ADVERTISEMENT

ದೇಶದಲ್ಲೇ ಪ್ರಥಮ: ನೆಲದಡಿ ವಿದ್ಯುತ್‌ ಪರಿವರ್ತಕ ಕಾರ್ಯಾರಂಭ

ಬೆಸ್ಕಾಂ ವತಿಯಿಂದ 500 ಕೆವಿಎ ಸಾಮರ್ಥ್ಯದ ಕೇಂದ್ರ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2023, 0:30 IST
Last Updated 6 ಸೆಪ್ಟೆಂಬರ್ 2023, 0:30 IST
<div class="paragraphs"><p>ಬೆಂಗಳೂರಿನ ಮಲ್ಲೇಶ್ವರದಲ್ಲಿ ನೆಲದಡಿಯಲ್ಲಿ ಅಳವಡಿಸಿರುವ ವಿದ್ಯುತ್‌ ಪರಿವರ್ತಕ ಕೇಂದ್ರವನ್ನು ಇಂಧನ ಸಚಿವ ಕೆ.ಜೆ. ಜಾರ್ಜ್‌ ಮತ್ತು ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ವೀಕ್ಷಿಸಿದರು.&nbsp;&nbsp; </p></div>

ಬೆಂಗಳೂರಿನ ಮಲ್ಲೇಶ್ವರದಲ್ಲಿ ನೆಲದಡಿಯಲ್ಲಿ ಅಳವಡಿಸಿರುವ ವಿದ್ಯುತ್‌ ಪರಿವರ್ತಕ ಕೇಂದ್ರವನ್ನು ಇಂಧನ ಸಚಿವ ಕೆ.ಜೆ. ಜಾರ್ಜ್‌ ಮತ್ತು ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ವೀಕ್ಷಿಸಿದರು.  

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ದೇಶದಲ್ಲೇ ಪ್ರಥಮ ಬಾರಿಗೆ ನೆಲದಡಿಯಲ್ಲಿ ನಿರ್ಮಿಸಿರುವ 500 ಕೆವಿಎ ಸಾಮರ್ಥ್ಯದ ವಿದ್ಯುತ್‌ ಪರಿವರ್ತಕ ಕೇಂದ್ರವು ಮಲ್ಲೇಶ್ವರದಲ್ಲಿ ಮಂಗಳವಾರ ಕಾರ್ಯಾರಂಭ ಮಾಡಿತು.

ADVERTISEMENT

ಬಿಬಿಎಂಪಿ ಸಹಭಾಗಿತ್ವದಲ್ಲಿ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ಈ ಕೇಂದ್ರವನ್ನು ನಿರ್ಮಿಸಿದೆ. ಪಾದಚಾರಿ ಮಾರ್ಗದ ಕೆಳಗೆ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ.

ನೆಲದಡಿಯಲ್ಲಿ ಕೇಬಲ್‌ ಹಾಗೂ ವಿದ್ಯುತ್‌ ಪರಿವರ್ತಕ ವ್ಯವಸ್ಥೆಯು ಸುರಕ್ಷತೆ ಹಾಗೂ ಗುಣಮಟ್ಟದ ವಿದ್ಯುತ್‌ ಪೂರೈಕೆಗೆ ಸಹಕಾರಿಯಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು ₹1.97 ಕೋಟಿ ವೆಚ್ಚದಲ್ಲಿ ಈ ಪರಿವರ್ತಕ ಕೇಂದ್ರವನ್ನು (ಟಿ.ಸಿ) ನಿರ್ಮಿಸಲಾಗಿದೆ. ಈ ಪೈಕಿ ಸಿವಿಲ್‌ ಕಾಮಗಾರಿಗೆ ₹64 ಲಕ್ಷ ಮತ್ತು ಎಲೆಕ್ಟ್ರಿಕಲ್‌ ಕಾಮಗಾರಿಗೆ ₹1.33 ಕೋಟಿ ವೆಚ್ಚವಾಗಿದೆ. ಸಿವಿಲ್‌ ಕಾಮಗಾರಿಗೆ ಬಿಬಿಎಂಪಿ ಅನುದಾನ ಒದಗಿಸಿತ್ತು. ಕೇಂದ್ರದ ನಿರ್ಮಾಣ ಕಾಮಗಾರಿ 2022ರ ಮೇ 20ರಿಂದ ಆರಂಭಗೊಂಡಿತ್ತು. ಇದು 14 ಮೀಟರ್‌ ಉದ್ದ, 5 ಮೀಟರ್‌ ಅಗಲ ಮತ್ತು 4 ಮೀಟರ್‌ ಆಳ ಇದೆ.

