ADVERTISEMENT

ಸಂಚಾರ ಗೊಂದಲ ಜನರಿಗೆ ಪಜೀತಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 19:31 IST
Last Updated 19 ಜೂನ್ 2019, 19:31 IST
   

‘...ಈ ನಂಬರ್‌ಆಟೊದವರು ಮುಂದಕ್ಕೆ ಹೋಗಿ’, ‘ಸಿಗ್ನಲ್‌ನಲ್ಲಿ ವೆಹಿಕಲ್‌ ನಿಲ್ಲಿಸಬೇಡಿ’, ’ಮುಂದಕ್ಕೆ ಹೋಗಿ ಮಣಿಪಾಲ್‌ ಸೆಂಟರ್‌ನಲ್ಲಿ ಬಲಕ್ಕೆ ತಿರುಗಿ’... ಹೀಗೆ ಕಮರ್ಷಿಯಲ್‌ ಸ್ಟ್ರೀಟ್‌ನಿಂದ ಕಾಮರಾಜ ರಸ್ತೆ ಮಧ್ಯದ ಜಂಕ್ಷನ್‌ನಲ್ಲಿಟ್ರಾಫಿಕ್‌ ಪೊಲೀಸರುಮೈಕ್‌ನಲ್ಲಿ ಕೂಗಿ ಹೇಳುತ್ತಲೇ ಇದ್ದರು.ಆದರೂ ಮಹಾತ್ಮ ಗಾಂಧಿ ರಸ್ತೆಗೆ ಹೋಗಬೇಕಾದ ವಾಹನ ಚಾಲಕರು ಗೊಂದಲದಿಂದ ಜಂಕ್ಷನ್‌ನಲ್ಲಿ ಟರ್ನ್‌ ತೆಗೆದುಕೊಳ್ಳುವುದೋ, ಮುಂದಕ್ಕೆ ಹೋಗುವುದೋ ಎಂದು ಗೊಂದಲಕ್ಕೆ ಒಳಗಾಗುತ್ತಿರುವ ದೃಶ್ಯಗಳು ಮಾಮೂಲು.

‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿಗೊಟ್ಟಿಗೆರೆ (ಡೇರಿ ವೃತ್ತ)–ನಾಗವಾರ ಮಾರ್ಗದ ಕಾಮಗಾರಿಗಾಗಿ ಕಾವೇರಿ ಎಂಪೋರಿಯಂ ಜಂಕ್ಷನ್‌ನ ಕಾಮರಾಜ ರಸ್ತೆಯ ಎರಡೂ ಕಡೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.ಬದಲಿ ಮಾರ್ಗದ ಗೊಂದಲದಿಂದ ಬಹುತೇಕ ಅಟೊಗಳುಶಿವಾಜಿನಗರ, ಕಮರ್ಷಿಯಲ್‌ ರಸ್ತೆ ಸುತ್ತಿಕೊಂಡು ಬರುತ್ತಿದ್ದವು. ಕೆಲ ಜನರಿಗೆ ಕಾಮರಾಜ ರಸ್ತೆಯಲ್ಲಿ ಸಂಚಾರ ನಿರ್ಬಂಧದ ಬಗ್ಗೆ ಅರಿವು ಇಲ್ಲದ್ದರಿಂದ ಗೊಂದಲಕ್ಕೆ ಒಳಗಾಗುತ್ತಿದ್ದರು. ‘ರಾಜಾಜಿನಗರದಿಂದ ಮಡಿ ವಾಳಕ್ಕೆ ಹೋಗಬೇಕು. ಕುಂಬ್ಳೆ ವೃತ್ತದಿಂದ ಆಟೊದಲ್ಲಿ ಸುತ್ತಾಡಿಕೊಂಡು ಬಂದೆವು’ ಎಂದು ರಾಜಾಜಿನಗರದ ಪಿಯುಲ್‌ ಬೇಸರ ವ್ಯಕ್ತಪಡಿಸಿದರು.

