ADVERTISEMENT

ವಿಧಾನಸೌಧ: ಮಾಧ್ಯಮಕ್ಕೆ ಮೂಗುದಾರ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 22:30 IST
Last Updated 18 ಫೆಬ್ರುವರಿ 2026, 22:30 IST
   

ಬೆಂಗಳೂರು: ‘ಇನ್ನು ಮುಂದೆ ಮಾಧ್ಯಮ ಪ್ರತಿನಿಧಿಗಳು ವಿಧಾನಸೌಧದ ಒಳಗೆ ನಿಗದಿತ ಸ್ಥಳದಲ್ಲಿ ಮಾತ್ರ ಹೇಳಿಕೆಗಳನ್ನು ಪಡೆಯಬೇಕು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಗಣ್ಯರು ವಿಧಾನಸೌಧ ಪ್ರವೇಶಿಸುವಾಗ ಅವರನ್ನು ಹಿಂಬಾಲಿಸಿ ವಿಡಿಯೊ ಹೇಳಿಕೆ ಪಡೆಯಲು ಅವಕಾಶ ಇಲ್ಲ’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್) ಫರ್ಮಾನು ಹೊರಡಿಸಿದೆ.

ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಬರೆದಿದ್ದ ಪತ್ರವನ್ನು ಉಲ್ಲೇಖಿಸಿ ವಾರ್ತಾ ಮತ್ತು ಪ್ರಚಾರ ಇಲಾಖೆಯ ನಿರ್ದೇಶಕರಿಗೆ ಡಿಪಿಎಆರ್ ಕಾರ್ಯದರ್ಶಿ ಈ ಕುರಿತು ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?: ‘ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಬರೆದಿರುವ ಪತ್ರದಲ್ಲಿನ ಕೋರಿಕೆಯ ಮೇರೆಗೆ ವಾರ್ತಾ ಮತ್ತು ಪ್ರಚಾರ ಇಲಾಖೆಯು ಶಿಫಾರಸು ಮಾಡುವ ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಡಿಪಿಎಆರ್ (ಕಾರ್ಯಕಾರಿ) ಗುರುತಿನ ಚೀಟಿ ವಿತರಿಸುತ್ತಿದೆ. ಈ ಗುರುತಿನ ಚೀಟಿ ಹೊಂದಿರುವ ಎಲ್ಲ ಪತ್ರಿಕಾ ಮಾಧ್ಯಮ ಪ್ರತಿನಿಧಿಗಳು, ಭದ್ರತಾ ಹಿತದೃಷ್ಟಿಯಿಂದ ವಿಧಾನಸೌಧದ ಪಶ್ಚಿಮ ದ್ವಾರದ ಪೋರ್ಟಿಕೊ ಬಳಿ ನಿಗದಿಪಡಿಸಿರುವ ಸ್ಥಳದಲ್ಲಿ ಮಾತ್ರ ಹೇಳಿಕೆಗಳನ್ನು (ಬೈಟ್‌) ಪಡೆದುಕೊಳ್ಳಬೇಕು. ವಿಧಾನಸೌಧದ ಒಳಗೆ ಪ್ರವೇಶಿಸುವ ಸಂದರ್ಭದಲ್ಲಿ ಹೇಳಿಕೆಯನ್ನು ತೆಗೆದುಕೊಳ್ಳಲು, ಸಂದರ್ಶನ ನಡೆಸಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಗಣ್ಯರನ್ನು ಹಿಂಬಾಲಿಸದಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು’ ಎಂದು ಪತ್ರದಲ್ಲಿ ಡಿಪಿಎಆರ್ ಕಾರ್ಯದರ್ಶಿ ತಿಳಿಸಿದ್ದಾರೆ.

ADVERTISEMENT

ಕರ್ನಾಟಕದಲ್ಲಿ ತುರ್ತುಪರಿಸ್ಥಿತಿ: ಅಶೋಕ

‘ಸಿದ್ದರಾಮಯ್ಯ ಸರ್ಕಾರ ತನ್ನ ವೈಫಲ್ಯಗಳು, ಎಡವಟ್ಟು ಮತ್ತು ಭ್ರಷ್ಟಾಚಾರವನ್ನು ಮುಚ್ಚಿಟ್ಟುಕೊಳ್ಳುವ ಸಲುವಾಗಿ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಹೊರಟಿದೆ. ಈ ಮೂಲಕ ಪ್ರಜಾಪ್ರಭುತ್ವ ವಿರೋಧಿ, ಸರ್ವಾಧಿಕಾರಿ ಧೋರಣೆ ಪ್ರದರ್ಶನ ಮಾಡಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಟೀಕಿಸಿದ್ದಾರೆ.