‘ಈ ಯೋಜನೆಯಡಿ ವಿತರಣಾ ಪರಿವರ್ತಕಗಳು, ರಿಂಗ್ ಮೇನ್ ಯೂನಿಟ್‌ಗಳು ಸೇರಿದಂತೆ ಸಂಪೂರ್ಣ ವ್ಯವಸ್ಥೆಯನ್ನು ನೆಲದಡಿಯಲ್ಲಿ ಅಳವಡಿಸಲಾಗಿದೆ. ಇದರಿಂದ ವಿದ್ಯುತ್ ಅವಘಡಗಳನ್ನು ತಪ್ಪಿಸುವ ಜತೆಗೆ ವಿದ್ಯುತ್‌ ಪೂರೈಕೆ ನಷ್ಟವನ್ನು ತಗ್ಗಿಸಬಹುದಾಗಿದೆ. ಗುಣಮಟ್ಟದ ವಿದ್ಯುತ್ ಪೂರೈಸಲು ಕೂಡ ಈ ಯೋಜನೆ ಸಹಕಾರಿಯಾಗಲಿದೆ’ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

‘ಪಾದಚಾರಿ ಮಾರ್ಗದ ನಾಲ್ಕು ಮೀಟರ್‌ ಅಡಿ ಆಳದಲ್ಲಿ ವಿದ್ಯುತ್‌ ಪರಿವರ್ತಕ ಅಳವಡಿಸಲಾಗಿದೆ. ಈ ವ್ಯವಸ್ಥೆಗೆ ಹೆಚ್ಚಿನ ಜಾಗದ ಅಗತ್ಯವಿಲ್ಲ. ಕಡಿಮೆ ಜಾಗದಲ್ಲಿ ಸುರಕ್ಷಿತವಾಗಿರುವ ವ್ಯವಸ್ಥೆ ಇದಾಗಿದೆ. ಅಗ್ನಿ ದುರಂತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜತೆಗೆ, ಗಾಳಿಯ ವ್ಯವಸ್ಥೆಯೂ ಇದೆ. ನೀರಿನ ಸಂಪು ಮಾದರಿಯಲ್ಲಿ ದಪ್ಪನೆಯ ಕಾಂಕ್ರೀಟ್‌ನ ನಾಲ್ಕು ಗೋಡೆಗಳನ್ನು ನಿರ್ಮಿಸಿ ವಿದ್ಯುತ್‌ ಪರಿವರ್ತಕ ಸ್ಥಾಪಿಸಲಾಗಿದೆ. ಇಲ್ಲಿ ಸ್ಲ್ಯಾಬ್‌ ಹಾಕಿರುವುದರಿಂದ ನಾಗರಿಕರು ಯಾವುದೇ ರೀತಿಯ ತೊಂದರೆ ಇಲ್ಲದೆಯೇ ಈ ಸ್ಥಳದ ಮೇಲೆಯೇ ನಡೆದಾಡಬಹುದಾಗಿದೆ’ ಎಂದು ವಿವರಿಸಿದ್ದಾರೆ.

ಮಲ್ಲೇಶ್ವರದ 15ನೇ ಅಡ್ಡರಸ್ತೆಯಲ್ಲಿ ನಿರ್ಮಿಸಿರುವ ಈ ವಿದ್ಯುತ್‌ ಪರಿವರ್ತಕ ಕೇಂದ್ರವನ್ನು ಇಂಧನ ಸಚಿವ ಕೆ. ಜೆ. ಜಾರ್ಜ್‌ ಅವರು ಉದ್ಘಾಟಿಸಿದರು. ಶಾಸಕ ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಇದ್ದರು.

ನೆಲದಡಿಯಲ್ಲಿನ ವಿದ್ಯುತ್‌ ಪರಿವರ್ತಕ ಕೇಂದ್ರದಲ್ಲಿ ತಾಪಮಾನದ ವಿವರ ನೀಡುವ ಉಪಕರಣ ಮತ್ತು ಕೇಬಲ್‌ಗಳು – ಪ್ರಜಾವಾಣಿ ಚಿತ್ರ
ವಿದ್ಯುತ್‌ ಪರಿವರ್ತಕದ ಬ್ಯಾಟರಿಗಳಿರುವ ಪೆಟ್ಟಿಗೆ.  – ಪ್ರಜಾವಾಣಿ ಚಿತ್ರ

ಕಾರ್ಯನಿರ್ವಹಣೆ ಹೇಗೆ?

