ಕೆಂಗೇರಿ: ಇಲ್ಲಿಯಉಪನಗರದಲ್ಲಿರುವ ಸಂತ ಫ್ರಾನ್ಸಿಸ್ ಚರ್ಚ್ಗೆ ನುಗ್ಗಿ ಕಳ್ಳತನ ಮಾಡಿರುವ ದುಷ್ಕರ್ಮಿಗಳು, ಪೀಠೋಪಕರಣಗಳನ್ನು ಒಡೆದು ಹಾಕಿ ಪರಾರಿಯಾಗಿದ್ದಾರೆ.
ಸೋಮವಾರ ತಡರಾತ್ರಿ ಈ ಘಟನೆ ನಡೆದಿದ್ದು, ಕೆಂಗೇರಿ ಠಾಣೆ ಪೊಲೀಸರು ಶ್ವಾನದಳದ ಸಮೇತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಚರ್ಚ್ ಮೇಲೆ ದಾಳಿ ನಡೆದಿದೆ’ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. ಚರ್ಚ್ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ‘ಯಾರೋ ಕಳ್ಳರು ಹಣಕ್ಕಾಗಿ ಈ ರೀತಿ ಮಾಡಿದ್ದಾರೆ. ಅವರ ಕೃತ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾ
ಗಿದೆ’ ಎಂದು ಪೊಲೀಸರು ಹೇಳಿದ ಬಳಿಕವೇ ಗೊಂದಲ ನಿವಾರಣೆ ಆಯಿತು.
‘ಚರ್ಚ್ ಹಿಂಭಾಗದಿಂದ ಆವರಣದೊಳಗೆ ನುಗ್ಗಿದ್ದ ಕಳ್ಳ, ಮುಖ್ಯ ಬಾಗಿಲನ್ನು ನಕಲಿ ಕೀ ಬಳಸಿ ತೆಗೆದಿದ್ದಾನೆ. ನಂತರ, ಹಲವು ಕಡೆ ಹಣಕ್ಕಾಗಿ ಹುಡುಕಾಟ ನಡೆಸಿದ್ದಾನೆ. ಯೇಸು ಶಿಲುಬೆ ಕೆಳಗಿರುವ ಕಪಾಟನ್ನೂ ತೆರೆದು ನೋಡಿದ್ದಾನೆ. ಅದರಲ್ಲಿದ್ದ ಪ್ರಸಾದವನ್ನೂ ಹೊರಕ್ಕೆ ಚೆಲ್ಲಾಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.
‘ಚರ್ಚ್ನ ವೇದಿಕೆಯಲ್ಲಿದ್ದ ಹೂ ಕುಂಡ, ಟೇಬಲ್ ಹಾಗೂ ಬಟ್ಟೆಗಳನ್ನೂ ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದಾನೆ. ವೇದಿಕೆ ಸಮೀಪದಲ್ಲೇ ಇದ್ದ ಹಣದ ಡಬ್ಬಿಯೊಂದನ್ನು ಚರ್ಚ್ನ ಹಿಂಭಾಗಕ್ಕೆ ತೆಗೆದುಕೊಂಡು ಹೋಗಿ ಅದರಲ್ಲಿದ್ದ ಹಣವನ್ನು ಪಡೆದುಕೊಂಡಿದ್ದಾನೆ’ ಎಂದು ತಿಳಿಸಿದರು.
‘ಚರ್ಚ್ ಫಾದರ್ ಸತೀಶ್ ಕುಮಾರ್ ಅವರು ಸೋಮವಾರ ರಾತ್ರಿ ಕೆಲಸ ನಿಮಿತ್ತ ಹೊರಗಡೆ ಹೋಗಿದ್ದರು’ ಎಂದರು.
ಚರ್ಚ್ಗೆ ಭೇಟಿ ನೀಡಿದ ನಿವೃತ್ತ ಆರ್ಚ್ ಬಿಷಪ್ ಬರ್ನಾರ್ಡ್ ಮೊರಾಸ್, ‘ಕಳ್ಳತನ ಮಾಡುವ ಭರದಲ್ಲಿ ಆರೋಪಿಗಳು ಚರ್ಚ್ಗೆ ಸೇರಿದ್ದ ವಸ್ತುಗಳಿಗೆ ಹಾನಿ ಮಾಡಿದ್ದಾರೆ. ಧಾರ್ಮಿಕ ಸಂಘರ್ಷವನ್ನುಂಟು ಮಾಡುವ ಯಾವುದೇ ಉದ್ದೇಶ ಇಲ್ಲಿ ಕಂಡುಬಂದಿಲ್ಲ’ ಎಂದರು.
ಯೇಸು ಶಿಲುಬೆ ಬಳಿಯ ಪರಮ ಪ್ರಸಾದದ ಕಪಾಟು ಹಾನಿಗೊಂಡ ಹಿನ್ನೆಲೆಯಲ್ಲಿ ಭಕ್ತರು ಆತಂಕಗೊಂಡಿದ್ದರು. ಪೊಲೀಸರ ಪರಿಶೀಲನೆ ನಂತರ ಬರ್ನಾರ್ಡ್ ಮೊರಾಸ್ ನೇತೃತ್ವದಲ್ಲಿ ಚರ್ಚ್ ಶುಚಿಗೊಳಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.