ADVERTISEMENT

ಕಸ ಟೆಂಡರ್‌ನಲ್ಲಿ ನಿಯಮ ಉಲ್ಲಂಘನೆ

ಸಚಿವರ ಆಪ್ತರಿಗೆ ಅವಕಾಶ ಮಾಡಿಕೊಡಲು ಬಿಎಸ್‌ಡಬ್ಲ್ಯುಎಂಎಲ್‌ ಎಂಜಿನಿಯರ್‌ಗಳಿಂದ ತುರ್ತು ಮಾರ್ಪಾಟು: ಗುತ್ತಿಗೆದಾರರ ಆರೋಪ

ಆರ್. ಮಂಜುನಾಥ್
Published 14 ಜೂನ್ 2025, 19:26 IST
Last Updated 14 ಜೂನ್ 2025, 19:26 IST
ತ್ಯಾಜ್ಯ ವಿಲೇವಾರಿಯ ಆಟೊ ಟಿಪ್ಪರ್‌ಗಳು
ತ್ಯಾಜ್ಯ ವಿಲೇವಾರಿಯ ಆಟೊ ಟಿಪ್ಪರ್‌ಗಳು   

ಬೆಂಗಳೂರು: ತ್ಯಾಜ್ಯ ವಿಲೇವಾರಿಗೆ 33 ಪ್ಯಾಕೇಜ್‌ನಲ್ಲಿ ಕರೆಯಲಾಗಿರುವ ಟೆಂಡರ್‌ನಲ್ಲಿ, ಪ್ರೀ–ಬಿಡ್‌ ಪ್ರಕ್ರಿಯೆ ಮುಗಿದ ಮೇಲೆ ನಿಯಮ ಮೀರಿ ಹೊಸ ಷರತ್ತು ಹಾಗೂ ವಿನಾಯಿತಿಗಳನ್ನು ಸೇರಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಥಮಿಕ ತ್ಯಾಜ್ಯ ಸಂಗ್ರಹ, ಎರಡನೇ ಹಂತದ ತ್ಯಾಜ್ಯ ವರ್ಗಾವಣೆ, ರಸ್ತೆ ಗುಡಿಸಿದ ಕಸ ಸಂಗ್ರಹಿಸಲು 33 ವಿಭಾಗವಾರು ಟೆಂಡರ್‌ ಅನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಕಂಪನಿ (ಬಿಎಸ್‌ಡಬ್ಲ್ಯುಎಂಎಲ್‌) ಮೇ 28ರಂದು ಆಹ್ವಾನಿಸಲಾಗಿತ್ತು. ಜೂನ್‌ 9ರಂದು ನಡೆದ ಪ್ರೀ–ಬಿಡ್‌ ಸಭೆಯಲ್ಲಿ ಚರ್ಚಿಸಲಾಗದಂತಹ ವಿನಾಯಿತಿ, ಷರತ್ತುಗಳನ್ನು ವಿಧಿಸಿ ಹೊಸ ಅನುಬಂಧವನ್ನು ಎಂಜಿನಿಯರ್‌ಗಳು ಸೇರಿಸಿದ್ದಾರೆ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ.

ತ್ಯಾಜ್ಯ ವಿಲೇವಾರಿ ಟೆಂಡರ್‌ ಪಡೆಯಲು ಐದು ವರ್ಷಗಳ ಸೇವೆಯನ್ನು 2019–20ನೇ ಆರ್ಥಿಕ ಸಾಲಿನಿಂದ 2023–24ನೇ ಸಾಲಿನವರೆಗೆ ಪರಿಗಣಿಸಲಾಗುತ್ತದೆ ಎಂದು ನಮೂದಿಸಲಾಗಿತ್ತು. ಇದನ್ನು ಮಾರ್ಪಾಟು ಮಾಡಿ, 2019–20ನೇ ಆರ್ಥಿಕ ಸಾಲನ್ನು ಬಿಟ್ಟು 2024–25ನೇ ಸಾಲನ್ನು ಸೇರಿಸಲಾಗಿದೆ. ಕೋವಿಡ್‌ನಿಂದ ಲಾಕ್‌ಡೌನ್‌ ಆಗಿ 2019–20ನೇ ಸಾಲಿನಲ್ಲಿ ಹೆಚ್ಚು ಕಾಮಗಾರಿ ನಡೆದಿರಲಿಲ್ಲ. ಆರ್ಥಿಕ ವಹಿವಾಟು ಕಡಿಮೆಯಾಗಿತ್ತು. ಆದರೂ ನಿರ್ವಹಣೆ ಕಾರ್ಯವನ್ನು ಗುತ್ತಿಗೆದಾರರು ಕಷ್ಟಪಟ್ಟು ನಿರ್ವಹಿಸಿದ್ದರು. ಈ ಗುತ್ತಿಗೆದಾರರನ್ನು ಈಗ ಪರಿಗಣಿಸಲಾಗುತ್ತಿಲ್ಲ.

