ಬೆಂಗಳೂರು: ಪತಿಯ ಕೊಲೆ ಆರೋಪದ ಮೇಲೆ ವಿದ್ಯಾರಣ್ಯಪುರ ಠಾಣೆಯ ಪೊಲೀಸರು ಗೃಹಿಣಿ ಮತ್ತು ಆಕೆಯ ಪ್ರಿಯಕರನನ್ನು ವಿದ್ಯಾರಣ್ಯಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನ.6ರಂದು ವಿದ್ಯಾರಣ್ಯಪುರದ ವಡೇರಹಳ್ಳಿಯಲ್ಲಿ ರಾಕೇಶ್ ತೋಮಂಗ್ (54) ಕೊಲೆ ನಡೆದಿತ್ತು. ಮೃತನ ಪತ್ನಿ ದೇಬಿತಾಬಾಗ್ (42) ಹಾಗೂ ಆಕೆಯ ಪ್ರಿಯಕರ ಬಾಬುಅಲಿ (30) ಅವರನ್ನು ಬಂಧಿತರು.
‘ಪಶ್ಚಿಮ ಬಂಗಾಳದ ರಾಕೇಶ್ ಸೆಕ್ಯೂರಿಟಿ ಗಾರ್ಡ್ ಆಗಿದ್ದರು. ಪತಿಗೆ ಊಟ ಕೊಡಲು ಬರುತ್ತಿದ್ದ ದೇಬಿತಾಬಾಗ್ಗೆ ಬಾಬು ಪರಿಚಯವಾಗಿದ್ದು, ಪರಿಚಯ ಪ್ರೇಮಕ್ಕೆ ತಿರುಗಿತ್ತು. ದಂಪತಿಯ ವಯಸ್ಸಿನ ಅಂತರವೂ ಕೊಲೆಗೆ ಕಾರಣವಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ರಾಕೇಶ್ ಮದ್ಯವ್ಯಸನಿಯಾಗಿದ್ದು ಲೈಂಗಿಕ ಆಸಕ್ತಿ ಕಳೆದುಕೊಂಡಿದ್ದರು. ಇದು, ದಂಪತಿ ನಡುವೆ ವೈಮನಸ್ಯಕ್ಕೆ ಕಾರಣವಾಗಿತ್ತು. ಬಾಬು ಆಗಾಗ್ಗೆ ಮನೆಗೆ ಬರುತ್ತಿದ್ದ. ಅ.29ರಂದು ಕೊಲೆಗೆ ಇಬ್ಬರು ಸಂಚು ರೂಪಿಸಿದ್ದರು. ರಾಕೇಶ್ ನಿದ್ರೆಯ ಮಂಪರಿನಲ್ಲಿದ್ದಾಗ ಇಬ್ಬರು ಸೇರಿ ಕಿತ್ತು ಹಿಸುಕಿ ಕೊಲೆ ಮಾಡಿದ್ದರು. ಬಳಿಕ ಅತಿಯಾಗಿ ಮದ್ಯ ಸೇವಿಸಿ ಎದೆ ಉರಿಯಿಂದ ಪತಿ ಮೃತಪಟ್ಟಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಳು.
ಕತ್ತಿನಲ್ಲಿ ಗಾಯದ ಗುರುತು ಗಮನಿಸಿದ್ದ ಪೊಲೀಸರು ಅನುಮಾನಾಸ್ಪದ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದರು.
‘ಸವಾಲು ಹಾಕಿದ್ದ ಪ್ರಿಯತಮೆ’: ‘ಅನೈತಿಕ ಸಂಬಂಧದ ಬಗ್ಗೆ ಶಂಕೆ ಇದ್ದ ರಾಕೇಶ್, ಮೂರು ಬಾರಿ ಪತ್ನಿಗೆ ಎಚ್ಚರಿಸಿದ್ದ. ಈ ಮಧ್ಯೆ ಪತಿಯನ್ನು ಕೊಲೆ ಮಾಡು. ಇಲ್ಲದಿದ್ದರೆ ನನ್ನನ್ನು ಬಿಟ್ಟುಬಿಡು ಎಂದು ಬಾಬುವಿಗೆ ದೇವಿತಾ ಸವಾಲು ಹಾಕಿದ್ದಳು’ ಎಂದು ಮೂಲಗಳು ತಿಳಿಸಿವೆ.
‘ಮನೆಯಲ್ಲೇ ಅಡಗಿ ಕೊಲೆಗೆ ಹೊಂಚು ಹಾಕಿದ್ದ’
‘ಮನೆಯಲ್ಲಿ ಎರಡು ಕೋಣೆಗಳಿದ್ದು, ಅನುಪಯುಕ್ತ ವಸ್ತುಗಳಿದ್ದ ಕೋಣೆಯಲ್ಲಿ ಅ.29ರಿಂದ ನ.6ರವರೆಗೂ ಬಾಬು ಅಲಿ ಅಡಗಿ ಕುಳಿತು ಕೊಲೆಗೆ ಪ್ರಯತ್ನಿಸಿದ್ದ. ದೇಬಿತಾಬಾಗ್ ಆತನಿಗೆ ಊಟ ಪೂರೈಸುತ್ತಿದ್ದಳು.’
ಕೊಲೆ ಬಳಿಕ ಪತಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಪತ್ನಿ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಳು. ಬಳಿಕ ಫೋನ್ ಪೇ ಮೂಲಕ ಬಾಬುಗೂ ಹಣ ಹಾಕಿದ್ದಳು. ಹೊಸ ಸಿಮ್ ಖರೀದಿಸಿ ಪ್ರಿಯಕರನಿಗೆ ನೀಡಿದ್ದಳು.
ಕೃತ್ಯದ ಬಳಿಕ ಹೊಸೂರಿನಲ್ಲಿ ಆರೋಪಿ ತಲೆಮರೆಸಿಕೊಂಡಿದ್ದ. ಮೊಬೈಲ್ ಕರೆ ಹಾಗೂ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಧರಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.