ಬೆಂಗಳೂರು: ‘ಆರ್ಥಿಕವಾಗಿ ಹಿಂದುಳಿದವರಿಗೆ ನೀಡುತ್ತಿರುವ ಶೇ 10 ಮೀಸಲಾತಿಯನ್ನು ಕರ್ನಾಟಕದಲ್ಲೂ ತ್ವರಿತವಾಗಿ ಜಾರಿಗೊಳಿಸಬೇಕು. ಆದಾಯದ ಜತೆಗೆ, ಜಾತಿ ಪ್ರಮಾಣ ಪತ್ರವನ್ನೂ ನೀಡಬೇಕು’ ಎಂದುವಿಶ್ವ ವಿಪ್ರತ್ರಯೀ ಪರಿಷತ್ ಮುಖಂಡರು ಆಗ್ರಹಿಸಿದರು.
ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ನೀಡಿದ್ದ ಮೀಸಲಾತಿಯನ್ನು ಕೆಲವರು ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಹಾಗಾಗಿ, ಇದನ್ನು ತಕ್ಷಣ ಅನುಷ್ಠಾನಗೊಳಿಸಬೇಕು. ಕಂದಾಯ ಇಲಾಖೆ ಆದಾಯ ಪ್ರಮಾಣಪತ್ರ ನೀಡುತ್ತಿದೆ. ಆದರೆ, ಬ್ರಾಹ್ಮಣ ಸಮುದಾಯಕ್ಕೆ ಅಧಿಕೃತವಾಗಿ ಜಾತಿ ಪ್ರಮಾಣಪತ್ರ ನೀಡುತ್ತಿಲ್ಲ. ಸರ್ಕಾರ ಈ ಬಗ್ಗೆ ಸೂಚನೆ ನೀಡಬೇಕು ಎಂದುವಿಶ್ವವಿಪ್ರತ್ರಯೀ ಪರಿಷತ್ ಅಧ್ಯಕ್ಷಎಸ್.ರಘುನಾಥ್, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷಎಚ್.ಎಸ್. ಸಚ್ಚಿದಾನಂದ ಮೂರ್ತಿ,ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು. ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸಾಕಷ್ಟು ಕ್ರಿಯಾಶೀಲ ಕೆಲಸ ಮಾಡುತ್ತಿದೆ. ಆದರೆ, ಅನುದಾನದ ಕೊರತೆ ಕಾರಣದಿಂದ ಎಲ್ಲ ಯೋಜನೆಗಳನ್ನು ಜಾರಿ ಮಾಡಲು ತೊಂದರೆಯಾಗಿದೆ. ಮಂಡಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಕೋರಿದರು.
ಬ್ರಾಹ್ಮಣ ಸಮುದಾಯದ 42 ಉಪ ಪಂಗಡಗಳನ್ನು ಒಗ್ಗೂಡಿಸಲು ವಿಶ್ವ ವಿಪ್ರತ್ರಯೀ ಪರಿಷತ್ ಅಸ್ತಿತ್ವಕ್ಕೆ ತರಲಾಗಿದೆ.ಸಿರಿನಾಡು ಮಹಾಸಭಾ,ಉಲುಚಿ ಕಮ್ಮೆ ಮಹಾಸಭಾ,ಬಬ್ಬೂರು ಕಮ್ಮೆ ಸೇವಾ ಸಮಿತಿ,ಬಡಗನಾಡು ಮಹಾ ಸಭಾ,ಮುಲಕನಾಡು ಮಹಾಸಭಾ, ಕೂಟ ಮಹಾ ಪರಿಷತ್ತು,ಮಾಧ್ವ ಸಂಘ, ಶ್ರೀವೈಷ್ಣವ ಸಂಘ ಸೇರಿದಂತೆ ಎಲ್ಲ ಸಂಘಟನೆಗಳ ಒಕ್ಕೂಟವಾಗಿ ಪರಿಷತ್ ಕೆಲಸ ಮಾಡುತ್ತಿದೆ. ಶೃಂಗೇರಿ ಜಗದ್ಗುರುಗಳ ನೇತೃತ್ವದಲ್ಲಿ53 ದಿನಗಳು ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದೆ ಎಂದು ವಿವರಿಸಿದರು.
ಪರಿಷತ್ ಪ್ರಮುಖರಾದ ಎಸ್.ಸುದರ್ಶನ್,ಎ.ವಿ.ಪ್ರಸನ್ನ, ನಾಗೇಶ್,ಬಿ.ವಿ.ಕುಮಾರ್, ಬಿ.ವಿ.ರವಿಶಂಕರ್,ನಾಗೇಂದ್ರ, ಪ್ರಕಾಶ್ ಅಯ್ಯಂಗಾರ್, ದಿಲೀಪ್ ಸತ್ಯ, ವಿ.ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.