ಇದು ತೈಲರಹಿತ ಪರಿವರ್ತಕವಾಗಿದ್ದು ‘ಡ್ರೈ’ ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಹೀಗಾಗಿ ಹೆಚ್ಚು ಸುರಕ್ಷಿತವಾಗಿದೆ. ನೆಲದ ಮೇಲೆ ಸಾಮಾನ್ಯವಾಗಿ ಅಳವಡಿಸುವ ವಿದ್ಯುತ್‌ ಪರಿವರ್ತಕ್ಕೆ ತೈಲ ಬಳಸಲಾಗುತ್ತದೆ. ತೈಲ ಸೋರಿಕೆಯಾಗಿ ಬೆಂಕಿ ಅವಘಡಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ. ಆದರೆ ಇಲ್ಲಿ ಅಂತಹ ಅವಘಡಗಳು ಸಂಭವಿಸುವುದು ಬಹಳ ವಿರಳ. ವಿದ್ಯುತ್‌ ಪರಿವರ್ತಕವು ಸಂಪೂರ್ಣವಾಗಿ ತಾಪಮಾನ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ. ಪರಿವರ್ತಕ ಇರುವ ಸ್ಥಳದಲ್ಲಿ ತಾಪಮಾನ ಹೆಚ್ಚಾಗದ ರೀತಿಯ ತಂತ್ರಜ್ಞಾನ ಅಳವಡಿಸಲಾಗಿದೆ. 40 ಡಿಗ್ರಿ ತಾಪಮಾನ ಮೀರಿದರೆ ಎಚ್ಚರಿಕೆ ನೀಡುವ ಸಂದೇಶವನ್ನು ಸಹ ಅಳವಡಿಸಲಾಗಿದೆ. ಜತೆಗೆ 8 ವೇ ಸಾಲಿಡ್ ಸ್ಟೇಟ್ ರಿಂಗ್ ಮೈನ್ ಯೂನಿಟ್ (ಆರ್‌ಎಂಯು) 5 ವೇ ಎಲ್‌ಟಿ ವಿತರಣಾ ಪೆಟ್ಟಿಗೆ 2 ಕೆವಿಎ ಯುಪಿಎಸ್ ಅಗ್ನಿಶಾಮಕ ಉಪಕರಣಗಳು ಸೇರಿದಂತೆ ಕೇಂದ್ರಕ್ಕೆ ಅವಶ್ಯವಿರುವ ಎಲ್ಲಾ ವಿದ್ಯುತ್ ಉಪಕರಣಗಳನ್ನು ಅಳವಡಿಸಲಾಗಿದೆ. ಒಂದು ವೇಳೆ ನೀರು ಸಂಗ್ರಹವಾದರೆ ಸ್ವಯಂಚಾಲಿತವಾಗಿ ಹೊರಗೆ ಹಾಕಲು 1 ಎಚ್.ಪಿ. ವಾಟರ್ ಪಂಪ್ ಅಳವಡಿಸಲಾಗಿದೆ.

ಪ್ರಯೋಜನಗಳು

* ಹೆಚ್ಚು  ಸುರಕ್ಷಿತ

*  ಅತಿ ಕಡಿಮೆ ಜಾಗದಲ್ಲಿ ನಿರ್ಮಾಣ

* ಯಾವುದೇ ರೀತಿಯ ಹವಾಮಾನ ವೈಪರೀತ್ಯ ಸ್ಥಿತಿಯನ್ನು ಎದುರಿಸಲು ಸಾಧ್ಯ

* ನೆಲದಡಿಯಲ್ಲಿರುವುದರಿಂದ ನಗರ ಸೌಂದರ್ಯ ಕಾಪಾಡಲು ಅನುಕೂಲ

ಸವಾಲುಗಳು

* ಸಿಬ್ಬಂದಿ ಮತ್ತು ಉಪಕರಣಗಳ ಸುರಕ್ಷತೆ

* ಸಮರ್ಪಕ ತಾಪಮಾನ ಮತ್ತು ಗಾಳಿ ವ್ಯವಸ್ಥೆ ಒದಗಿಸುವಿಕೆ

* ಅಗ್ನಿ ಮತ್ತು ಒಳಚರಂಡಿ ವ್ಯವಸ್ಥೆಯ ನಿಯಂತ್ರಣ

ಉಪಕರಣಗಳು

* 500 ಕೆವಿಎ ಡ್ರೈ ಮಾದರಿ ಪರಿವರ್ತಕ

* 11 ಕೆವಿ ನೆಲದಡಿಯಲ್ಲಿನ ಕೇಬಲ್‌ಗಳು

* ಎಫ್‌ಆರ್‌ಪಿ ಬ್ಯಾಟರಿಗಳೊಂದಿಗೆ 2 ಕೆವಿಎ ಯುಪಿಎಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.