ಕೆ.ಆರ್.ಪುರ: ಬಿಬಿಎಂಪಿಯ ಕೆ.ಆರ್. ಪುರ ಉಪವಿಭಾಗದ ಕಚೇರಿ ಆವರಣದ ತಡೆಗೋಡೆ ಕುಸಿದು ಹಲವು ತಿಂಗಳಾದರೂ, ದುರಸ್ತಿಯಾಗಿಲ್ಲ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ನಾಗರಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಕೆ.ಆರ್. ಪುರ ಉಪವಿಭಾಗದ ಕಚೇರಿಯ ತಡೆಗೋಡೆ ಎರಡು ಸ್ಥಳಗಳಲ್ಲಿ ಕುಸಿದಿದೆ. ಬಸ್ ನಿಲ್ದಾಣ ಪಕ್ಕದ ತಡೆಗೋಡೆ ಕುಸಿದು ಹಲವು ತಿಂಗಳಾಗಿವೆ. ತಡೆಗೋಡೆ ನಿರ್ಮಿಸದೆ ಮರದ ಕೊಂಬೆಗಳನ್ನು ಹಗ್ಗದಿಂದ ಕಟ್ಟಿರುವುದರಿಂದ ಕಚೇರಿಗೆ ಅಭದ್ರತೆ ಕಾಡತೊಡಗಿದೆ.
‘ಕಂದಾಯ, ಖಾತಾ, ತೆರಿಗೆ, ನಕ್ಷೆ ಹಾಗೂ ವಿವಿಧ ಕೆಲಸಗಳಿಗಾಗಿ ನಿತ್ಯ ನೂರಾರು ಜನರು ಕಚೇರಿಗೆ ಬರುತ್ತಾರೆ. ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ತಡೆಗೋಡೆಯೂ ಕುಸಿದಿದ್ದರೂ ದುರಸ್ತಿ ಕಾರ್ಯ ಮಾಡುತ್ತಿಲ್ಲ. ಅಧಿಕಾರಿ ನಿರ್ಲಕ್ಷ್ಯದಿಂದ ನಾಗರಿಕರು ಆತಂಕದಿಂದ ಸಂಚರಿಸಬೇಕಿದೆ’ ಎಂದು ಸ್ಥಳೀಯರು ದೂರಿದರು.
‘ಸಾವಿರಾರು ರೂಪಾಯಿ ಬೆಲೆ ಬಾಳುವ ಕಂಪ್ಯೂಟರ್, ಪ್ರಿಂಟರ್, ಚುನಾವಣೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಕಚೇರಿಯಲ್ಲಿವೆ. ಆದರೂ ತಡೆಗೋಡೆ ದುರಸ್ತಿಗೊಳಿಸಿಲ್ಲ’ ಎಂದು ರಮೇಶ್ ಆರೋಪಿಸಿದರು.
‘ಮಹದೇವಪುರ ವಲಯದ ಜಂಟಿ ಆಯುಕ್ತೆ ದಾಕ್ಷಾಯಣಿ ಅವರು ಕೆ.ಆರ್.ಪುರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಹಲವು ಬಾರಿ ಸಭೆ ನಡೆಸಿದ್ದಾರೆ. ಆದರೆ, ಅವರೂ ತಡೆಗೋಡೆ ದುರಸ್ತಿ ಬಗ್ಗೆ ಕ್ರಮ ಕೈಗೊಂಡಿಲ್ಲ. ಇಲ್ಲಿ ಹಲವು ವಿಭಾಗಗಳಿದ್ದು ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದಾಖಲೆ ಕಳೆದುಹೋದರೆ ಯಾರು ಜವಾಬ್ದಾರರು’ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.