ಬೆಂಗಳೂರು: ಆಂಧ್ರಪ್ರದೇಶದಿಂದ ಬೆಂಗಳೂರು ಹಾಗೂ ಕೇರಳಕ್ಕೆ ಸಾಗಿಸುತ್ತಿದ್ದ ₹ 25 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದ್ದು, ಈ ಸಂಬಂಧ ಮೂವರನ್ನು ರಾಷ್ಟ್ರೀಯ ಮಾದಕ ದ್ರವ್ಯ ನಿಗ್ರಹ ದಳದ (ಎನ್ಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ.
‘ಆರ್.ಎಸ್. ರಂಜಿತ್, ಕೆ.ಕೆ. ಸಾರಂಗ್ ಹಾಗೂ ಪಿ.ಡಿ. ಅನೀಶ್ ಬಂಧಿತರು. ಕೇರಳ ನೋಂದಣಿ ಸಂಖ್ಯೆ ಕಾರಿನಲ್ಲಿ ಆರೋಪಿಗಳು ಡ್ರಗ್ಸ್ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಪಡೆದು ಇದೇ 9ರಂದು ದೇವನಹಳ್ಳಿ ಟೋಲ್ಗೇಟ್ ಬಳಿ ಕಾರು ತಡೆದು ತಪಾಸಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ’ ಎಂದು ಎನ್ಸಿಬಿ ಅಧಿಕಾರಿಯೊಬ್ಬರು ಹೇಳಿದರು.
‘ಅಂತರರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಆರೋಪಿಗಳು, ಶ್ರೀಲಂಕಾ ಹಾಗೂ ಮಾಲ್ಡೀವ್ಸ್ ಮೂಲಕ ಡ್ರಗ್ಸ್ ತರಿಸುತ್ತಿದ್ದರು. ಆಂಧ್ರಪ್ರದೇಶಕ್ಕೆ ಬರುತ್ತಿದ್ದ ಡ್ರಗ್ಸ್ ಅನ್ನು ಕಾರಿನಲ್ಲಿ ಬೆಂಗಳೂರು ಹಾಗೂ ಕೇರಳಕ್ಕೆ ತಂದು ಉಪ ಪೆಡ್ಲರ್ಗಳ ಮೂಲಕ ಮಾರಾಟ ಮಾಡಿಸುತ್ತಿದ್ದರು’ ಎಂದರು.
‘ಕಾರಿನ ಸೀಟುಗಳ ಕೆಳಗೆ ಡ್ರಗ್ಸ್ ಪೊಟ್ಟಣಗಳನ್ನು ಬಚ್ಚಿಡಲಾಗಿತ್ತು. ಅದನ್ನು ಹೊರಗೆ ತೆಗೆದು ಜಪ್ತಿ ಮಾಡಲಾಗಿದೆ’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.