ಕಾಮರಾಜ ರಸ್ತೆಯಲ್ಲಿ ಆಟೊ ಬಾಡಿಗೆ ಮಾಡುತ್ತಿದ್ದ ಬಾಬು ‘ಕಾಮರಾಜ ರಸ್ತೆಯಲ್ಲಿ ನಾವು ರಿಕ್ಷಾ ಬಾಡಿಗೆ ಓಡಿಸುತ್ತಿದ್ದೆವು. ಈಗ ನಾವು ಬೇರೆ ಕಡೆ ಬಾಡಿಗೆ ಹುಡುಕಬೇಕು’ ಎನ್ನುತ್ತಾರೆ.

ADVERTISEMENT

‘ಈ ರಸ್ತೆ ಬಂದ್‌ ಆಗಿರುವುದು ಗೊತ್ತಿರಲಿಲ್ಲ. ಸುತ್ತಿಕೊಂಡು ಹೋಗಬೇಕು ಎಂದಾಗ ಅಟೊದಲ್ಲಿದ್ದ ಮಹಿಳೆ ಬೈಯುತ್ತಾ ಇಳಿದು ಹೋದರು’ ಎಂದು ಅಟೊ ಚಾಲಕ ಆಲಿ ಹೇಳಿದರು.

‘ಶಿವಾಜಿನಗರದಿಂದ ಎಂ.ಜಿ ರಸ್ತೆಗೆ ಬರಬೇಕಾದರೆ ಸುತ್ತಿಕೊಂಡು ಬರಬೇಕು. ಬಾಡಿಗೆ ಜಾಸ್ತಿ, ಸಮಯವೂ ಹೆಚ್ಚು ಬೇಕು ಎಂದು ಕೆಲ ಪ್ರಯಾಣಿಕರು ದೂರಿಕೊಂಡರು’ ಎಂದು ಅಟೊ ಚಾಲಕ ಕೃಷ್ಣ ಗೊಣಗಿದರು. ಕಷ್ಟವಾದರೂ ಸರಿ, ಅಭಿವೃದ್ಧಿಗೆ ಕೈ ಜೋಡಿಸಬೇಕು. ಈಗ ಸ್ವಲ್ಪ ತೊಂದರೆಯಾಗಿದೆ. ಒಂದೆರಡು ದಿನದಲ್ಲಿ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬುದು ಕನಕಪುರದ ಶ್ರೀಧರ್‌ ಪ್ರಭು ಅವರ ವಿಶ್ವಾಸ.

‘ಕಾಮರಾಜ ರಸ್ತೆ ಹಾಗೂ ಎಂ.ಜಿ ರಸ್ತೆಯಲ್ಲಿ ವಾಹನ ನಿಲ್ಲಿಸುವುದನ್ನು ನಿಷೇಧಿಸಿದ್ದರಿಂದ, ದಿನನಿತ್ಯ ಇಲ್ಲೇ ವಾಹನ ಇಟ್ಟು ಕರ್ತವ್ಯಕ್ಕೆ ಹೋಗುತ್ತಿದ್ದವರು ಗೊಂದಲಕ್ಕೊಳಗಾಗುತ್ತಾರೆ. ಈಗ ಶಿವಾಜಿನಗರದಿಂದ ಮೆಯೋ ಹಾಲ್‌ ಮೂಲಕ ಹೋಗುತ್ತಿದ್ದ ಬಸ್‌ಗಳು ಎಂ.ಜಿ ರಸ್ತೆ ಮೂಲಕ ಹೋಗುತ್ತಿವೆ. ಕೆಲ ಆಟೋಗಳು ಬರುತ್ತಿವೆ. ಹೀಗಾಗಿ ಟ್ರಾಫಿಕ್‌ ದಟ್ಟಣೆ ಆಗಿದೆ’ ಎನ್ನುತ್ತಾರೆ ಟ್ರಾಫಿಕ್‌ ಪೊಲೀಸರು.

‘ಸಂಚಾರ ನಿರ್ಬಂಧಿಸಿ ಐದು ದಿನವಷ್ಟೇ ಆಗಿದ್ದರಿಂದ ಗೊಂದಲ ಸಹಜ. ಈ ಪ್ರದೇಶದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.ಸೈನ್‌ ಬೋರ್ಡ್‌ಗಳನ್ನು ಹಾಕಿದ್ದೇವೆ. ದೊಡ್ಡ ಫಲಕಗಳನ್ನೂ ಹಾಕುತ್ತೇವೆ’ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.