ADVERTISEMENT

‘ಯುವತಿ’ ಪ್ರೀತಿಗಾಗಿ ಯುವಕರಿಬ್ಬರ ಗಲಾಟೆ; ಕೊಲೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 18:15 IST
Last Updated 21 ಅಕ್ಟೋಬರ್ 2021, 18:15 IST

ಬೆಂಗಳೂರು: ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಹರಿಕೀರ್ತನ್ ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಬಿ.ಕಾಂ ವಿದ್ಯಾರ್ಥಿಗಳಾದ ಮುತ್ತುರಾಜು (19) ಹಾಗೂ ಹೇಮಂತ್ (18) ಬಂಧಿತರು. ಇವರಿಬ್ಬರ ಹಲ್ಲೆಯಿಂದ ತೀವ್ರ ಗಾಯಗೊಂಡಿರುವ ಹರಿಕೀರ್ತನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ’ ಪೊಲೀಸ್ ಮೂಲಗಳು ಹೇಳಿವೆ.

‘ಗಾಯಾಳು ಹರಿಕೀರ್ತನ್ ಸಹ ಪದವಿ ವಿದ್ಯಾರ್ಥಿ. ತನ್ನದೇ ಕಾಲೇಜಿನ ಯುವತಿಯೊಬ್ಬರ ಜೊತೆ ಎರಡು ವರ್ಷದಿಂದ ಸ್ನೇಹ ಇಟ್ಟುಕೊಂಡಿದ್ದ. ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರೆಂಬ ಮಾಹಿತಿ ಇದೆ. ಎರಡು ತಿಂಗಳ ಹಿಂದಷ್ಟೇ ಹರಿಕೀರ್ತನ್‌ನಿಂದ ದೂರವಿರಲು ಯತ್ನಿಸಿದ್ದ ಯುವತಿ, ಆರೋಪಿ ಮುತ್ತುರಾಜುನನ್ನು ಪ್ರೀತಿಸಲಾರಂಭಿಸಿದ್ದರೆಂದು ಗೊತ್ತಾಗಿದೆ.’

ADVERTISEMENT

‘ಬೇರೊಬ್ಬನನ್ನು ಪ್ರೀತಿಸುವ ವಿಷಯ ತಿಳಿದ ಹರಿಕೀರ್ತನ್, ಆತ್ಮಹತ್ಯೆಗೂ ಯತ್ನಿಸಿದ್ದ. ಇದರಿಂದಾಗಿ ಯುವತಿ, ಪುನಃ ಹರಿಕೀರ್ತನ್ ಜೊತೆ ಸುತ್ತಾಡಲಾರಂಭಿಸಿದ್ದರು. ಆದರೆ, ಮುತ್ತುರಾಜು ಜೊತೆಗಿನ ಸ್ನೇಹವನ್ನು ಕಳೆದುಕೊಂಡಿರಲಿಲ್ಲ’ ಎಂದೂ ಮೂಲಗಳು ತಿಳಿಸಿವೆ.

‘ಮುತ್ತುರಾಜು ಜೊತೆ ಮಾತನಾಡದಂತೆ ಎಚ್ಚರಿಸಿದ್ದ ಹರಿಕೀರ್ತನ್, ಯುವತಿ ಮನೆಗೆ ಬುಧವಾರ ಹೋಗಿ ಗಲಾಟೆ ಮಾಡಿದ್ದ. ಅದೇ ಸಂದರ್ಭದಲ್ಲಿ ಮುತ್ತುರಾಜು ಸ್ಥಳದಲ್ಲಿದ್ದ. ಆತನ ಮೇಲೂ ಹಲ್ಲೆಗೆ ಯತ್ನಿಸಿದ್ದ. ತಿರುಗಿಬಿದ್ದ ಮುತ್ತುರಾಜು ಹಾಗೂ ಆತನ ಸ್ನೇಹಿತರು, ಹರಿಕೀರ್ತನ್‌ ಹಿಡಿದು ಥಳಿಸಿದ್ದರು.’

‘ತಪ್ಪಿಸಿಕೊಂಡು ಓಡಿದ್ದ ಹರಿಕೀರ್ತನ್, ಖಾಸಗಿ ಬಸ್‌ ಏರಿದ್ದ. ಆತನನ್ನು ಬೆನ್ನಟ್ಟಿದ್ದ ಆರೋಪಿಗಳು, ಬಸ್ಸಿನಲ್ಲೇ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಬಸ್‌ ಚಾಲಕರೇ ಗಾಯಾಳುವನ್ನು ಮಾಗಡಿ ರಸ್ತೆಯಲ್ಲಿರುವ ಮಧು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಸದ್ಯ ಆರೋಗ್ಯ ಸ್ಥಿತಿ ಸುಧಾರಿಸಿದೆ’ ಎಂದೂ ಮೂಲಗಳು ಹೇಳಿವೆ.

‘ಕೊಲೆಗೆ ಯತ್ನಿಸಿದ್ದ ಆರೋಪದಡಿ ಮುತ್ತುರಾಜು ಹಾಗೂ ಆತನ ಸ್ನೇಹಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.