ಬೆಂಗಳೂರು: ಕೋಮುವಾದಿ, ಜಾತಿವಾದ ವಿರುದ್ಧದ ನಿಲುವುಳ್ಳ ಲೇಖಕರು, ಚಿಂತಕರಿಗೆ ಬೆದರಿಕೆ ಪತ್ರಗಳು ಬರುತ್ತಿದ್ದು, ರಕ್ಷಣೆ ನೀಡಲು ಮತ್ತು ಪತ್ರ ಬರೆದವರ ವಿರುದ್ಧ ಕ್ರಮ ಕೈಗೊಳ್ಳಲು ಗೃಹಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಸಾಹಿತಿಗಳು ತಿಳಿಸಿದ್ದಾರೆ.
ಪ್ರೊ. ಕೆ. ಮರುಳಸಿದ್ದಪ್ಪ, ಪ್ರೊ. ಎಸ್.ಜಿ. ಸಿದ್ದರಾಮಯ್ಯ,ಬಂಜಗೆರೆ ಜಯಪ್ರಕಾಶ್, ವಸುಂದರಾ ಭೂಪತಿ, ಕುಂ.ವೀರಭದ್ರಪ್ಪ ಸೇರಿದಂತೆ 15ಕ್ಕೂ ಹೆಚ್ಚು ಲೇಖಕರಿಗೆ ಒಂದು ವರ್ಷದಿಂದ ಬೆದರಿಕೆ ಪತ್ರಗಳು ಬರುತ್ತಿವೆ. ಬೆದರಿಕೆ ಪತ್ರ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಚರ್ಚಿಸಲು ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರನ್ನು ಶನಿವಾರ ಭೇಟಿ ಮಾಡಲಾಗುವುದು ಎಂದು ಹೇಳಿದ್ದಾರೆ.
‘ಕೋಮುವಾದಿ ಗುಂಪಿನಿಂದಲೇ ಈ ಪತ್ರಗಳು ಬರುತ್ತಿವೆ. ಜಾತಿವಾದ, ಕೋಮುವಾದ ವಿರುದ್ಧ ಮಾತನಾಡಿದಾಗಲೆಲ್ಲ ‘ನಿಮ್ಮನ್ನು ಮುಗಿಸಿ ಬಿಡ್ತೀವಿ’ ಎಂದು ಒಂದೇ ರೀತಿಯಲ್ಲಿ ಎಲ್ಲರಿಗೂ ಪತ್ರ ಬರುತ್ತಿವೆ. ಗೌರಿ ಲಂಕೇಶ್ , ಕಲ್ಬುರ್ಗಿಯವರ ಹತ್ಯೆ ಮಾಡಿದ ಗುಂಪು ನಮ್ಮನ್ನು ಹತ್ಯೆ ಮಾಡಬಹುದು. ಅದಕ್ಕಾಗಿ ಸರ್ಕಾರದ ಗಮನಕ್ಕೆ ತರುತ್ತಿದ್ದೇವೆ’ ಎಂದು ಲೇಖಕ ಕೆ. ಮರುಳಸಿದ್ದಪ್ಪ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.