ADVERTISEMENT

ಹೊಸದಾಗಿ ಗುತ್ತಿಗೆ ನೋಂದಣಿಯನ್ನು ಪಡೆದಿರುವವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದಲೇ ಬಿಎಸ್‌ಡಬ್ಲ್ಯುಎಂಎಲ್‌ ಎಂಜಿನಿಯರ್‌ಗಳನ್ನು 2024–25ನೇ ಆರ್ಥಿಕ ಸಾಲಿಗೆ ಸೇರಿಸಿದ್ದಾರೆ. ಆರ್ಥಿಕ ವಹಿವಾಟನ್ನು ಈ ಸಾಲಿನಲ್ಲಿ ಪರಿಗಣಿಸುವುದಿಲ್ಲ ಎಂದು ಹೇಳಲಾಗಿದೆ. ಆದರೆ ಸೇವೆಯನ್ನು ಪರಿಗಣಿಸುತ್ತೇವೆ ಎಂದು ಹೊಸ ಅನುಬಂಧದಲ್ಲಿ ತಿಳಿಸಿರುವುದು ಕಾನೂನು, ನಿಯಮ ಉಲ್ಲಂಘನೆ ಎಂದು ಗುತ್ತಿಗೆದಾರರು ದೂರಿದ್ದಾರೆ.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕ (ಕೆಟಿಪಿಪಿ) ಕಾಯ್ದೆಯಂತೆ 33 ಪ್ಯಾಕೇಜ್‌ಗಳ ಟೆಂಡರ್‌ ಆಹ್ವಾನಿಸಲಾಗಿದೆ. ಕೆಪಿಪಿ ಪೋರ್ಟಲ್‌ನಲ್ಲೇ ಪ್ಯಾಕೇಜ್‌ನ ಪೂರ್ಣ ಮೊತ್ತದ ಆರ್ಥಿಕ ಬಿಡ್‌ ಸಲ್ಲಿಸಬೇಕು. ಆದರೆ, ಪ್ರತಿ ವಾಹನದ ತಿಂಗಳ ಬಳಕೆ ಶುಲ್ಕವನ್ನು ಟೆಂಡರ್‌ನ ಅಂತಿಮ ದಿನದ ಮೂರು ದಿನ ಮುನ್ನ ಬಿಎಸ್‌ಡಬ್ಲ್ಯುಎಂಎಲ್‌ ಎಂಜಿನಿಯರ್‌ಗಳಿಗೆ ಮುಚ್ಚಿದ ಲಕೋಟೆಯಲ್ಲಿ ನೀಡಬೇಕೆಂಬ ಹೊಸ ನಿಯಮ ಸೇರಿಸಿರುವುದು ಕೆಟಿಪಿಪಿ ಕಾಯ್ದೆಯ ಉಲ್ಲಂಘನೆ ಎಂದು ಆರೋಪಿಸಲಾಗಿದೆ.

‘ಏಳು ವರ್ಷದ ಟೆಂಡರ್‌ ಗುತ್ತಿಗೆ ಪಡೆಯುವ ಪಾಲುದಾರಿಕೆಯ ಗುತ್ತಿಗೆದಾರರಲ್ಲಿ ಉಂಟಾಗುವ ಸಮಸ್ಯೆಗೆ ಬಿಎಸ್‌ಡಬ್ಲ್ಯುಎಂಎಲ್‌ ಎಂಜಿನಿಯರ್‌ಗಳನ್ನು ನೀಡುವ ತೀರ್ಪೇ ಅಂತಿಮ ಎಂದು ಹೇಳಿದ್ದಾರೆ. ಆದರೆ, ಪಾಲುದಾರರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳದೆ ಎಂಜಿನಿಯರ್‌ಗಳಿಗೆ ಅಧಿಕಾರಿ ನೀಡಿದರೆ, ಪಕ್ಷಪಾತ ಉಂಟಾಗುತ್ತದೆ. ಯಾರನ್ನು ಬೇಕಾದರೂ ಕಪ್ಪು ಪಟ್ಟಿಗೆ  ಸೇರಿಸಬಹುದಾಗಿದೆ’ ಎಂದು ಗುತ್ತಿಗೆದಾರರು ಆತಂಕ ವ್ಯಕ್ತಪಡಿಸಿದರು.

