ADVERTISEMENT

ಬೆಂಗಳೂರು: ಕದಿಯಲು ಹೋದವನಿಂದಲೇ ದೂರು !

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 21:01 IST
Last Updated 5 ಫೆಬ್ರುವರಿ 2026, 21:01 IST
ಆಸ್ಗರ್ ಖಾನ್‌ 
ಆಸ್ಗರ್ ಖಾನ್‌    

ಬೆಂಗಳೂರು: ಸ್ನೇಹಿತರ ಜೊತೆಗೂಡಿ ಚಿಕ್ಕನಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಕಬ್ಬಿಣ ಕದಿಯಲು ಯತ್ನಿಸಿದ್ದ ಆರೋಪಿ ಆಸ್ಗರ್ ಖಾನ್‌ ಎಂಬಾತನನ್ನು ಸಂಪಿಗೆಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಆಟೊ ಚಾಲಕನಾಗಿ ಆಸ್ಗರ್ ಖಾನ್‌ ಕೆಲಸ ಮಾಡುತ್ತಿದ್ದ. ದುಡಿಮೆಯ ಹಣ ಖರ್ಚಿಗೆ ಸಾಲುತ್ತಿರಲಿಲ್ಲ. ಈತನ ಸ್ನೇಹಿತರು ಕಳ್ಳತನ ಮಾಡಿ ಖರ್ಚಿಗೆ ದುಡ್ಡು ಮಾಡಿಕೊಳ್ಳುತ್ತಿದ್ದರು. ಇವರಿಂದ ಪ್ರೇರಿತನಾಗಿದ್ದ ಅಸ್ಗರ್ ಖಾನ್‌ ಸಹ ಕಳ್ಳತನ ಮಾಡಿ ಹಣ ಮಾಡಬೇಕೆಂದು ನಿರ್ಧರಿಸಿದ್ದ ಎಂದು ಪೊಲೀಸರು ಹೇಳಿದರು.

ಇಬ್ಬರು ಸ್ನೇಹಿತರ ಜೊತೆಗೂಡಿ ಚಿಕ್ಕನಹಳ್ಳಿಯ ಅಪಾರ್ಟ್‌ಮೆಂಟ್‌ಗೆ ಹೋಗಿ ಕಬ್ಬಿಣ ಕದಿಯಲು ಯತ್ನಿಸಿದ್ದ. ಅದೇ ವೇಳೆ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದರಲ್ಲಿ ನೆಲಸಿದ್ದ ದಂಪತಿ, ಕಳ್ಳರನ್ನು ಗಮನಿಸಿ ಪ್ರಶ್ನೆ ಮಾಡಿದ್ದರು. ಇದರಿಂದ ಸಿಟ್ಟಾದ ಅಸ್ಗರ್ ಖಾನ್‌, ದಂಪತಿ ಮೇಲೆ ಹಲ್ಲೆ ಮಾಡಿದ್ದ. ಅಲ್ಲಿಗೆ ಅಪಾರ್ಟ್‌ಮೆಂಟ್‌ ನಿವಾಸಿಗಳು ಬಂದು ಆರೋಪಿಗಳ ಮೇಲೆ ಹಲ್ಲೆ ಮಾಡಿದ್ದರು. ಬಳಿಕ ಅಲ್ಲಿಂದ ಮೂವರು ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದರು.

ADVERTISEMENT

ಘಟನೆಯ ಬಳಿಕ ಆಸ್ಗರ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದ. ಬಳಿಕ ಠಾಣೆಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದ. ಕಳ್ಳತನ ಮಾಡುವಾಗ ಹಲ್ಲೆ ಮಾಡಿದ್ದಾರೆ ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದ. ಕಳ್ಳತನ ಮಾಡುವ ಸಂದರ್ಭದಲ್ಲಿ ಬಿಯರ್ ಬಾಟಲ್‌ಯಿಂದ ಮಹಿಳೆಯರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.