ್ಟಣೆಯಲ್ಲಿ ಸಿಲುಕಿದ್ದಡಿ. ಹುಸೈನ್ ಎಂಬುವರ ಕಾರಿನ ಕಿಟಕಿಯ ಗಾಜು ಒಡೆದಿದ್ದ ಇಬ್ಬರು ದುಷ್ಕರ್ಮಿಗಳು, ಮೊಬೈಲ್ ಹಾಗೂ ದಾಖಲೆಗಳನ್ನು ಕದ್ದುಕೊಂಡು ಹೋಗಿದ್ದಾರೆ.

ಮಾಹಿತಿ ಪಡೆದ ಪೊಲೀಸರು

ಮಹಿಳೆಯನ್ನು ಸಂಪರ್ಕಿಸಿದ್ದ ಕೋರಮಂಗಲ ಪೊಲೀಸರು, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.ಆ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ‘ದುಷ್ಕರ್ಮಿಗಳು ಕಳ್ಳತನಕ್ಕೆ ಯತ್ನಿಸಿ ಪರಾರಿಯಾಗಿದ್ದಾರೆ. ಸ್ಥಳದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.