ಬೆಂಗಳೂರು: ‘ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಅಶೋಕ ಜುಂಜರವಾಡ ತಮ್ಮ ಮಕ್ಕಳ ಓಡಾಟಕ್ಕಾಗಿ ಸರ್ಕಾರಿ ವಾಹನ ಬಳಸು ತ್ತಿದ್ದಾರೆ’ ಎಂದು ಡಿಸಿಪಿಯವರ ಚಾಲಕ ಪವನ್ ಆರೋಪಿಸಿದ್ದಾರೆ.
‘ರಜೆ ನೀಡದೇ ದಿನಕ್ಕೆ 15 ಗಂಟೆ ದುಡಿಸಿಕೊಳ್ಳಲಾಗುತ್ತಿದೆ’ ಎಂಬುದಾಗಿ ಅಸಮಾಧಾನ ವ್ಯಕ್ತಪಡಿಸಿ
ಡಿಸಿಪಿ ಅಶೋಕ ಅವರಿಗೇ ಪತ್ರ ಬರೆದಿರುವ ಪವನ್ ಅಳಲು ತೋಡಿಕೊಂಡಿದ್ದಾರೆ. ಈ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
‘ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಕೆಲ ತಿಂಗಳಿನಿಂದ ನಾನು ವಿಧಾನಸೌಧ ಭದ್ರತಾ ವಿಭಾಗದ ನಿಮ್ಮ (ಡಿಸಿಪಿ) ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ನಿಮಗೆ ಎರಡು ಕಾರುಗಳಿದ್ದು, ಒಂದನ್ನು ಮಾತ್ರ ಕಚೇರಿ ಉಪಯೋಗಕ್ಕೆ ಬಳಸುತ್ತಿದ್ದೀರಿ.
ಇನ್ನೊಂದನ್ನು ನಿಮ್ಮ ಮಕ್ಕಳನ್ನು ಶಾಲೆ, ಮಾರುಕಟ್ಟೆ ಹಾಗೂ ಇತರೆಡೆ ಕರೆದೊಯ್ಯಲು ಉಪಯೋಗಿಸುತ್ತಿದ್ದಿರಿ. ನಿಮಗೆ (ಡಿಸಿಪಿ) ನಾನೂ ಸೇರಿ ಇಬ್ಬರು ಚಾಲಕರು. ಒಬ್ಬಚಾಲಕನ್ನು ನಿಮ್ಮ ಮಕ್ಕಳ ಓಡಾಟದ ಕಾರಿಗೆ ನಿಯೋಜಿಸಿದ್ದೀರಿ. ನನ್ನನ್ನು ಕಚೇರಿ, ರಾತ್ರಿ ಗಸ್ತು ಹಾಗೂ ಇತರೆಡೆ ಕರೆದೊಯ್ಯುತ್ತೀರಿ. ನಿತ್ಯವೂ15 ಗಂಟೆ ಕೆಲಸ ಮಾಡಿಸಿಕೊಳ್ಳುತ್ತೀರಿ. ಇದರಿಂದ ನನ್ನ ವೈಯಕ್ತಿಕ ಜೀವನಕ್ಕೆ ಸಮಯ ನೀಡಲು ಆಗುತ್ತಿಲ್ಲ.ರಜೆ ಕೇಳಿದರೆ ಕೊಡುವುದಿಲ್ಲವೆಂದು ಮಾನಸಿಕವಾಗಿ ನೋಯಿಸುತ್ತೀರಿ’ ಎಂದು ಪವನ್ ಪತ್ರದಲ್ಲಿ ದೂರಿದ್ದಾರೆ.
‘ಪೊಲೀಸ್ ಇಲಾಖೆ ನಿಯಮ ಹಾಗೂ ಹುದ್ದೆಗೆ ತಕ್ಕಂತೆ ನಾನು ಕೆಲಸ ಮಾಡಲು ಸಿದ್ಧನಿದ್ದೇನೆ. ಆದರೆ ಅನಧಿಕೃತವಾಗಿ ಕೆಲಸ ಮಾಡಲು ನನ್ನಿಂದ ಆಗುವುದಿಲ್ಲ’ ಎಂದೂ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಆರೋಪದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಡಿಸಿಪಿ ಅಶೋಕಜುಂಜರವಾಡ ಅವರು ಲಭ್ಯರಾಗಲಿಲ್ಲ.
ಬೇರೆಡೆ ನಿಯೋಜನೆ: ಸಾಮಾಜಿಕ ಮಾಧ್ಯಮಗಳಲ್ಲಿ ಪತ್ರ ಹರಿದಾಡು ತ್ತಿದ್ದಂತೆ ಕಾನ್ಸ್ಟೇಬಲ್ ಪವನ್ ಅವರನ್ನು ಬೇರೆಡೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.