ಬೆಂಗಳೂರು: ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ನೆಚ್ಚಿನ ತಾಣವಾಗಿದ್ದ ಬಸವೇಶ್ವರನಗರದ ವಿಶ್ವೇಶ್ಶರಯ್ಯ ಬಡಾವಣೆಯಸರ್.ಎಂ.ವಿಶ್ವೇಶ್ವರಯ್ಯ ಉದ್ಯಾನ ಅವ್ಯವಸ್ಥೆಯ ಆಗರವಾಗಿದೆ. ಇದರಿಂದಾಗಿ ಉದ್ಯಾನಕ್ಕೆ ಬರುವವರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.
ಒಂದೂವರೆ ಎಕರೆ ವಿಸ್ತೀರ್ಣದ ಉದ್ಯಾನದ ಸುತ್ತಲೂಮರಗಳು ಬೆಳೆ ದಿರುವುದರಿಂದ ವಾಯುವಿಹಾರಿಗಳಿಗೆ ತಂಪನೆಯ ಅನುಭವ ಇಲ್ಲಿ ದೊರೆ ಯುತ್ತದೆ. ಸಮರ್ಪಕವಾಗಿ ನಿರ್ವಹಣೆ ಮಾಡದ ಪರಿಣಾಮ ಎಲ್ಲೆಂದರೆಲ್ಲಿ ಬಿದ್ದಿರುವ ಕಸದ ರಾಶಿಗಳು ಕೊಳೆತು ನಾರುತ್ತಿವೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ನಡಿಗೆ ಹಾದಿಯ ಟೈಲ್ಸ್ಗಳು ಉಬ್ಬು ತಗ್ಗುವಿನಿಂದ ಕೂಡಿದ್ದು, ಹಿರಿಯರು ಓಡಾಡುವುದು ಕಷ್ಟ. ಬೆಂಚುಗಳೂ ಹಾಳಾಗಿವೆ.
ಮಕ್ಕಳ ಆಟಿಕೆಗಳಿಗೆ ಬಳಸಲಾದ ಕಬ್ಬಿಣದ ರಾಡ್ಗಳು ತುಕ್ಕು ಹಿಡಿದಿದ್ದು, ಮಕ್ಕಳು ಬಿದ್ದು ಪೆಟ್ಟು ಮಾಡಿಕೊಳ್ಳುವ ಅಪಾಯವೂ ಇದೆ. ಅದೇ ರೀತಿ,9 ಜಿಮ್ ಉಪಕರಣಗಳಲ್ಲಿ ಈಗಾಗಲೇ 3 ಉಪಕರಣಗಳು ಹಾಳಾಗಿವೆ. ಈ ಬಗ್ಗೆ ಉದ್ಯಾನದ ಉಸ್ತುವಾರಿ ವಹಿಸಿಕೊಂಡಿರುವವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ಸ್ಥಳೀಯ ನಿವಾಸಿಗಳು, ‘ಉದ್ಯಾನ ಈ ಸ್ಥಿತಿ ತಲುಪಲು ಅವರೇ ಕಾರಣ’ ಎಂದು ದೂರುತ್ತಾರೆ.
‘ನಿರ್ವಹಣೆಯ ಕೊರತೆಯಿಂದಾಗಿ ಉದ್ಯಾನಕ್ಕೆ ಕಾಲಿಡದ ಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಇದು ಕಾಣಿಸುತ್ತಿಲ್ಲ. ಗಿಡಗಳಿಗೆ ನೀರುಣಿಸದ ಪರಿಣಾಮ ಉದ್ಯಾನದಲ್ಲಿ ಹಸಿರು ಮಾಯವಾಗುತ್ತಿದೆ’ ಎಂದುನಿವೃತ್ತ ಭೂಜಲ ವಿಜ್ಞಾನಿಟಿ.ಎಂ.ಶಿವಶಂಕರ್ ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.