ಬೆಂಗಳೂರು: ‘ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ನೆಲಮಂಗಲದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಶಿಕ್ಷಣ ಸಂಸ್ಥೆ ವತಿಯಿಂದ ‘ಕ್ಷೇಮವನ’ ನಿರ್ಮಿಸಲಾಗಿದೆ. ಈ ವನವನ್ನು ಸೆ.1ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಉದ್ಘಾಟಿಸಲಿದ್ದಾರೆ’ ಎಂದು ಸಂಸ್ಥೆಯ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉದ್ಘಾಟನೆ ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವಿರೇಂದ್ರ ಹೆಗ್ಗಡೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸ್ಥೆಯ ವತಿಯಿಂದ ಈ ಹಿಂದೆ ‘ಶಾಂತಿವನ’ ಮತ್ತು ‘ಸೌಖ್ಯವನ’ ನಿರ್ಮಿಸಲಾಗಿತ್ತು. ಇದು ಮೂರನೇ ವನವಾಗಿದೆ’ ಎಂದು ಹೇಳಿದರು.
‘20 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕ್ಷೇಮವನವು, ದೇಹ ಮತ್ತು ಮನಸ್ಸಿನ ಸಮತೋಲನ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ. ಜೀವನಕ್ರಮವನ್ನು ಸೈಸರ್ಗಿಕವಾಗಿ ಮರುರೂಪಿಸಿಕೊಳ್ಳಲು ನೆರವಾಗಲಿದೆ. ಪ್ರಾಚೀನ ವಾಸ್ತು ವಿನ್ಯಾಸಗಳಿಗೆ ಅನುಗುಣವಾಗಿ ಬಣ್ಣ, ವಿನ್ಯಾಸ ಮತ್ತು ಸಂರಚನೆ ಮಾಡಲಾಗಿದೆ. ಮಹೇಶ್ ಡಿಯೋಫೋಡೆ ಅವರು ಈ ಕೇಂದ್ರವನ್ನು ವಿನ್ಯಾಸ ಮಾಡಿದ್ದಾರೆ’ ಎಂದು ತಿಳಿಸಿದರು.
‘ಕ್ಷೇಮವನದಲ್ಲಿ ಏಕಕಾಲದಲ್ಲಿ 400 ಅತಿಥಿಗಳಿಗೆ ಶುಶ್ರೂಷೆ ನೀಡಬಹುದು. 86 ವಿಶೇಷ ಕೊಠಡಿಗಳಿವೆ. ಶಯನಾರೋಗ್ಯ, ಪೌಷ್ಟಿಕ ಆಹಾರ ಸೇರಿ 5 ಬಗೆಯ ಶುಶ್ರೂಷ ವಿಧಾನಗಳಿವೆ. ನಿಸರ್ಗ ಸಹಜ ವಿಧಾನಗಳ ಮೂಲಕ ಆರೋಗ್ಯವನ್ನು ಕಾಯ್ದುಕೊಳ್ಳಲು ಈ ಕೇಂದ್ರದ ಸೇವಾ ಸೌಲಭ್ಯ ಪಡೆಯಬಹುದು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.