ADVERTISEMENT

ಘನತೆಯ ಬದುಕೇ ಪವಿತ್ರ ಆರ್ಥಿಕತೆ; ಹೋರಾಟಗಾರ್ತಿ ವಂದನಾ ಶಿವ ಅಭಿಮತ

‘ಪವಿತ್ರ ಆರ್ಥಿಕತೆಗಾಗಿ ಸತ್ಯಾಗ್ರಹ’

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 20:05 IST
Last Updated 3 ಅಕ್ಟೋಬರ್ 2019, 20:05 IST
ಉಪವಾಸ ಸತ್ಯಾಗ್ರಹದಲ್ಲಿ ಹೋರಾಟಗಾರ್ತಿ ವಂದನಾ ಶಿವ ಸೇರಿದಂತೆ ಹಲವರು ಭಾಗವಹಿಸಿದ್ದರು
ಉಪವಾಸ ಸತ್ಯಾಗ್ರಹದಲ್ಲಿ ಹೋರಾಟಗಾರ್ತಿ ವಂದನಾ ಶಿವ ಸೇರಿದಂತೆ ಹಲವರು ಭಾಗವಹಿಸಿದ್ದರು   

ಬೆಂಗಳೂರು: ‘ಪವಿತ್ರ ಆರ್ಥಿಕತೆ ಎಂದರೆ ನಿರಂತರತೆ, ಘನತೆಯ ಬದುಕು ಮತ್ತು ಜೀವನೋಪಾಯದ ಮಾರ್ಗ’ ಎಂದು ಖ್ಯಾತ ಪರಿಸರ ಹೋರಾಟಗಾರ್ತಿ ವಂದನಾ ಶಿವ ಅಭಿಪ್ರಾಯಪಟ್ಟರು.

ಗ್ರಾಮ ಸೇವಾ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ‘ಪವಿತ್ರ ಆರ್ಥಿಕತೆಗಾಗಿ ಸತ್ಯಾಗ್ರಹ’ದಲ್ಲಿ ಗುರುವಾರ ಪಾಲ್ಗೊಂಡು ಅವರು
ಮಾತನಾಡಿದರು.

‘ನಮಗೆ ಕೆಲಸ ಬೇಕು, ಅದು ಭೂಮಿಯನ್ನು ನಾಶ ಮಾಡುವಂತದಲ್ಲ. ಭೂಮಿಯನ್ನು ಪುನಶ್ಚೇತನ ಮಾಡುವಂತದ್ದು’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

‘ನಮ್ಮೊಳಗಿನ ತಪ್ಪು ಕಲ್ಪನೆಗಳು, ವಿರೋಧಾಭಾಸಗಳ ನಡುವೆ ಉದ್ಯೋಗ ಮತ್ತು ಪರಿಸರದ ಬಗೆಗಿನ ಸಮತೋಲನವನ್ನು ಮರೆತು ಮುಂದುವರಿದಿದ್ದೇವೆ. ಮತ್ತೆ ನಾವೆಲ್ಲರೂ ಒಗ್ಗೂಡಿ ಪವಿತ್ರ ಆರ್ಥಿಕತೆಯಿಂದ ನಮ್ಮ ಪವಿತ್ರ ಭೂಮಿಯನ್ನು ಮರಳಿ ಕಟ್ಟಬೇಕಿದೆ’ ಎಂದರು.

‘ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಚಿಟ್ಟೆ, ದುಂಬಿ, ಹಕ್ಕಿಗಳು ಸಾಯುತ್ತಿವೆ. ಭೂಮಿಯಲ್ಲಿ ಜಲ ಬತ್ತಿ ಹೋಗುತ್ತಿದೆ. ಇದೆಲ್ಲದರ ಪರಿಣಾಮ ಪರಿಸರ ಅಸಮತೋಲನ ನಮ್ಮನ್ನು ಕಾಡುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ‘ಉದ್ಯೋಗ ಮತ್ತು ಪರಿಸರವನ್ನು ಜೊತೆಯಲ್ಲೇ ಉಳಿಸಿಕೊಳ್ಳಬೇಕಾದ ಕಾಲವಿದು’ ಎಂದು ಪ್ರತಿಪಾದಿಸಿದರು.

‘ನೆರೆ ಹಾಗೂ ಪ್ರವಾಹಪೀಡಿತ ಜನರ ಧ್ವನಿ ಕೇಳದ ಸರ್ಕಾರಗಳಿಗೆ ಜನರ ಧ್ವನಿ ತಲುಪಿಸುವ ಸಲುವಾಗಿ ಇದೇ 10ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.