
ಬೆಂಗಳೂರು: ವಿಧಾನಸೌಧದ ಕೊಠಡಿ ಸಂಖ್ಯೆ 316ಎ ಯಲ್ಲಿಟ್ಟಿದ್ದ ಬ್ಯಾಗ್ನಿಂದ 200 ಗ್ರಾಂ ಚಿನ್ನ, ₹ 90 ಸಾವಿರ ಮೌಲ್ಯದ ಬೆಳ್ಳಿ, ₹ 1.10 ಲಕ್ಷ ನಗದು ಕಳ್ಳತನ ಮಾಡಿದ್ದ ‘ಡಿ’ ಗ್ರೂಪ್ ನೌಕರನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಕೊಠಡಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು (ಡಿಪಿಎಆರ್) ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಹಂಚಿಕೆ ಮಾಡಿದೆ. ಆ ಕಚೇರಿಯಲ್ಲಿಯೇ ಸಚಿವರು ಕಾರ್ಯನಿರ್ವಹಿಸುತ್ತಿದ್ದಾರೆ.
ಬಂಗಾರಪೇಟೆ ನಿವಾಸಿ ನವೀನ್ ಕುಮಾರ್ ಅವರ ದೂರು ಆಧರಿಸಿ ಡಿಪಿಎಆರ್ನ ‘ಡಿ’ ಗ್ರೂಪ್ನ ನೌಕರ ಥಾಮಸ್ ಅಂತೋನಿ ದಾಸ್ ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
‘ಲೋಕಾಯುಕ್ತ ಕಚೇರಿಗೆ ದೂರು ನೀಡಲು ಬಂಗಾರಪೇಟೆಯಿಂದ ಫೆಬ್ರುವರಿ 4ರಂದು ಬಂದಿದ್ದ ನಾನು, ಸಂಜೆ ವಿಧಾನಸೌಧದ ಕೊಠಡಿ ಸಂಖ್ಯೆ 316ಎ ಕ್ಕೆ ಹೋಗಿದ್ದೆ. ನನ್ನ ಬ್ಯಾಗ್ನಲ್ಲಿ ವೈದ್ಯಕೀಯ, ಕಂದಾಯ ಇಲಾಖೆ ದಾಖಲೆ, ಖಾಸಗಿ ದಾಖಲೆಗಳು, 200 ಗ್ರಾಂ ಚಿನ್ನದ ಆಭರಣ, ₹ 90 ಸಾವಿರ ಮೌಲ್ಯದ ಬೆಳ್ಳಿಯ ಒಡವೆ, ₹ 1.10 ಲಕ್ಷ ನಗದು ಇತ್ತು. ಬ್ಯಾಗ್ ಅನ್ನು ಕೊಠಡಿ
ಯಲ್ಲಿಟ್ಟು ಮುಖ್ಯ ಕಾರ್ಯದರ್ಶಿ ಕಚೇರಿಗೆ ತೆರಳಿದ್ದೆ. ರಾತ್ರಿ 9.40ಕ್ಕೆ ಬ್ಯಾಗ್ ತೆಗೆದು ಕೊಂಡು ಹೋಗಲು ವಾಪಸ್ ಬಂದಾಗ, ಕೊಠಡಿಗೆ ಬೀಗ ಹಾಕಿತ್ತು. ವಿಚಾರಿಸಿದಾಗ ಮರುದಿನ ಬರುವಂತೆ ಅಲ್ಲಿನ ಸಿಬ್ಬಂದಿ ಸಲಹೆ ನೀಡಿದರು’ ಎಂದು ಆರ್. ನವೀನ್ ಕುಮಾರ್ ದೂರಿದ್ದರು.
