ADVERTISEMENT

ಕಾರ್ಮಿಕರ ರಕ್ಷಣೆಗೆ ಹೊಸ ಯೋಜನೆ: ಕಟ್ಟಡ ಕಾರ್ಮಿಕರ ಸಮಾವೇಶ

ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಭರವಸೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 2:10 IST
Last Updated 18 ಫೆಬ್ರುವರಿ 2020, 2:10 IST
‘ಇಂಡೋ– ಜರ್ಮನ್ ಫೋಕಲ್ ಪಾಯಿಂಟ್’ನ ನಿರ್ದೇಶಕ ಬಿ.ಕೆ ಸಾಹು (ಬಲಗಡೆ) ಮತ್ತು ಶಿವರಾಂ ಹೆಬ್ಬಾರ್ ಚರ್ಚಿಸಿದರು. ವಿ.ವಿ ಜೋತ್ಸ್ನಾ ರೆಡ್ಡಿ ಮತ್ತು ಪಿ. ಮಣಿವಣ್ಣನ್ ಇದ್ದರು - –ಪ್ರಜಾವಾಣಿ ಚಿತ್ರ
‘ಇಂಡೋ– ಜರ್ಮನ್ ಫೋಕಲ್ ಪಾಯಿಂಟ್’ನ ನಿರ್ದೇಶಕ ಬಿ.ಕೆ ಸಾಹು (ಬಲಗಡೆ) ಮತ್ತು ಶಿವರಾಂ ಹೆಬ್ಬಾರ್ ಚರ್ಚಿಸಿದರು. ವಿ.ವಿ ಜೋತ್ಸ್ನಾ ರೆಡ್ಡಿ ಮತ್ತು ಪಿ. ಮಣಿವಣ್ಣನ್ ಇದ್ದರು - –ಪ್ರಜಾವಾಣಿ ಚಿತ್ರ   

ಬೆಂಗಳೂರು: ಗೋವಾ ಮತ್ತು ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕದ ಕಾರ್ಮಿಕರ ರಕ್ಷಣೆಗೆ ಶೀಘ್ರದಲ್ಲೇ ಹೊಸ ಯೋಜನೆ ರೂಪಿಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಹೇಳಿದರು.

ಕಾರ್ಮಿಕ ಇಲಾಖೆಯು ಕೆಲಸದ ಸ್ಥಳವನ್ನು ಅಪಘಾತ ಮುಕ್ತವಾಗಿಸುವ ವಿಷಯವಾಗಿ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಕಟ್ಟಡ ಕಾರ್ಮಿಕ ವಲಯವನ್ನು ಅಪಘಾತ ಮುಕ್ತ ವಲಯವನ್ನಾಗಿ ಮಾಡಲು ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

‘ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ದೊಡ್ಡದಿದೆ. ಅವರ ರಕ್ಷಣೆಗೆ ಆದ್ಯತೆ ನೀಡಬೇಕಾಗಿದೆ. ಕಾರ್ಮಿಕರಿಗೆ ಕೆಲಸದ ಬಗ್ಗೆ ಬದ್ಧತೆ ಇದ್ದಾಗ ಮಾತ್ರ ಅವರ ಹೋರಾಟಕ್ಕೆ ಅರ್ಥ ಬರುತ್ತದೆ’ ಎಂದರು.

ADVERTISEMENT

‘ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಸಂಭವಿಸುವ ಅವಘಡಗಳಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಬೇಕು ಎಂಬ ನಿಯಮವಿದೆ. ಬಹಳಷ್ಟು ಪ್ರಕರಣಗಳಲ್ಲಿ ಇದು ಕಾರ್ಯರೂಪಕ್ಕೆ ಬರುತ್ತಿಲ್ಲ. ಪರಿಹಾರ ಕಲ್ಪಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಕಾರ್ಮಿಕ ಮುಖಂಡರು ಒತ್ತಾಯಿಸಿದರು.

‘ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.

ಸಮ್ಮೇಳನದಲ್ಲಿ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಪಿ.ಮಣಿವಣ್ಣನ್, ರಾಜ್ಯ ಕಟ್ಟಡ ನಿರ್ಮಾಣ ಕಲ್ಯಾಣ ಮಂಡಳಿ ಕಾರ್ಯದರ್ಶಿ ಜೋತ್ಸ್ನಾ ರೆಡ್ಡಿ, ಕಾರ್ಮಿಕ ಇಲಾಖೆ ಹೆಚ್ಚುವರಿ ಆಯುಕ್ತ ಡಾ.ಜಿ.ಮಂಜುನಾಥ್, ಬಿ.ಕೆ.ಸಾಹು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.