‘ನಿಮ್ಮ ಸರ್ವೋಚ್ಚ ನಾಯಕ ರಾಹುಲ್‌ಗಾಂಧಿ ಹೋದ ಬಂದಲ್ಲೆಲ್ಲ ಪ್ರದರ್ಶನ ಮಾಡುವ ಕೆಂಪು ಸಂವಿಧಾನ ಪುಸ್ತಕದಲ್ಲಿ ಮಾಧ್ಯಮಗಳಿಗೆ ಪತ್ರಿಕಾ ಸ್ವಾತಂತ್ರ್ಯ ಇಲ್ಲವೇ? ಅಥವಾ ಇತ್ತೀಚೆಗೆ ಮಾಧ್ಯಮಗಳು ಬಯಲು ಮಾಡಿದ ತಮ್ಮ ಅತ್ಯಾಪ್ತ ಸಚಿವ ಬೈರತಿ ಸುರೇಶ್ ಅವರ ಕಚೇರಿಯಲ್ಲಿ ನಡೆದ ಲಕ್ಷಾಂತರ ಮೌಲ್ಯದ ಆಭರಣ, ನಗದು ಕಳ್ಳತನದ ಪ್ರಕರಣಗಳು ಬಯಲಾಗುತ್ತವೆ ಎನ್ನುವ ಭಯವಿದೆಯೇ? ವಿಧಾನಸೌಧ ಕಾಂಗ್ರೆಸ್‌ ಪಕ್ಷದ ಕಚೇರಿ ಅಲ್ಲ. ಅದು ಪ್ರಜಾಸೌಧ, ಏಳು ಕೋಟಿ ಕನ್ನಡಿಗರಿಗೆ ಸೇರಿದ ಶಕ್ತಿ ಸೌಧ. ಅಲ್ಲಿ ಮಾಧ್ಯಮಗಳಿಗೆ ಬರಬೇಡಿ ಎಂದು ನಿಯಂತ್ರಣ ಮಾಡಲು ಯಾರಿಗೂ ಅಧಿಕಾರವಿಲ್ಲ’ ಎಂದಿದ್ದಾರೆ.

ಪ್ರಜಾಪ್ರಭುತ್ವ ವಿರೋಧಿ: ವಿಜಯೇಂದ್ರ

‘ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು’ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು. ‘ಪಾಕಿಸ್ತಾನ ಜಿಂದಾಬಾದ್‌ ಎಂದು ಜಯಘೋಷ ಕೂಗುವುದಕ್ಕೆ ಕಡಿವಾಣ ಹಾಕಲು, ಅಂಥ ದೇಶದ್ರೋಹಿ
ಗಳನ್ನು ಒದ್ದು ಒಳಗೆ ಹಾಕಲು ಕಾಂಗ್ರೆಸ್‌ ಸರ್ಕಾರಕ್ಕೆ ಸಾಧ್ಯವಾಗಿಲ್ಲ’ ಎಂದರು.

ಸಚಿವರ ಕಚೇರಿಯಲ್ಲಿ ಕಳ್ಳತನದ ನೆಪವೊಡ್ಡಿ ಈ ರೀತಿ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದಾರೆ ಎಂದ ಅವರು, ಈ ಕುರಿತ ಆದೇಶವನ್ನು ತಕ್ಷಣ ಹಿಂಪಡೆಯುವಂತೆ ಅವರು ಆಗ್ರಹಿಸಿದರು.

ಪ್ರಜಾತಂತ್ರದ ಪವಿತ್ರ ಸ್ಥಳದಲ್ಲೇ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವುದು ಆತಂಕಕಾರಿ. ಪತ್ರಕರ್ತರ ಪ್ರವೇಶಕ್ಕೆ ಅಡ್ಡಿ ಮಾಡುವುದು ಜನರ ಧ್ವನಿಯನ್ನೇ ಕಟ್ಟಿ ಹಾಕುವ ಪ್ರಯತ್ನ
ವಿ.ಸುನಿಲ್‌ಕುಮಾರ್ ಬಿಜೆಪಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.