‘ಫೆ.5ರಂದು ಮಧ್ಯಾಹ್ನ 1.30ಕ್ಕೆ ಕೊಠಡಿಗೆ ತೆರಳಿ ಬ್ಯಾಗ್ ಬಗ್ಗೆ ವಿಚಾರಿಸಿದೆ. ಆಗ ‘ಡಿ’ ಗ್ರೂಪ್ ನೌಕರ ಕೀರ್ತಿ ಅವರು ಬ್ಯಾಗ್ ಅನ್ನು ತೆಗೆದು ರಾತ್ರಿಯೇ ಕೊಠಡಿಯ ಹೊರಗೆ ಕಿಟಕಿಯಲ್ಲಿ ಇಟ್ಟಿದ್ದಾಗಿ ತಿಳಿಸಿದರು. ಸಂಜೆ ವಿಧಾನಸೌಧ ಭದ್ರತಾ ಸಿಬ್ಬಂದಿ ಕರೆ ಮಾಡಿ, ಬ್ಯಾಗ್ ದೊರಕಿದ್ದು, ಕೊಠಡಿ ಸಂಖ್ಯೆ ‘37ಎ’ ಗೆ ಬಂದು ಪಡೆದುಕೊಳ್ಳಲು ಸೂಚಿಸಿದರು. ಬ್ಯಾಗ್ ಪಡೆದುಕೊಂಡು ಪರಿಶೀಲಿಸಿದಾಗ ಆಭರಣ, ನಗದು ಇರಲಿಲ್ಲ. ಬ್ಯಾಗ್ ನಲ್ಲಿದ್ದ ₹34 ಲಕ್ಷ ಮೌಲ್ಯದ ಚಿನ್ನಾಭರಣ, ₹1.10 ಲಕ್ಷ ನಗದು ಪತ್ತೆ ಮಾಡಿಕೊಡಬೇಕು’ ಎಂದು ದೂರಿನಲ್ಲಿ ಮನವಿ ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲಿಸರು ತನಿಖೆ ಕೈಗೊಂಡು ಸಿ.ಸಿ.ಟಿ.ವಿ. ಕ್ಯಾಮೆರಾಗಳ ಪರಿಶೀಲನೆ ನಡೆಸಿದಾಗ, ಡಿಪಿಎಆರ್ನ ‘ಡಿ’ ಗ್ರೂಪ್ನ ನೌಕರರೊಬ್ಬರು ಬ್ಯಾಗ್ ತೆಗೆದುಕೊಂಡು ಹೋಗುತ್ತಿರುವುದು ಪತ್ತೆಯಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
‘ಆರೋಪಿ ಥಾಮಸ್ ಅಂತೋನಿ ದಾಸ್ ಅವರನ್ನು ನ್ಯಾಯಾಲಯವು ಒಂದು ದಿನ ಕಸ್ಟಡಿಗೆ ನೀಡಿದೆ. ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ನವೀನ್ ಕುಮಾರ್ ಅವರು ಹಣ ಹಾಗೂ ಆಭರಣದ ಬ್ಯಾಗ್ ಅನ್ನು ಯಾವ ಕಾರಣಕ್ಕೆ ವಿಧಾನಸೌಧಕ್ಕೆ ತಂದಿದ್ದರು ಎಂಬುದರ ಬಗ್ಗೆ ವಿಚಾರಣೆ ನಡೆಸಬೇಕಿದೆ. ಹಾಗಾಗಿ ಅವರಿಗೆ ನೋಟಿಸ್ ಜಾರಿ ಮಾಡಲಾಗುವುದು’ ಎಂದು ಪೊಲೀಸರು ತಿಳಿಸಿದರು.
ಭದ್ರತಾ ಲೋಪದ ಪ್ರಶ್ನೆ
ಕಳ್ಳತನದ ಪ್ರಕರಣ ಭೇದಿಸಲಾಗಿದ್ದರೂ ಈ ಘಟನೆಯು ವಿಧಾನಸೌಧದ ಭದ್ರತಾ ವ್ಯವಸ್ಥೆಯ ಲೋಪಗಳನ್ನು ಎತ್ತಿ ತೋರಿಸಿದೆ ಎಂಬ ಚರ್ಚೆ ಶುರುವಾಗಿದೆ. ಚಿನ್ನಾಭರಣ ಹಾಗೂ ಒಂದೂವರೆ ಲಕ್ಷ ನಗದು ಅನ್ನು ವ್ಯಕ್ತಿಯೊಬ್ಬರು ತಪಾಸಣೆ ಇಲ್ಲದೆ ಒಳಗೆ ತಂದಿದ್ದು ಹೇಗೆ? ದ್ವಾರಗಳಲ್ಲಿ ಅಳವಡಿಸಲಾದ ಮೆಟಲ್ ಡಿಟೆಕ್ಟರ್ಗಳು ಮತ್ತು ಸ್ಕ್ಯಾನರ್ಗಳು ಲೋಹದ ವಸ್ತುಗಳನ್ನು ಪತ್ತೆ ಹಚ್ಚಲಿಲ್ಲವೇ? ಅಥವಾ ಭದ್ರತಾ ಸಿಬ್ಬಂದಿ ತಪಾಸಣೆಯಲ್ಲಿ ನಿರ್ಲಕ್ಷ್ಯ ವಹಿಸಿದರೇ ಎಂಬ ಪ್ರಶ್ನೆಗಳು ವಿಧಾನಸೌಧದ ಪಡಸಾಲೆಯಲ್ಲಿ ಹರಿದಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.