ADVERTISEMENT

ವಿಶ್ವ ಬ್ರಾಹ್ಮಣ ಇಲ್ಲವೇ ವಿಶ್ವಕರ್ಮ ಎಂದು ನಮೂದಿಸಿ: ಶಿವಸುಜ್ಞಾನತೀರ್ಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 16:01 IST
Last Updated 15 ಸೆಪ್ಟೆಂಬರ್ 2025, 16:01 IST
ಶಿವಸುಜ್ಞಾನತೀರ್ಥ ಸ್ವಾಮೀಜಿ
ಶಿವಸುಜ್ಞಾನತೀರ್ಥ ಸ್ವಾಮೀಜಿ   

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ತಮ್ಮ ಸಮುದಾಯದ ಎಲ್ಲ ಉಪಪಂಗಡದವರು ವಿಶ್ವಬ್ರಾಹ್ಮಣ ಅಥವಾ ವಿಶ್ವಕರ್ಮ ಎಂದು ನಮೂದಿಸುವಂತೆ ಕರ್ನಾಟಕ ರಾಜ್ಯ ವಿಶ್ವಬ್ರಾಹ್ಮಣ ಪೀಠಾಧಿಪತಿಗಳ ಅಭಿವೃದ್ಧಿ ಸಂಘ ಸಲಹೆ ನೀಡಿದೆ.

ವಿಶ್ವಕರ್ಮ ಸಮುದಾಯದಡಿ 41 ಉಪಪಂಗಡಗಳಿದ್ದು, 40 ಲಕ್ಷ ಜನಸಂಖ್ಯೆ ಇರುವ ಅಂದಾಜಿದೆ. ಆದರೆ, ಈ ಹಿಂದೆ ನಡೆದ ಸಮೀಕ್ಷೆಯ ವರದಿಯಲ್ಲಿ ಸಮುದಾಯದ ಜನಸಂಖ್ಯೆ 8 ಲಕ್ಷ ಎಂದು ತಿಳಿಸಲಾಗಿದೆ. ಗೊಂದಲ ಉಂಟಾಗಿ ಸಮುದಾಯಕ್ಕೆ ಸಿಗಬಹುದಾದ ಸೌಲಭ್ಯ ತಪ್ಪದಿರಲೆಂದು ಉಪಪಂಗಡದ ಬದಲು ಎರಡರಲ್ಲಿ ಒಂದು ಹೆಸರನ್ನು ಕಡ್ಡಾಯವಾಗಿ ನಮೂದಿಸುವಂತೆ ತಿಳಿಸಲಾಗುತ್ತಿದೆ ಎಂದು ಹಾಸನ ಜಿಲ್ಲೆ ಅರೇಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಹಾ ಸಂಸ್ಥಾನ ಮಠದ ಶಿವಸುಜ್ಞಾನತೀರ್ಥ ಸ್ವಾಮೀಜಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಸಮುದಾಯದಲ್ಲಿ ಪತ್ತಾರ, ಬಡಿಗೇರ, ಆಚಾರಿ, ಆಚಾರ್ಯ ಸಹಿತ ನಾನಾ ಉಪಪಂಗಡಗಳಿಂದ ಆಯಾ ಪ್ರದೇಶಗಳಲ್ಲಿ ಗುರುತಿಸಲಾಗುತ್ತದೆ. ವಿಶ್ವಬ್ರಾಹ್ಮಣ ಅಥವಾ ವಿಶ್ವಕರ್ಮ ಎನ್ನುವ ಹೆಸರಿಂದಲೇ ಸಮುದಾಯವನ್ನು ಮೊದಲಿನಿಂದಲೂ ಗುರುತಿಸುವುದರಿಂದ ಅದನ್ನೇ ನಮೂದಿಸಿ, ಇದರಿಂದ ನಿಖರ ಜನಸಂಖ್ಯೆ ತಿಳಿಯಲಿದೆ’ ಎಂದರು.

ADVERTISEMENT

ಆಯೋಗದ ಪಟ್ಟಿಯಲ್ಲಿ ವಿಶ್ವಕರ್ಮ ಕ್ರಿಶ್ಚಿಯನ್‌ ಎನ್ನುವ ಹೆಸರಿದೆ. ವಿಶ್ವಕರ್ಮ ಸಮುದಾಯದವರೂ ಮತಾಂತರ ಆಗುತ್ತಿರುವ ಮಾಹಿತಿಯಿದೆ. ಸಮುದಾಯದವರು ಮತಾಂತರ ಆಗಬಾರದು. ಸರ್ಕಾರವು ಇದಕ್ಕೆ ಅವಕಾಶ ಕೊಡಬಾರದು ಎಂದು ಸ್ವಾಮೀಜಿ ಹೇಳಿದರು.

ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ರಾಮಚಂದ್ರ ಸ್ವಾಮೀಜಿ, ನೀಲಕಂಠಚಾರ್ಯ ಸ್ವಾಮೀಜಿ, ಸಮುದಾಯದ ಪ್ರಮುಖರಾದ ಡಾ. ವಸಂತ ಮುರುಳಿ, ಬಾಬು ಪತ್ತಾರ, ಪುರುಷೋತ್ತಮ್‌ ಹಾಜರಿದ್ದರು.

ವಿಶ್ವಕರ್ಮ ಸಮುದಾಯದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಒಗ್ಗಟ್ಟಿನಿಂದಲೇ ಸಮುದಾಯದ ಪ್ರಗತಿಗೆ ಶ್ರಮಿಸುತ್ತಿದ್ದೇವೆ.
-ಶಿವಸುಜ್ಞಾನತೀರ್ಥ ಸ್ವಾಮೀಜಿ, ಅರೇಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಹಾ ಸಂಸ್ಥಾನ ಮಠ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.