ಬೆಂಗಳೂರು: ಭಾರತೀಯ ಸಾಮಗಾನ ಸಭಾ ಆಯೋಜಿಸಿದ್ದ ‘ಶಾಸ್ತ್ರೀಯ ಸಂಗೀತೋತ್ಸವ’ದ 10ನೇ ಆವೃತ್ತಿಯಲ್ಲಿ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ‘ಸಾಮಗಾನ ಮಾತಂಗ ಪ್ರಶಸ್ತಿ’ ಪ್ರದಾನ ಮಾಡ ಲಾಯಿತು. ಪ್ರಶಸ್ತಿಯು ₹1ಲಕ್ಷ ನಗದನ್ನು ಒಳಗೊಂಡಿದೆ.
‘ಗುರುಗಳಾದ ಪುಟ್ಟರಾಜ ಗವಾಯಿ ಅವರ ಆಶೀರ್ವಾದ ಮತ್ತು ಸಂಗೀತ ಆಸಕ್ತರ ಪ್ರೇಮದಿಂದ ನಮ್ಮಂತವರು ಉಳಿದಿದ್ದಾರೆ. ಪ್ರಚಾರ ಬಯಸಬೇಡ, ಸಂಗೀತ ಸಾಧನೆ ಮಾಡುತ್ತಿರು ಎಂದು ಗುರುಗಳು ಕಿವಿಮಾತು ಹೇಳುತ್ತಿದ್ದರು. ಅವರ ಮಾತಿನಂತೆ ನಡೆದಿದ್ದರಿಂದಲೇ ಕಲಾಸಕ್ತರ ಪ್ರೀತಿ ಸಿಕ್ಕಿದೆ’ ಎಂದುವೆಂಕಟೇಶ್ ಕುಮಾರ್ ಸ್ಮರಿಸಿದರು.
ಸಂತೂರ್ ವಾದಕ ಪಂಡಿತ್ ಭಜನ್ ಸೊಪೊರಿ, ‘ನಮ್ಮ ದೇಶ ಕಲೆ ಮತ್ತು ಸಂಸ್ಕೃತಿಗೆ ಹೆಸರುವಾಸಿ. ಸಂಗೀತಗಾರರನ್ನು ತಡವಾಗಿ ಗುರುತಿಸಲಾಗುತ್ತದೆ. ಇದು ದುಃಖದ ಸಂಗತಿ’ ಎಂದರು.
ಸಾಮಗಾನ ಸಭಾದ ಅಧ್ಯಕ್ಷ ಆರ್.ಆರ್.ರವಿಶಂಕರ್, ‘ವೆಂಕಟೇಶ್ ಕುಮಾರ್ ಭಕ್ತಿ ಸಂಗೀತದಿಂದಲೇ ನಮ್ಮನ್ನು ಧರ್ಮದ ದಾರಿಗೆ ಎಳೆದು ತರುತ್ತಾರೆ. ಅವರಿಗೆ ಯೋಗ ಮತ್ತು ಯೋಗ್ಯತೆ ಇವೆ’ ಎಂದು ಶ್ಲಾಘಿಸಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯ ದರ್ಶಿ ಟಿ.ಎಂ.ವಿಜಯ್ ಭಾಸ್ಕರ್, ‘ಬೆಂಗಳೂರಿನಲ್ಲಿ ಸಂಗೀತಕ್ಕೆ ಪ್ರೋತ್ಸಾಹ ನೀಡುವವರ ಕೊರತೆ ಇಲ್ಲ. ಕಲಾ ಕಾರ್ಯಕ್ರಮಗಳಿಗೆ ಸಹಕಾರ ನೀಡಲು ಸಂಸ್ಥೆಗಳು ಮತ್ತು ದಾನಿಗಳು ಇದ್ದಾರೆ. ಈ ಉತ್ಸವದಲ್ಲಿ ಯುವ ಸಂಗೀತಗಾರರಿಗೆ ಅವಕಾಶ ನೀಡುತ್ತಿರುವುದು ಸಂತಸದ ವಿಚಾರ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.