ADVERTISEMENT

ಅಸ್ಪೃಶ್ಯತೆ ಈಗಲೂ ಜೀವಂತ: ಸದನದಲ್ಲಿ ಪ್ರತಿಧ್ವನಿಸಿದ ‘ಪ್ರಜಾವಾಣಿ’ ವರದಿ

ವಿಧಾನ ಪರಿಷತ್‌ನಲ್ಲಿ ಪ್ರತಿಧ್ವನಿಸಿದ ‘ಪ್ರಜಾವಾಣಿ’ ವರದಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 21:12 IST
Last Updated 16 ಮಾರ್ಚ್ 2020, 21:12 IST
   

ಬೆಂಗಳೂರು: ‘ರಾಜ್ಯದ ಯಾವುದೇ ದೇವಾಲಯಗಳಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿಲ್ಲ, ಹಾಗೇನಾದರೂ ಇದ್ದರೆ ತೋರಿಸಿ ನೋಡೋಣ’ ಎಂಬ ಸವಾಲನ್ನು ಸ್ವೀಕರಿಸಿದ ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಎಂ.ನಾರಾಯಣಸ್ವಾಮಿ, ‘ಪ್ರಜಾವಾಣಿ’ ಯಲ್ಲಿ ಕಳೆದ ವಾರ ಪ್ರಕಟವಾದ ವರದಿಯನ್ನು ಬೊಟ್ಟುಮಾಡಿ ತೋರಿಸಿದರು.

ಪರಿಷತ್‌ನಲ್ಲಿ ಸೋಮವಾರ ಸಂವಿಧಾನ ಕುರಿತು ಕಾಂಗ್ರೆಸ್‌ನ ಆರ್‌.ಬಿ.ತಿಮ್ಮಾಪೂರ ಮಾತನಾಡುತ್ತಿದ್ದರು. ‘ಸಂವಿಧಾನವನ್ನು ಸ್ವೀಕರಿಸಿ 70 ವರ್ಷ ಕಳೆದ ಮೇಲೂ ಅಸ್ಪೃಶ್ಯತೆ ಜೀವಂತವಾಗಿದೆ, ಕೆಲವೆಡೆ ದೇವಾಲಯಗಳಿಗೆ ಪ್ರವೇಶ ಇಲ್ಲ, ಜನರನ್ನು ಈಗಲೂ ಕೀಳಾಗಿ ನೋಡಲಾಗುತ್ತಿದೆ’ ಎಂದರು.

ಆಗ ಮಧ್ಯಪ್ರವೇಶಿಸಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯದಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿಲ್ಲ ಎಂದರು.

ADVERTISEMENT

ನಾರಾಯಣಸ್ವಾಮಿ ಅವರು ತಕ್ಷಣ ಇದೇ 9ರಂದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ಇನ್ನೂ ಇದೆ ಅಸ್ಪೃಶ್ಯತೆ’ ವಿಶೇಷ ವರದಿಗಳನ್ನು ಪ್ರಸ್ತಾಪಿಸಿದರು. ಆಗ ಸಭಾನಾಯಕರು ನಿರುತ್ತರರಾದರು.

ಆಚರಿಸಿದರಷ್ಟೇ ಬೆಲೆ: ‘ಅಸ್ಪೃಶ್ಯತೆಯನ್ನು ಆಚರಿಸಿದ ದಲಿತರಿಗಷ್ಟೇ ಸಮಾಜ ಮಣೆ ಹಾಕುತ್ತದೆ, ಮತ್ತೆ ಮತ್ತೆ ಶಾಸನ ಸಭೆಗಳಿಗೆಆರಿಸಿ ಕಳುಹಿಸುತ್ತದೆ. ಹಿಂದೂ ರಾಷ್ಟ್ರ ಕಟ್ಟಲು ಹೊರಟವರು ಅಸ್ಪೃಶ್ಯರ ನೋವನ್ನು ಕಂಡಿದ್ದೀರಾ’ ಎಂದು ತಿಮ್ಮಾಪೂರ ಚುಚ್ಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.