ಗೊಂದಲ ಸೃಷ್ಟಿ: ಬಿಎಸ್‌ಡಬ್ಲ್ಯುಎಂಎಲ್‌ ತ್ಯಾಜ್ಯ ನಿರ್ವಹಣೆಗೆ 2022ರ ಪ್ಟೆಂಬರ್‌ನಲ್ಲಿ 89 ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಕರೆದಿತ್ತು. ತಾಂತ್ರಿಕ ಬಿಡ್‌ ಅರ್ಹತೆ ಸಮಸ್ಯೆಯಿಂದ ಟೆಂಡರ್‌ ರದ್ದಾಗಿತ್ತು. 2023ರ ಜನವರಿಯಲ್ಲಿ ಎರಡನೇ ಬಾರಿಗೆ ಟೆಂಡರ್‌ ಆಹ್ವಾನಿಸಿದ್ದಾಗ, ಅರ್ಹತಾ ಸುತ್ತಿನಲ್ಲಿ ಕೆಲವರನ್ನು ಅನರ್ಹಗೊಳಿಸಿದ್ದರಿಂದ ವಿಷಯ ಕೋರ್ಟ್‌ ಹಂತಕ್ಕೆ ತಲುಪಿತು. ಹೊಸ ಟೆಂಡರ್‌ ಪ್ರಕ್ರಿಯೆ ನಡೆಸುವುದಾಗಿ, ನ್ಯಾಯಾಲಯಕ್ಕೆ ಸರ್ಕಾರ ಹೇಳಿತ್ತು. ಅದರಂತೆ, ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು, 33 ಪ್ಯಾಕೇಜ್‌ಗೆ ಟೆಂಡರ್‌ ಆಹ್ವಾನಿಸಲಾಗಿದೆ. ಈಗ ಮತ್ತೊಮ್ಮೆ ಗೊಂದಲ ಸೃಷ್ಟಿಯಾಗಿದೆ.

ಕಾನೂನು ಸಲಹೆ ಪಡೆಯಲಾಗಿದೆ: ಲೋಕೇಶ್‌

‘ಆರ್ಥಿಕ ಸಾಮರ್ಥ್ಯವನ್ನು ಪರಿಶೀಲಿಸುವಾಗ ಹಿಂದಿನ ಆರ್ಥಿಕ ವರ್ಷ ಮುಗಿದು ಮೂರು ತಿಂಗಳಾಗಿರಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ತ್ಯಾಜ್ಯ ಪ್ಯಾಕೇಜ್‌ನಲ್ಲಿ ನಾವು 2019–20ನೇ ಸಾಲಿನಲ್ಲಿ ಘನತ್ಯಾಜ್ಯ ನಿರ್ವಹಣೆಯ ಸೇವೆಯನ್ನು ಪರಿಗಣಿಸುವ ಬದಲು 2024–25ನೇ ಸಾಲನ್ನು ನಮ್ಮ ಕಾನೂನು ತಜ್ಞರಿಂದ ಅಭಿಪ್ರಾಯ ಪಡೆದುಕೊಂಡೇ ಸೇರಿಸಿದ್ದೇವೆ. ಘನತ್ಯಾಜ್ಯ ನಿರ್ವಹಣೆ ಕೆಲಸವನ್ನು ನಿರ್ವಹಿಸಿರುವ ಪ್ರಮಾಣದಲ್ಲೂ 2024–25ನೇ ಸಾಲನ್ನು ಸೇರಿಸಿದ್ದೇವೆ. ಇದರಿಂದ ನಿಯಮ ಉಲ್ಲಂಘನೆಯಾಗಿಲ್ಲ. ಸಚಿವರ ಆಪ್ತರು ಅಥವಾ ಯಾರೊಬ್ಬರಿಗೆ ಅನುಕೂಲ ಕಲ್ಪಿಸಲು ನಾವು ಹೀಗೆ ಮಾಡಿಲ್ಲ. 33 ಪ್ಯಾಕೇಜ್‌ಗೂ ಇದು ಅನ್ವಯವಾಗುತ್ತದೆ’ ಎಂದು ಬಿಎಸ್‌ಡಬ್ಲ್ಯುಎಂಎಲ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಲೋಕೇಶ್‌ ತಿಳಿಸಿದರು.

ಪಾರದರ್ಶಕ ಕಾಯ್ದೆ ಉಲ್ಲಂಘನೆ: ಬಾಲಸುಬ್ರಮಣಿಯಂ ‘

ಪ್ರೀ–ಬಿಡ್ ಸಭೆಯಲ್ಲಿ ಚರ್ಚೆಯಾಗದ ವಿಷಯಗಳನ್ನು ಹೊಸದಾಗಿ ಸೇರಿಸಲಾಗಿದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ. ಸಚಿವರ ಆಪ‍್ತರಿಗೆ ಅನುಕೂಲ ಕಲ್ಪಿಸಲು ತುರ್ತಾಗಿ ಷರತ್ತುಗಳನ್ನು ಸಡಿಲಗೊಳಿಸಲಾಗಿದೆ. ಇದರಿಂದ ಸುಮಾರು 80 ಗುತ್ತಿಗೆದಾರರಿಗೆ ಸಮಸ್ಯೆಯಾಗುತ್ತದೆ’ ಎಂದು ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರು– ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌. ಬಾಲಸುಬ್ರಮಣಿಯಂ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.